ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಕಾಂತರಾಜ್ ವರದಿಯನ್ನು ಶೀಘ್ರವೇ ಅನುಷ್ಠಾನಕ್ಕೆ ತರಬೇಕು-ಆರ್.ಕೆ. ಸಿದ್ದರಾಮಣ್ಣ ಆಗ್ರಹ.

ಶಿವಮೊಗ್ಗ: ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಾದ ಕಾಂತರಾಜ್ ವರದಿಯನ್ನು ಶೀಘ್ರವೇ ಅನುಷ್ಠಾನಕ್ಕೆ ತರಬೇಕು ಎಂದು ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಧಾನ ಸಂಚಾಲಕ ಆರ್.ಕೆ. ಸಿದ್ದರಾಮಣ್ಣ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ಆಯೋಗಗಳ ಸಾಮಾಜಿ, ಶೈಕ್ಷಣಿಕ ಸಮೀಕ್ಷೆ ನಡೆದು ಅದರ ವರದಯೂ ಸಿದ್ಧವಾಗಿದೆ. ಈ ವರದಿಗಾಗಿಯೇ 180 ಕೋಟಿ ರೂ.ಖರ್ಚು ಮಾಡಲಾಗಿದೆ. ಸರ್ಕಾರದ ಅಧಿಕೃತ ಸಂಸ್ಥೆಯಿಂದಲೇ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಕಾಂತರಾಜ್ ನೇತೃತ್ವದಲ್ಲಿ ವರದಿ ಮಂಡನೆಯಾಗಿ ಇಷ್ಟು ವರ್ಷಗಳಾದರೂ ಸರ್ಕಾರಕ್ಕೆ ಅದನ್ನು ಸಲ್ಲಿಸಲಾಗಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ರಾಜಕೀಯ ಪಕ್ಷಗಳು ಕೂಡ ಇದನ್ನು ಸ್ವೀಕಾರ ಮಾಡಿಲ್ಲ ಎಂದು ದೂರಿದರು.
ಇದಕ್ಕೆ ಸಂಬಂಧಿಸಿದಂತೆ ರಾಜ್ಯಸರ್ಕಾರ ಮತ್ತುಹಿಂದುಳಿದ ಆಯೋಗ ಶೀಘ್ರವೇ ಇದನ್ನು ಬಹಿರಂಗಪಡಿಸಬೇಕು. ಆಯೋಗ ತಕ್ಷಣವೇ ಸರ್ಕಾರಕ್ಕೆ ನೀಡಬೇಕು. ಸರ್ಕಾರ ಕೂಡ ಪರಿಷ್ಕರಣೆಯ ನೆಪ ಹೇಳದೆ ಅದನ್ನು ಜಾರಿಗೆ ತರಬೇಕು. ಆದರೆ ನಮಗೆ ಈ ಬಗ್ಗೆ ವಿಶ್ವಾಸವೇ ಇಲ್ಲದಂತಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಜಾರಿಗೆ ತರಲು ಆಗ್ರಹಿಸಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.
ಇದನ್ನು ಜಾರಿಗೆ ತರಲು ರಾಜಕೀಯ ಪಕ್ಷಗಳಿಗೆ ಅದೇಕೆ ಭಯವೋ ಗೊತ್ತಿಲ್ಲ. ಇದು ಜನಗಣತಿಯಲ್ಲ. ಜನಗಣತಿಯನ್ನು ಕೇಂದ್ರ ಸರ್ಕಾರ ಮಾತ್ರ ಮಾಡಬೇಕು. ಇದು ಮುಂದುವರೆದ ಜಾತಿಗಳನ್ನೂ ಒಳಗೊಂಡಂತೆ ಎಲ್ಲಾ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಸಮೀಕ್ಷೆಯಾಗಿದೆ. ಸರ್ವೆ ಮಾಡಿ ಸಮೀಕ್ಷೆ ಮಾಡಲಾಗಿದೆ. ಪ್ರತಿ 10 ವರ್ಷಕ್ಕೊಮ್ಮೆ ಈ ರೀತಿಯ ಸಮೀಕ್ಷೆ ಅಗತ್ಯ ಎಂದು ಹೇಳಲಾಗಿದೆ. ಆದರೂ ಕೂಡ ಸರ್ಕಾರಗಳು ಅದೇಕೆ ಮೀನಾಮೇಷ ಎಣಿಸುತ್ತವೆಯೋ ಗೊತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ತನ್ನ ಪ್ರಣಾಣಿಕೆಯಲ್ಲಿ ಹೇಳಿದಂತೆ ಕಾಂತರಾಜ್ ವರದಿಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಪ್ರೊ. ರಾಚಪ್ಪ ಮಾತನಾಡಿ, ಕಾಂತರಾಜ್ ವರದಿಯ ಅನುಷ್ಠಾನಕ್ಕೆ ಆಗ್ರಹಿಸಿ ಮೂರು ಹಂತದ ಕಾರ್ಯಕ್ರಮಗಳನ್ನು ನಾವು ಹಿಂದುಳಿದ ಜನಜಾಗೃತಿ ವೇದಿಕೆ ಹಾಗೂ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಬರುವ ಸೋಮವಾರ ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆಯವರನ್ನು ಭೇಟಿ ಮಾಡುತ್ತೇವೆ. ನಂತರ 2ನೇ ಹಂತವಾಗಿ ಧರಣಿ ಸತ್ಯಾಗ್ರಹ ಹಾಗೂ ಪಂಜಿನ ಮೆರವಣಿಗೆ ಮಾಡುತ್ತೇವೆ. ಮೂರನೇ ಹಂತದಲ್ಲಿ ಹಿಂದುಳಿದ ವರ್ಗಗಳ ಎಲ್ಲಾ ಸ್ವಾಮೀಜಿಗಳನ್ನು ಒಳಗೊಂಡಂತೆ ಮಹಾ ಪಂಚಾಯತ್ ಹೆಸರಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ. ಸರ್ಕಾರಕ್ಕೆ ಇದು ಕೊನೆಯ ಎಚ್ಚರಿಕೆಯಾಗಿದೆ ಎಂದರು.
ಕೇಂದ್ರ ಸರ್ಕಾರ ಕೂಡ ಹಿಂದುಳಿದ ವರ್ಗಗಳ ರೋಹಿಣಿ ಆಯೋಗವನ್ನು ಜಾರಿಗೆ ತರದ ನಿರ್ಲಕ್ಷ್ಯ ವಹಿಸುತ್ತಿದೆ. ಕಾಂತರಾಜ್ ವರದಿ ವೈಜ್ಞಾನಿಕವಾಗಿದೆ. ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಿಂದುಳಿದ ವರ್ಗಗಳ ಬಗ್ಗೆ ಅದೇಕೆ ನಿರ್ಲಕ್ಷ್ಯ ವಹಿಸುತ್ತಿವೆಯೋ ಗೊತ್ತಿಲ್ಲ ಎಂದರು.
ವಿ. ರಾಜುಮಾತನಾಡಿ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಾದ ವೈಜ್ಞಾನಿಕವಾಗಿರುವ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕಾರಣವಾಗುವ ಈ ವರದಿಯನ್ನು ರಾಜ್ಯ ಸರ್ಕಾರ ಕೂಡಲೇ ಸ್ವೀಕರಿಸಿ ಅನುಷ್ಠಾನಕ್ಕೆ ತರಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎನ್. ಉಮಾಪತಿ, ಡಿ.ಆರ್.ಉಮೇಶ್ ಯಾದವ್, ರಾಜೇಶ್, ಮನೋಹರ್, ಜನಮೇಜಿ ರಾವ್, ನಟರಾಜ್, ಲೋಕೇಶ್, ಚನ್ನವೀರಪ್ಪ ಗಾಮನಕಟ್ಟೆ ಮುಂತಾದವರಿದ್ದರು.

Related posts

ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡದಂತೆ ಆಗ್ರಹ: ರಸ್ತೆ ತಡೆದು ಪ್ರತಿಭಟನೆ.

ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಆರು ಪ್ರಥಮ, ಎರಡು ದ್ವಿತೀಯ ಸ್ಥಾನ ಪಡೆದು ಸಾಧನೆಗೈದ ದುರ್ಗಿಗುಡಿ ಶಾಲೆಯ ಮಕ್ಕಳು

ಪರಿಷತ್ ಗೆ ಸುಧಾಮ್ ದಾಸ್ ನಾಮನಿರ್ದೇಶನಕ್ಕೆ ನಾಲ್ವರು ಸಚಿವರಿಂದ ವಿರೋಧ: ಹೈಕಮಾಂಡ್ ಗೆ ಪತ್ರ