ಶಿವಮೊಗ್ಗ: ವಿಶ್ವ ಆಹಾರ ದಿನದ ಪ್ರಯುಕ್ತ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸಭಾಂಗಣದಲ್ಲಿ ಆಯೋಜಿಸಿದ್ದ ಆಹಾರ ತಯಾರಿಸುವ ಸ್ಪರ್ಧೆಯಲ್ಲಿ ವೈಯುಕ್ತಿಕ ವಿಭಾಗದಲ್ಲಿ ವಾಣಿಭಟ್ ಪ್ರಥಮ, ಚಂದ್ರಕಲಾ ದ್ವಿತೀಯ ಹಾಗೂ ಯಶೋಧ ಶೇಖರ್ ತೃತೀಯ ಸ್ಥಾನ ಪಡೆದು ವಿಜೇತರಾಗಿದ್ದಾರೆ.
ಸಿರಿಧಾನ್ಯ ಆಹಾರ ತಯಾರಿಕೆಯ ಸಂಘ ಸಂಸ್ಥೆ ವಿಭಾಗದಲ್ಲಿ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕ ಪ್ರಥಮ ಸ್ಥಾನ, ಪರೋಪಕಾರಂ ದ್ವಿತೀಯ ಸ್ಥಾನ ಹಾಗೂ ರೋಟರಿ ಕ್ಲಬ್ ಸೆಂಟ್ರಲ್ ತೃತೀಯ ಸ್ಥಾನ ಪಡೆದುಕೊಂಡಿತು. ತರುಣೋದಯ ಘಟಕದ ಪರವಾಗಿ ಚೇರ್ಮನ್ ಎಸ್.ಎಸ್.ವಾಗೇಶ್ ಬಹುಮಾನ ಸ್ವೀಕರಿಸಿದರು.
ತೀರ್ಪುಗಾರ್ತಿ ಡಾ. ನಂದಿನಿ ನಾಗರಾಜ್ ಮಾತನಾಡಿ, ಕಾಯಿಲೆಗಳು ಹೆಚ್ಚಾಗುತ್ತಿರುವ ಘಟ್ಟದಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ವಹಿಸುವುದು ಅತ್ಯಂತ ಅವಶ್ಯಕ. ಮಾತ್ರೆಗಳ ಬಳಕೆ ಇಲ್ಲದ ಮನೆಗಳೇ ಇಲ್ಲ ಎನ್ನುವ ಪರಿಸ್ಥಿತಿ ಇದೆ. ಸಿರಿಧಾನ್ಯದ ಬಳಕೆಯು ಆರೋಗ್ಯಕರ ಜೀವನಶೈಲಿಗೆ ನೆರವಾಗಲಿದೆ ಎಂದು ಹೇಳಿದರು.
ಆಹಾರ ಇಲಾಖೆ ಅಧಿಕಾರಿ ಸೋಮಶೇಖರ್ ಮಾತನಾಡಿ, ಇಂದಿನ ಹೊಸ ಯುಗದ ಕಾಯಿಲೆಗೆ ಭಾರತೀಯ ಪಾರಂಪರಿಕ ಪದ್ಧತಿಯಿಂದಲೇ ಪರಿಹಾರ ಸಿಗಬೇಕಾಗಿದೆ. ಅದರಲ್ಲಿ ನಮ್ಮ ದೇಸಿ ಪದ್ಧತಿ ಸಿರಿಧಾನ್ಯ ಬಳಕೆ ಮಹತ್ತರವಾಗಿ ಇದೆ ಎಂದು ತಿಳಿಸಿದರು.
ವೈದ್ಯೆ ಪಲ್ಲವಿ ಮಾತನಾಡಿ, ಆಯುರ್ವೇದದಲ್ಲಿ ಸಿರಿಧಾನ್ಯವನ್ನು ಕ್ಷುದ್ರ ಧಾನ್ಯ ಎನ್ನುತ್ತಾರೆ. ಈಗ ಅದರ ಮಹತ್ವ ಅರಿವಾಗಿದ್ದು, ಇಂದು ಅತೀ ಪೌಷ್ಟಿಕತೆಯಿಂದ ಉಂಟಾಗುವ ಸಮಸ್ಯೆಗಳೇ ಹೆಚ್ಚು. ಮಧುಮೇಹ, ಬಂಜೆತನ, ಹೃದ್ರೋಗ, ರಕ್ತದೊತ್ತಡ ಎಲ್ಲವೂ ಅತಿಪೋಷಣೆ ಇಂದ. ಆದ್ದರಿಂದ ಸಿರಿ ಧಾನ್ಯವನ್ನು ಬಳಸಿ ಪೌಷ್ಟಿಕತೆಯನ್ನು ಸಮತೋಲನದಲ್ಲಿ ಇರಿಸಿಕೊಳ್ಳಲು ಸಾಧ್ಯ ಮತ್ತು ವ್ಯಾಯಾಮ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ ಎಂದರು.
ಉದ್ಯಮಿ ಚಂದ್ರಹಾಸ ಶೆಟ್ಟಿ ಮಾತನಾಡಿ, ಸಿರಿಧಾನ್ಯದ ಬಗ್ಗೆ ಹೆಚ್ಚು ಅರಿವು ಮೂಡಿಸುವ ಅಗತ್ಯತೆ ಇದೆ. ಅದರಲ್ಲಿ ಅಡಗಿರುವ ಆರೋಗ್ಯದ ಗುಟ್ಟು ಜನಸಾಮಾನ್ಯರಿಗೆ ತಿಳಿಸಲು ಇಂತಹ ಕಾರ್ಯಕ್ರಮ ಅವಶ್ಯಕ ಎಂದು ಸಲಹೆ ನೀಡಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ ಹೋಬಳಿದಾರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮಾಜಿ ಅಧ್ಯಕ್ಷ ಡಿ.ಎಂ.ಶಂಕರಪ್ಪ, ಸಹ ಕಾರ್ಯದರ್ಶಿ ಜಿ. ವಿಜಯಕುಮಾರ್, ನಿರ್ದೇಶಕ ಗಣೇಶ್ ಅಂಗಡಿ, ಸವಿತ ಮಾಧವ, ಪ್ರದೀಪ್ ಎಲಿ, ಮಂಜೇಗೌಡ, ರಮೇಶ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.