ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಸಂಪೂರ್ಣ ಭರ್ತಿಯಾಗಿದ್ದು, ಮಂತ್ರಿಗಿರಿ ಸಿಗದ ಆನೇಕ ಶಾಸಕರು ಅಸಮಾಧಾನಗೊಂಡಿದ್ದು, ಈ ಅಸಮಾಧಾನವನ್ನ ತಣಿಸಲು ನಿಗಮಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ ಮುಂದಾಗಿದೆ.
ಸಚಿವ ಸ್ಥಾನ ಸಿಗದ ಹಿನ್ನೆಲೆ ಕೆಲವರು ನಿಗಮ ಮಂಡಳಿ ಅಧ್ಯಕ್ಷರನ್ನಾಗಿಯಾದರೂ ಆಯ್ಕೆ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಪಕ್ಷ ಸಂಘಟನೆಗೆ ಅನುಕೂಲವಾಗುವಂತೆ ನಿಗಮ, ಮಂಡಳಿಗೆ ಶಾಸಕರನ್ನು ನೇಮಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸುಮಾರು ನಾಲ್ಕು ತಾಸು ಸಭೆ ನಡೆಸಿದ್ದರು. ಸಭೆಯಲ್ಲಿ 20 ಶಾಸಕರಿಗೆ ಆಯಕಟ್ಟಿನ ನಿಗಮ ಮತ್ತು ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲು ಉಭಯ ನಾಯಕರು ಒಮ್ಮತಕ್ಕೆ ಬಂದಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ನಿಗಮ ಮಂಡಳಿಗಳಿಗೆ ಅಧ್ಯಕ್ಷರ ಆಯ್ಕೆ ವಿಚಾರ ಕುರಿತು ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್, ನಿಗಮ ಮಂಡಳಿ ನೇಮಕ ಬಗ್ಗೆ ನಿನ್ನೆ ಒಂದು ಸುತ್ತು ಚರ್ಚೆ ಆಗಿದೆ. ಸಿಎಂ, ನಾನು ಒಂದು ಸುತ್ತು ಮಾತುಕತೆ ನಡೆಸಿದ್ದೇವೆ. ಮೊದಲು ಯಾರು ಯಾರಿಗೆ ಕೊಡಬೇಕೆಂದು ನಾವು ಪಟ್ಟಿ ಮಾಡಿದ್ದೇವೆ. ಹಿರಿಯ ನಾಯಕರಿಗೆ ಅವಕಾಶ ಕೊಡಬೇಕಿದೆ. ನಮ್ಮ ಪಕ್ಷದ ರಾಜ್ಯ ಉಸ್ತುವಾರಿಗಳು ಕರ್ನಾಟಕಕ್ಕೆ ಬಂದಾಗ ನಿಗಮ ಮಂಡಳಿ ಪಟ್ಟಿ ಬಿಡುಗಡೆ ಆಗುತ್ತೆ ಎಂದು ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ 25 ಶಾಸಕರ ಪಟ್ಟಿ ಸಿದ್ದಪಡಿಸಿಸಿದ್ದಾರೆ. ಹೈಕಮಾಂಡ್ಗೆ ಪಟ್ಟಿ ಸಲ್ಲಿಸಿ ಮುಂದಿನ ವಾರಾಂತ್ಯದೊಳಗೆ ನೇಮಕಾತಿ ಮಾಡಲಾಗುವುದು ಎಂದರು.
ನಿಗಮ ಮಂಡಳಿಗೆ ನೇಮಕವಾಗುವ ಶಾಸಕರ ಹೆಸರುಗಳು ಹೀಗಿದೆ.
ಬಸವರಾಜ ರಾಯರೆಡ್ಡಿ, ಬಿ.ಕೆ.ಸಂಗಮೇಶ್, ವಿನಯ್ ಕುಲಕರ್ಣಿ, ನರೇಂದ್ರಸ್ವಾಮಿ, ವಿಜಯಾನಂದ ಕಾಶಪ್ಪನವರ್, ಕೋಲಾರ ನಂಜೇಗೌಡ, ಬಿ.ಆರ್. ಪಾಟೀಲ್,ಎಂ.ವೈ.ಪಾಟೀಲ್, ಬಿ.ಜಿ ಗೋವಿಂದಪ್ಪ, ರಾಘವೇಂದ್ರ ಹಿಟ್ನಾಳ್, ಬಂಗಾರಪೇಟೆ ನಾರಾಯಣಸ್ವಾಮಿ, ಪ್ರಸಾದ್ ಅಬ್ಬಯ್ಯ, ಎ.ಆರ್. ಕೃಷ್ಣಮೂರ್ತಿ, ಶಿವಲಿಂಗೇಗೌಡ, ರೂಪ ಶಶಿಧರ್, ರಾಜೇಗೌಡ, ರಘುಮೂರ್ತಿ, ಗಣೇಶ್ ಹುಕ್ಕೇರಿ, ಅನಿಲ್ ಚಿಕ್ಕಮಾದು ಮೊದಲ ಹಂತದಲ್ಲಿ ನಿಗಮ ಮಂಡಳಿಗೆ ನೇಮಕಗೊಳ್ಳುತ್ತಾರೆ ಎನ್ನಲಾಗಿದೆ.