ನವದೆಹಲಿ: ದೇಶದಲ್ಲಿ ಪೆಟ್ರೋಲ್ ,ಡೀಸೆಲ್ ಅಡುಗೆ ಎಣ್ಣೆ, ಅಡುಗೆ ಅನಿಲದ ಬೆಲೆ ಏರಿಕೆಯಾಗಿದ್ದು ಜನರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಲೆ ಏರಿಕೆಯಿಂದ ತತ್ತಿರಿಸಿರುವ ದೇಶದ ಜನರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ.
ಹೌದು, ಪೆಟ್ರೋಲ್ ,ಡೀಸೆಲ್, ಅಡುಗೆ ಎಣ್ಣೆ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ದಾಖಲೆ ಮಟ್ಟಕ್ಕೆ ಜಿಗಿದ ಚಿಲ್ಲರೆ ಹಣದುಬ್ಬರ ನಿಯಂತ್ರಿಸಲು ಶೀಘ್ರ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 2024ರ ಸಾರ್ವತ್ರಿಕ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಒಂದು ಲಕ್ಷ ಕೋಟಿ ರೂ. ಮರು ಹೊಂದಾಣಿಕೆಗೆ ಚಿಂತನೆ ನಡೆಸಿದೆ.
ಪೆಟ್ರೋಲ್, ಡೀಸೆಲ್, ಗೋಧಿ, ಅಡುಗೆ ಎಣ್ಣೆ ದರ ಕಡಿಮೆಯಾಗುವ ಸಾಧ್ಯತೆ ಇದೆ. ಚಿಲ್ಲರೆ ಹಣದುಬ್ಬರ ನಿಯಂತ್ರಣಕ್ಕೆ ಪೆಟ್ರೋಲ್, ಡೀಸೆಲ್ ಮೇಲಿನ ತೆರೆಗೆ ಇಳಿಕೆ ಸೇರಿ ಅನೇಕ ಕ್ರಮಗಳನ್ನು ಕೇಂದ್ರ ಸರ್ಕಾರ ಪ್ರಕಟಿಸುವ ಸಾಧ್ಯತೆ ಇದೆ. ವಿವಿಧ ಸಚಿವಾಲಯಗಳಿಗೆ ಬಜೆಟ್ ನಲ್ಲಿ ಹಂಚಿಕೆಯಾದ ಅನುದಾನ ಮರು ಹೊಂದಾಣಿಕೆ ಮಾಡಿ ಒಂದು ಲಕ್ಷ ಕೋಟಿ ರೂ.ಗಳನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ.
ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಕೆ, ಗೋಧಿ, ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಕಡಿತ ಮಾಡುವ ಮೂಲಕ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳಲಾಗುವುದು. ಸಗಟು ವ್ಯಾಪಾರಿಗಳ ಆಹಾರ ಪದಾರ್ಥ ದಾಸ್ತಾನಿನ ಮೇಲೆ ಗರಿಷ್ಠ ಮಿತಿ ನಿಗದಿ ಮಾಡಲಾಗುವುದು. ಬಡವರಿಗೆ ವಸತಿ ಮತ್ತು ಕಡಿಮೆ ದರದಲ್ಲಿ ಸಾಲ ನೀಡಿಕೆ ಮಾಡುವ ಚಿಂತನೆ ಇದೆ.
ಈಗಾಗಲೇ ಹಲವು ತಳಿಯ ಅಕ್ಕಿನ ಮೇಲೆ ಸರ್ಕಾರ ನಿರ್ಬಂಧ ಹೇರಿದ್ದು, ಹಲವು ಆಹಾರ ಪದಾರ್ಥಗಳ ದಾಸ್ತಾನಿಗೆ ಮಿತಿ ಹೇರಿದೆ. ಕಳೆದ 15 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಹಣದುಬ್ಬರ ಜಿಗಿತವಾಗಿದ್ದು, ಆಹಾರ ಪದಾರ್ಥ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಲೋಕಸಭೆ ಮತ್ತು ಅನೇಕ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಮತದಾರರನ್ನು ಗೆಲ್ಲುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಬೆಲೆ ಏರಿಕೆ ಜನಾಕ್ರೋಶವಾಗಿ ಮಾರ್ಪಟ್ಟು ಕರ್ನಾಟಕದಲ್ಲಿ ಎದುರಿಸಿದ ಮುಖಭಂಗವನ್ನು ತಪ್ಪಿಸಿಕೊಳ್ಳುವ ಉದ್ದೇಶವೂ ಇದೆ.
ಅಲ್ಲದೇ, ಹಲವು ರಾಜ್ಯಗಳಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಕಾರಣದಿಂದ ಬೆಳೆ ನಷ್ಟವಾಗಿ ಆಹಾರ ಪದಾರ್ಥಗಳು ದುಬಾರಿಯಾಗಿವೆ. ಇವೆಲ್ಲ ಕಾರಣಗಳಿಂದಾಗಿ ಕೇಂದ್ರ ಸರ್ಕಾರ ಬೆಲೆ ಇಳಿಕೆಗೆ ಚಿಂತನೆ ನಡೆಸಿದೆ.