ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ವಿದ್ಯಾರ್ಥಿಗಳ ಯೋಚನೆ ಆಲೋಚನೆಗಳು ದೂರದೃಷ್ಟಿಯಿಂದ ಇರಬೇಕು-ಡಾ.ಆನಂದಕುಮಾರ್ ತ್ರಿಪಾಠಿ

ಶಿವಮೊಗ್ಗ: ವಿದ್ಯಾರ್ಥಿಗಳ ಯೋಚನೆ ಆಲೋಚನೆಗಳು ದೂರದೃಷ್ಟಿಯಿಂದ ಇರಬೇಕು ಎಂದು ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಆನಂದಕುಮಾರ್ ತ್ರಿಪಾಠಿ ಹೇಳಿದರು.
ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ, ರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನಲ್ಲಿ ಆಯೋಜಿಸಿದ್ದ ಪದವಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸುತ್ತ ಇರುವ ಎಲ್ಲಾ ಒಳ್ಳೆಯ ಜ್ಞಾನಗಳನ್ನು ಪಡೆದುಕೊಳ್ಳಬೇಕು ಜ್ಞಾನ ಎಂಬುದು ಕೇವಲ ಓದಿನಿಂದ ಮಾತ್ರ ಬರುವುದಿಲ್ಲ. ಅದು ಅರಿವಿನ ವಿಸ್ತಾರವಾಗಿದೆ. ನಮ್ಮ ಸುತ್ತಲಿನ ಅವಕಶಗಳನ್ನು ಬಳಸಿಕೊಳ್ಳಬೇಕು.ಸಮಯ ಎಂಬುದು ವಾಪಾಸ್ ಬರುವುದಿಲ್ಲ. ಶ್ರದ್ಧೆ, ಆತ್ಮವಿಶ್ವಾಸದಿಂದ ಮಾತ್ರ ಒಳ್ಳೆಯದನ್ನು ಸಾಧಿಸಲು ಸಾಧ್ಯವಾಗುತ್ತದೆ. ಕರ್ತವ್ಯಗಳ ಕಡೆ ಗಮನ ಕೊಡಿ ಎಂದರು.
ರಾಷ್ಟ್ರೀಯ ರಕ್ಷಾ ವಿವಿ ಶಿವಮೊಗ್ಗದಲ್ಲಿ ಪ್ರಾರಂಭವಾಗಿರುವುದು ಸಂತೋಷದ ವಿಷಯ. ಇದು ಭಾರತ ಸರ್ಕಾರದ ರಾಷ್ಟ್ರಿಯ ಭದ್ರತಾ ಸಂಸ್ಥೆ ಮತ್ತು ಗೃಹ ಮಂತ್ರಾಲಯದಿಂದ ಸ್ಥಾಪಿತವಾಗಿದ್ದು, ಇಲ್ಲಿ ಡಿಪ್ಲವೋ ಇನ್ ಪೊಲೀಸ್ ಸೈನ್ಸ್, ಸೆಕ್ಯುರಿಟಿ ಮ್ಯಾನೇಜ್ ಮೆಂಟ್ ಸೇರಿದಂತೆ ಹಲವ ಕೋರ್ಸುಗಳವೆ. ಸಂಶೋಧನೆ ಆಧಾರಿತ ಶೈಕ್ಷಣಿಕ ತರಬೇತಿ ಇದಾಗಿದ್ದು, ಭದ್ರತಾ ವಲಯದಲ್ಲಿ ವೃತ್ತಿ ಅವಕಾಶ ಮತ್ತು ಉದ್ಯೋಗ ಸಿಗುತ್ತದೆ. ಇದೊಂದು ಅತ್ಯುತ್ತಮ ಕೇಂದ್ರವಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದರು.
ಹಳೆಯ ವಿದ್ಯಾರ್ಥಿ ಸಂಘದ ಸಂಚಾಲಕ ಹಾಗೂ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್. ಮಂಜುನಾಥ್ ಪ್ರಾಸ್ತಾವಿಕ ಮಾತನಾಡಿ, ಹಳೆಯ ವಿದ್ಯಾರ್ಥಿಗಳ ಸಂಘದ ಪಾತ್ರ ಬಹಳ ಮುಖ್ಯವಾದುದು. ಇದು ಸಮಾಜ ಮತ್ತು ಶೈಕ್ಷಣಿಕದ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ಕಾರ್ಯಕ್ರಮಗಳನ್ನು ನೀಡುವಲ್ಲಿ ಯಶಸ್ವಿಯಾಗುತ್ತದೆ ಹಿರಿಯರ ಅನುಭವಗಳನ್ನು ಕಿರಿಯರಿಗೆ ನೀಡಲು ಸಹಾಯಕವಾಗುತ್ತದೆ ಸಹ್ಯಾದ್ರಿ ಕಾಲೇಜಿನಲ್ಲಿ ಮುಂದೆಯೂ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಬೆಂಗಳೂರಿನ ಮಲ್ನಾಡ್ ಕೋಚಿಂಗ್ ಸೆಂಟರ್‍ನ ತೀರ್ಥಹಳ್ಳಿ ಕೇಶವಮೂರ್ತಿ ಮಾತನಾಡಿ, ಸರ್ಕಾರಿ ಕಾಲೇಜುಗಳೆಂದರೆ ನಿರಾಸಕ್ತಿ ಬೇಡ. ಸಹ್ಯಾದ್ರಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳಲ್ಲಿ ನಾನೂ ಒಬ್ಬ. ಹಳೆಯ ವಿದ್ಯಾರ್ಥಿಗಳ ಜೊತೆ ಸಂಪರ್ಕ ಇಟ್ಟುಕೊಳ್ಳಬೇಕು. ಇದು ನಮ್ಮ ಸಾಧನೆಗಳಿಗೆ ಪ್ರೇರಕವಾಗುತ್ತದೆ ಎಂದರು.
ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು ಮೊಬೈಲ್‍ಗಳಲ್ಲಿ ಬೇಡವಾದುದೇ ಹೆಚ್ಚಾಗಿರುತ್ತದೆ. ಅದು ಎಚ್ಚರದಿಂದ ಉಪಯೋಗಿಸಿದರೆ ವರ. ಇಲ್ಲದಿದ್ದರೆ ಶಾಪವಾಗುತ್ತದೆ. ಜ್ಞಾನಕ್ಕಾಗಿ ಅದನ್ನು ಬಳಸಿ ಅಜ್ಞಾನಕ್ಕೆ ಅಲ್ಲ ಎಂದರು.
ಮಲ್ನಾಡ್ ಕೋಚಿಂಗ್ ಸೆಂಟರ್‍ನಲ್ಲಿ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್‍ಲೈನ್ ಹಾಗೂ ಆಫ್‍ಲೈನ್ ತರಬೇತಿ ನಡೆಸಲಾಗುತ್ತದೆ. ಉದ್ಯೋಗ ಖಚಿತವಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರ ಪ್ರಾಂಶುಪಾಲ ಡಾ. ಟಿ. ಅವಿನಾಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎನ್‍ಎಸ್‍ಎಸ್ ಅಧಿಕಾರಿ ಘಟಕದ ಡಾ. ಪ್ರಕಾಶ್ ಬಿ.ಎನ್., ಡಾ. ಮುದುಕಪ್ಪ, ಭಾರತ ಸೇವಾದಳದ ಜಿಲ್ಲಧ್ಯಕ್ಷ ವೈ.ಹೆಚ್. ನಾಗರಾಜ್ ಇದ್ದರು.

Related posts

ಉತ್ತರ ಕರ್ನಾಟಕದವರಿಗೆ ವಿಪಕ್ಷ ನಾಯಕ ಸ್ಥಾನ ಸಿಗಬೇಕು-  ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹ

ದಸರಾ ಮೆರವಣಿಗೆಯಲ್ಲಿ ಆನೆಯ ಮಾವುತರು ಮತ್ತು ಸಿಬ್ಬಂದಿಗಳಿಗೆ ಸನ್ಮಾನಿಸಿ ಗೌರವ.

ರಾಜಸ್ಥಾನ ವಿಧಾನಸಭೆ ಚುನಾವಣೆ ಗೆಲ್ಲಲು ‘ಕೈ’ ತಂತ್ರ: 80 ಶಾಸಕರಿಗೆ ಕೋಕ್ ಕೊಡಲು ಪ್ಲಾನ್.