ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆರ್.ಎಂ, ಮಂಜುನಾಥ ಗೌಡ 10ನೆ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆರ್.ಎಂ. ಮಂಜುನಾಥ ಗೌಡ ಅವರು ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂಕೂಡ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವರು ಅಧ್ಯಕ್ಷರಾಗಿದ್ದಾರೆ ಎಂದು ಚುನಾವಣಾಧಿಕಾರಿ ರುದ್ರಪ್ಪ ಅವರು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಆರ್.ಎಂ. ಮಂಜುನಾಥ ಗೌಡರು ನನ್ನ ಮುಂದೆ ಸಾಕಷ್ಟು ಸವಾಲುಗಳಿಗೆ. 25 ವರ್ಷಗಳ ಅನುಭವವೂ ಇದೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಮತ್ತಷ್ಟು ಶಕ್ತಿ ತುಂಬಬೇಕಿದೆ. ಡಿಸಿಸಿ ಬ್ಯಾಂಕ್ ಅಡಿಯಲ್ಲಿ ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳಿವೆ. ಅವುಗಳಿಗೆ ಆರ್ಥಿಕ ನೆರವು ನೀಡಬೇಕಾಗಿದೆ ಎಂದರು.
ಬರಗಾಲ ಕಾಲಿಟ್ಟಿದೆ. ಇಂತಹ ಸಂದರ್ಭದಲ್ಲಿ ರೈತರು ಧೃತಿಗೆಡುವ ಅಗತ್ಯವಿಲ್ಲ. ಹಲವು ಬರಗಾಲಗಳನ್ನು ನಾನು ಕಂಡಿದ್ದೇನೆ. ಡಿಸಿಸಿ ಬ್ಯಾಂಕ್ ರೈತರ ಹಿತ ಕಾಪಾಡಲು ಯಾವಾಗಲು ಬದ್ಧವಾಗಿದೆ.ಅವರ ನೆರವಿಗೆ ಖಂಡಿತಾ ಬರುತ್ತದೆ ಎಂದರು.
ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ವಿಜಯಕುಮಾರ್ (ಧನಿ), ನಿರ್ದೇಶಕರುಗಳಾದ ಜಗದೀಶ್, ಶ್ರೀಪಾದ ರಾವ್, ಎಸ್.ಪಿ.ದಿನೇಶ್, ಹೆಚ್.ಎಲ್. ಷಡಾಕ್ಷರಿ, ಶಾಸಕ ಬೇಳೂರು ಗೋಪಾಲಕೃಷ್ಣ, ಭಾಸ್ಕರ್ ಹಾಗೂ ಆರ್.ಎಂ. ಮಂಜುನಾಥ ಗೌಡರ ಅಭಿಮಾನಿಗಳು ಹಾರ, ಶಾಲುಗಳೊಂದಿಗೆ ಅವರನ್ನು ಸನ್ಮಾನಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬ್ಯಾಂಕಿನ 14 ನಿರ್ದೇಶಕರು, ಇಬ್ಬರು ಸರ್ಕಾರಿ ಅಧಿಕಾರಿಗಳು ಮತದಾನದಲ್ಲಿ ಪಾಲ್ಗೊಂಡಿದ್ದರು.