ಕನ್ನಡಿಗರ ಪ್ರಜಾನುಡಿ
ಚಿಕ್ಕಮಗಳೂರುಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳು

ದಾರ್ಶನಿಕರ  ವಿಚಾರಧಾರೆಗಳು ಒಂದು ಧರ್ಮ, ಜಾತಿಗೆ ಸೀಮಿತವಲ್ಲ : ಶಾಸಕ ಹೆಚ್.ಡಿ. ತಮ್ಮಯ್ಯ

ಚಿಕ್ಕಮಗಳೂರು: ದಾರ್ಶನಿಕರು, ಮಹಾಪುರುಷರು ಒಂದು ಧರ್ಮಕ್ಕೆ  ಸೀಮಿತರಾದವರಲ್ಲ.  ಸರ್ವರನ್ನು ಸಮಾನವಾಗಿ ಕಾಣುವ ಅವರ ವಿಚಾರಧಾರೆಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ಅವರು ಇಂದು ಕುವೆಂಪು ಕಲಾಮ ಂದಿರದಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಭಕ್ತ ಕನಕದಾಸರ ೫೩೬ ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಮಹಾನ್ ದಾರ್ಶನಿಕರು ಹಾಕಿಕೊಟ್ಟಿರುವ ಹೆಜ್ಜೆ ಗುರುತುಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.

ಕಳೆದ ೧೩ ವರ್ಷದಿಂದ ರಾಜ್ಯಾದ್ಯಂತ ಕನಕ ಜಯಂತಿ ಆಚರಿಸುತ್ತಿದ್ದೇವೆ. ಜಿಲ್ಲೆಯಲ್ಲಿ ಅದ್ದೂರಿಯಾಗಿ ನಡೆಯುವ ಜಯಂತಿಗಳಲ್ಲಿ  ಕನಕಜಯಂತಿ ಕೂಡ ಒಂದು. ಬುದ್ದ, ಬಸವ, ಅಂಬೇಡ್ಕರ್, ಕನಕದಾಸರಂತಹ  ಮಹನೀಯರ  ತತ್ವಾದರ್ಶಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು.

ಹಾವೇರಿ ಜಿಲ್ಲೆ, ಶಿಗ್ಗಾವಿ ತಾಲೂಕು, ಬಾಡಗ್ರಾಮ ಕನಕರು ಹುಟ್ಟಿದ ಊರು. ಬಹಳ ವರ್ಷ  ಬೀರಪ್ಪನಾಯಕ ಮತ್ತು ಬಚ್ಚಮ್ಮ ದಂಪತಿಗೆ ಮಕ್ಕಳಿರಲಿಲ್ಲ. ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತ ಮೇಲೆ ತಿಮ್ಮಪ್ಪನಾಯಕನ(ಕನಕ) ಜನನವಾಯಿತು. ವಿಜಯನಗರ ಸಾಮ್ರಾಜ್ಯದಲ್ಲಿ ಶ್ರದ್ಧೆ, ಶೌರ್ಯ, ಬದ್ದತೆ ನೋಡಿ ಬೀರಪ್ಪನಾಯಕನಿಗೆ ೭೮ ಹಳ್ಳಿಗಳ ಉಸ್ತುವಾರಿ ನೀಡಲಾಗಿತ್ತು. ಮುಂದೆ ತಿಮ್ಮಪ್ಪನೂ ಕೂಡ ದಂಡನಾಯಕನಾಗಿ ಶೌರ್ಯ ಮೆರೆಯುತ್ತಾನೆ. ದಾಸ ಕೀರ್ತನೆಗಳು ಸಾಕಷ್ಟಿವೆ. ಆದರೆ, ಶೋಷಿತವರ್ಗದಿಂದ ಬಂದು ಕೀರ್ತನೆ ರಚಿಸಿ ಹಾಡಿದ್ದು ಕನಕದಾಸರು ಮಾತ್ರ ಎಂದು ಬಣ್ಣಿಸಿದರು.

ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮೀನಾನಾಗರಾಜ್ ಉದ್ಘಾಟಿಸಿ ಮಾತನಾಡಿ, ಸತ್ಯವಂತರ ಸಂಗವಿರಲು ತೀರ್ಥವೇತಕೆ, ನಿತ್ಯ ಅನ್ನದಾನವಿರಲು ಭಯವೇತಕೆ ಎಂದು ಹೇಳಿದ್ದ ಕನಕದಾಸರು ಜೀವನದಲ್ಲಿ ಬಾಳುವೆ ಮುಖ್ಯವೇ ವಿನಾ, ಜಾತಿ ಮುಖ್ಯ ಅಲ್ಲ ಎಂದು ಸಾರಿದವರು ಕನಕರು ಎಂದರು.

೧೫-೧೬ನೇ ಶತಮಾದಲ್ಲೇ ದಾಸಪಂಥದಲ್ಲಿ ಹರಿದಾಸರಲ್ಲಿ ಕನಕರ ಹೆಸರು ಅವಿಸ್ಮರಣೀಯ. ಜನಸಾಮನ್ಯರೊಂದಿಗೆ ಬೆರೆತು ಜನರ ದನಿಯಾದ ಮಹಾನುಭಾವ. ತಮ್ಮ ತತ್ವ ಸಿದ್ದಾಂತಗಳನ್ನು ಆಡುಭಾಷೆಯಲ್ಲಿ ಜನರಿಗೆ ತಿಳಿಸಿದವರು. ಭಕ್ತನಿಗೆ ಜಾತಿ ಇಲ್ಲನೀತಿ ಮುಖ್ಯ ಎಂದು ಸಾರಿದವರು. ಸಮಾಜದಲ್ಲಿನ ತಾರತಮ್ಯ ವ್ಯವಸ್ಥೆ ವಿರುದ್ಧ ಸೆಟೆದು ನಿಂತವರು. ಜಾತಿಪದ್ದತಿ, ತಾರತಮ್ಯದಿಂದ  ನೊಂದು ವ್ಯವಸ್ಥೆ ವಿರುದ್ಧ ಪ್ರತಿಕ್ರಿಯಿಸಿದವರು ಭಕ್ತ ಕನಕದಾಸ ಶ್ರೇಷ್ಠರು ಎಂದು ಹೇಳಿದರು.

ಮನುಷ್ಯನು ಸದಾ ಸನ್ಮಾರ್ಗದಲ್ಲಿ ಬಾಳಬೇಕು. ನಿತ್ಯ ಕಲಿಯಲು, ಭಕ್ತಿ ಮಾರ್ಗ ಅನುಸರಿಸಲು ಯಾವುದೇ ಜಾತಿ ಕಟ್ಟುಪಾಡುಗಳಿಲ್ಲ. ವಿಶಾಲ ಮನಸ್ಸಿನಿಂದ ಪೂಜಿಸಿದರೆ ದೇವರು ಎಲ್ಲರಿಗೂ  ಒಬ್ಬನೇ ಎಂದು ಕನಕರು  ಸಾರಿದ್ದಾರೆ. ಕನಕರ  ಜೀವನವೇ ಉತ್ಸಾಹದ ಚಿಲುಮೆ. ಮನಸ್ಸಿಗೆ ಚೈತನ್ಯ ಸ್ಪೂರ್ತಿ ತುಂಬುತ್ತದೆ. ಅಂತಹ ಮಹನೀಯರ ಜೀವನಾದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.

ಸಾಹಿತಿ ನಟರಾಜ್ ಬೂದಾಳ್ ಪ್ರಧಾನ ಉಪನ್ಯಾಸ ನೀಡಿ, ಸರಕಾರ ಇತ್ತೀಚೆಗೆ ಆಚರಣೆಗೆ ತಂದಿರುವ ಜಯಂತಿಗಳಲ್ಲಿ  ಶೇ.೯೯ ಜಯಂತಿಗಳು ಶೂದ್ರ ಸಮುದಾಯದ ಮಹನೀಯರ ಜಯಂತಿಗಳಾಗಿವೆ. ಇವರೆಲ್ಲಾ ಹಿಂದೆ ಎಲ್ಲಿ ಹೋಗಿದ್ದರೂ ಎಂದು ಆತ್ಮವಾಲೋಕನ ಅಗತ್ಯತೆ ಇದೆ. ಕನಕದಾಸರು ಇದ್ದ ಅಕಾರ ತ್ಯಜಿಸಿ ಜನಸಾಮಾನ್ಯರೊಳಗೆ ಹೋದ ದಾರ್ಶನಿಕ. ಮಹಾಕವಿಯ ದುಡಿಮೆಯ ಫಲ ನಮಗೆ ಧಕ್ಕಿದೆಯೇ? ಕನಕರ ಕೀರ್ತನೆಗಳು ದೇವಾಲಯ ಪ್ರವೇಶಿಸಿವೆಯೇ  ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಕನಕದಾಸರು ಎಚ್ಚರದ  ಪ್ರತೀಕ. ಹೀಗಾಗಿ  ವಿವೇಕದ ಎಚ್ಚರ ಸದಾ ನಮ್ಮಲ್ಲಿರಬೇಕು ಎಂದು ಜಾಗೃತಿಗೊಳಿಸಿದರು.

ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ, ಎಸ್ಪಿ ವಿಕ್ರಂ ಅಮಟೆ, ಜಿಪಂ ಸಿಇಓ ಡಾ.ಗೋಪಾಲಕೃಷ್ಣ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಂ.ಮಂಜುನಾಥ, ಪ್ರಧಾನ ಕಾರ್ಯದರ್ಶಿ ಶಾಂತೇಗೌಡ, ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಮಾಜಿ ಜಿ.ಪಂ ಅಧ್ಯಕ್ಷ ಎ.ಎನ್.ಮಹೇಶ್, ಕುರುಬರ ಸಂಘದ ತಾಲೂಕು ಅಧ್ಯಕ್ಷ ಡಿ.ಎಸ್ ಚಂದ್ರೇಗೌಡ, ಡಿ.ಸಿ.ಪುಟ್ಟೇಗೌಡ, ಈಶ್ವರಹಳ್ಳಿ ಮಹೇಶ್, ಹೆಚ್.ಪಿ ಮಂಜೇಗೌಡ, ಕೆಂಗೇಗೌಡ, ಚಂದ್ರಪ್ಪ, ಗುರುಮಲ್ಲಪ್ಪ, ಸುಜಾತ ಮತ್ತಿತರರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದೇರ್ಶಕ ಡಾ.ಸಿ.ರಮೇಶ್ ಸ್ವಾಗತಿಸಿ, ರೂಪನಾಯ್ಕ್ ನಿರೂಪಿಸಿದರು.
ಅದ್ದೂರಿ ಮೆರವಣಿಗೆ

ಇದಕ್ಕೂ ಮುನ್ನ ತಾಲೂಕು ಕಚೇರಿ ಆವರಣದಿಂದ ಭಕ್ತಶ್ರೇಷ್ಠ ಕನಕದಾಸರ ಭಾವಚಿತ್ರದೊಂದಿಗೆ ಮೆರವಣಿಗೆ ಪ್ರಾರಂಭಗೊಂಡು ಆಕರ್ಷಕ ಜಾನಪದ ಕಲಾ ತಂಡಗಳು, ಹಳ್ಳಿ ವಾದ್ಯ ಮೆರವಣಿಗೆಗೆ ಮೆರಗು ನೀಡಿತ್ತು. ಎಂ.ಜಿ ರಸ್ತೆ ಮೂಲಕ ಸಾಗಿದ ಮೆರವಣಿಗೆ ಕುವೆಂಪು ಕಲಾಮಂದಿರ ತಲುಪಿತು.
ಇಂದು ಬೆಳಗ್ಗೆಯಿಂದಲೇ ೫೩೬ನೇ ಕನಕ ಜಯಂತಿ ಆಚರಣೆಗೆ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು ಕನಕದಾಸರ ಭಾವಚಿತ್ರ ಇರುವ ರುಮಾಲನ್ನು ಧರಿಸಿ ಅಪಾರ ಸಂಖ್ಯೆಯಲ್ಲಿ ಸೇರುವ ಮೂಲಕ ಕನಕದಾಸರ ಜಯಂತಿಯನ್ನು ಅರ್ಥಪೂರ್ಣಗೊಳಿಸಿದರು.

Related posts

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ  ವಾರ್ಷಿಕ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ.

ಹೆಸರಾಯಿತು ಕರ್ನಾಟಕ-50 ಸಂಭ್ರಮವನ್ನು ಐದು ವಿಶೇಷ ಪ್ರಶಸ್ತಿಗಳ ಮೂಲಕ ಆಚರಣೆ-ನಾಡೋಜ ಡಾ.ಮಹೇಶ ಜೋಶಿ

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಡಿ.ಕೆ ಶಿವಕುಮಾರ್ ಆಪ್ತ ಆರ್.ಎಂ ಮಂಜುನಾಥ್ ಗೌಡ ಅವರ ನಿವಾಸದ ಮೇಲೆ ಇಡಿ ದಾಳಿ.