ಶಿವಮೊಗ್ಗ : ಜೀವನದ ಪ್ರತಿಯೊಂದು ಅನುಭವ ಮಿಡಿತಗಳಿಗೆ ತಿರುವು ನೀಡುವ ಶಕ್ತಿ ಸಣ್ಣಕಥೆಗಳಿಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಎಂ.ಬಿ. ನಟರಾಜ ಅಭಿಪ್ರಾಯಪಟ್ಟರು.
ಬುಧವಾರ ನಗರದ ಗೋಪಿಶೆಟ್ಟಿಕೊಪ್ಪದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಿದ್ದ ದಸರಾ ಕಥಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಮಾಯಣ ಮತ್ತು ಮಹಾಭಾರತ ಕಥೆಯು ನಮ್ಮ ಪರಂಪರೆಯನ್ನು ಪ್ರತಿನಿಧಿಸಲಿದೆ. ಅದರ ಮುಂದುವರೆದ ಭಾಗವಾಗಿ ಜನಪದ ಸಾಹಿತ್ಯ ಕಥೆಗಳ ರಚನೆಯನ್ನು ಹಾಗೂ ವಿವಿಧ ಪ್ರಕಾರಗಳಲ್ಲಿ ವಾಚಿಸುವ ಪರಂಪರೆಯನ್ನು ಪ್ರಾರಂಭಿಸಿದೆ. ಜನರ ಜ್ಞಾನ ವಿಸ್ತಾರದಲ್ಲಿ ಸಣ್ಣ ಕಥೆಗಳು ಮಹತ್ವ ಪಡೆದುಕೊಂಡಿದ್ದು, ಅಂತಹ ಅತ್ಯಮೂಲ್ಯ ಕಥೆಗಳನ್ನು ಜೋಪಾನ ಮಾಡಬೇಕಿದೆ.
ಸಮಾಜದಲ್ಲಿ ಜನರ ಚಿಂತನೆಗಳು ಬದಲಾದಂತೆಲ್ಲಾ, ಕಥೆ ಬರೆಯುವ ಪ್ರಕಾರಗಳು ಬದಲಾಗುತ್ತಿದೆ. ಯುವ ಸಮೂಹ ತಮ್ಮ ಜೀವನಾನುಭಗಳನ್ನು ಸಣ್ಣ ಕಥೆಗಳ ಮೂಲಕ ಅತ್ಯಮೂಲ್ಯವಾಗಿ ಹಿಡಿದಿಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಐಎಫ್ಎಸ್ ಅಧಿಕಾರಿ ಮುಕುಂದಚಂದ್ರ ಮಾತನಾಡಿ, ಭಾಷೆ ಬೆಳೆಸಿದಂತೆಲ್ಲ ಬೆಳೆಯುತ್ತಾ ಜೀವಂತವಾಗಿರುತ್ತದೆ. ಅಂತಹ ಜೀವಂತಿಕೆ ಸಾಧ್ಯವಾಗುವುದು ಅತ್ಯುತ್ತಮ ಸಾಹಿತ್ಯ ಕೃತಿಗಳಿಂದ. ಸಣ್ಣಕಥೆಗಳು ಬದುಕಿಗೆ ಅನೇಕ ಪ್ರೇರಣಾ ವೈಶಿಷ್ಟ್ಯ ನೀಡಲಿದೆ. ಕನ್ನಡ ಸಣ್ಣಕಥೆ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಇತ್ತೀಚೆಗೆ ಇತರ ಭಾಷೆಗಳಿಂದ ಅನೇಕ ಕಥೆಗಳು ಅನುವಾದವಾಗಿ ಬರುತ್ತಿರುವುದು ಒಂದು ಸಂತೋಷದಾಯಕ ಸಂಗತಿ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಚಂದ್ರೇಗೌಡ ಮಾತನಾಡಿದರು. ತಾಲ್ಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ ಉಪಸ್ಥಿತರಿದ್ದರು. ಕಥೆಗಾರರಾದ ಸಿಮ್ಸ್ ಕಾಲೇಜು ವೈದ್ಯರಾದ ಡಾ.ಕೆ.ಎಸ್. ಗಂಗಾಧರ, ಕುವೆಂಪು ವಿ.ವಿ. ಡಾ.ಹಸೀನಾ, ನೇತ್ರಾವತಿ ಆಯನೂರು, ಎನ್ಇಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ. ನೃಪತುಂಗ, ಮೇದಿನಿ ಕೆಸಿನಮನೆ, ಡಿ.ಎಚ್. ಸೂರ್ಯಪ್ರಕಾಶ್, ಸೊರಬದ ರಾಜ್ ಗೋಕಲೆ, ಭದ್ರಾವತಿ ನಾಗೋಜಿರಾವ್, ಡಾ. ಕೆ.ಜಿ. ವೆಂಕಟೇಶ್, ಶ್ರೀನಿವಾಸ ನಗಲಾಪುರ ಸಣ್ಣಕಥೆ ವಾಚಿಸಿದರು.