ಬೆಂಗಳೂರು: ರಾಜ್ಯದಲ್ಲಿ ವಿಪಕ್ಷನಾಯಕರಾಗಿ ಆರ್.ಅಶೋಕ್ ಆಯ್ಕೆಯಾಗಿದ್ದು ಉತ್ತರ ಕರ್ನಾಟಕಕ್ಕೆ ವಿಪಕ್ಷ ಸ್ಥಾನ ಸಿಗಬೇಕು ಎಂದು ಆಗ್ರಹಿಸಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ನಿನ್ನೆ ಸಭೆಯಿಂದ ಹೊರ ನಡೆದಿದ್ದರು.
ಈ ಸಂಬಂಧ ಮಾತನಾಡಿರುವ ವಿಪಕ್ಷ ನಾಯಕ ಆರ್.ಅಶೋಕ್, ಈಗಾಗಲೇ ಉತ್ತರ ಕರ್ನಾಟಕದ ಭಾಗದ ಇಬ್ಬರು ಸಿಎಂ ಆಗಿದ್ದಾರೆ. ಈಗಾಗಲೇ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಕರಾವಳಿ ಭಾಗದಿಂದ ಸದಾನಂದಗೌಡರು ಸಿಎಂ ಆಗಿದ್ದರು. ಮಧ್ಯ ಕರ್ನಾಟಕದಿಂದ ಯಡಿಯೂರಪ್ಪ ಸಿಎಂ ಆಗಿದ್ದರು. ಹಳೇ ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ಸಿಕ್ಕಿದ್ದು ಇದೇ ಮೊದಲು. ಸಿಎಂ ಆಗಿದ್ದು ಉತ್ತರ ಕರ್ನಟಕದವರೇ ಹೆಚ್ಚು ಎಂದರು.
ಎಲ್ಲರ ಜೊತೆಗೂ ಮಾತನಾಡಿ ಅಸಮಾಧಾನ ಸರಿಪಡಿಸುತ್ತೇವೆ. ಭಿನ್ನಾಭಿಪ್ರಾಯ ಇರುವವರ ಜೊತೆ ಮಾತನಾಡಿ ಸರಿಪಡಿಸುತ್ತೇವೆ ಎಂದು ಆರ್.ಅಶೋಕ್ ತಿಳಿಸಿದರು.