ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಪಾರದರ್ಶಕ-ತ್ವರಿತ-ಜನಪರ ಸೇವೆ ನೀಡಬೇಕು : ಕಂದಾಯ ಸಚಿವ ಕೃಷ್ಣಬೈರೇಗೌಡ

ಶಿವಮೊಗ್ಗ: ಜನರ ನಿರೀಕ್ಷೆಯನ್ನು ಅರ್ಥ ಮಾಡಿಕೊಂಡು ತ್ವರಿತವಾಗಿ, ಜನಪರ ಸೇವೆಯನ್ನು ನೀಡಬೇಕೆಂದು ಕಂದಾಯ ಇಲಾಖೆ ಅಧಿಕಾರಿಗಳು/ಸಿಬ್ಬಂದಿಗಳಿಗೆ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಸೂಚಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗದ್ದ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ಇರುವುದು ಜನ ಜೀವನ ಸುಲಲಿತಗೊಳಿಸುವುದಕ್ಕೆ. ಜನರು ಹೆಚ್ಚಾಗಿ ಬರುವುದು ಮಾತೃ ಇಲಾಖೆಯಾಗಿರುವ ಕಂದಾಯ ಇಲಾಖೆಗೆ. ಆದ್ದರಿಂದ ಜನರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಂಡು ಅವರನ್ನು ಹೆಚ್ಚು ಅಲೆದಾಡಿಸದೇ ಗುಣಮಟ್ಟದ ಮತ್ತು ತ್ವರಿತ ಸೇವೆಯನ್ನು ನೀಡಬೇಕು. ಈ ನಿಟ್ಟಿನಲ್ಲಿ ಆಡಳಿತ ಯಂತ್ರದಲ್ಲಿ ಬದಲಾವಣೆಗಳನ್ನು ತರಲಾಗುತ್ತಿದೆ, ಅದನ್ನು ಪರಿಣಾಮಕಾರಿಯಾಗಿ ಅಧಿಕಾರಿ/ಸಿಬ್ಬಂದಿ ವರ್ಗದವರು ಅನುಷ್ಟಾನಕ್ಕೆ  ತರಬೇಕೆಂದರು.
2019 ರಿಂದ 2022 ರವರೆಗೆ ನೆರೆಸಂತ್ರಸ್ಥರ ಪುನರ್ವಸತಿ ಯೋಜನೆಯಡಿ ಶುರು ಮಾಡದೇ ಇರುವ ಮನೆಗಳ ಕುರಿತು ತಹಶೀಲ್ದಾರ್ ಪರಿಶೀಲಿಸಿ, ನೋಟಿಸ್ ನೀಡಿ ಪ್ರಕರಣ ಇತ್ಯರ್ಥಪಡಿಸಬೇಕು. ಹಾಗೂ ಬಾಕಿ ಉಳಿಸಿರುವ ಶಾಲೆ-ಅಂಗನವಾಡಿ ಸಣ್ಣಪುಟ್ಟ ಕೆಲಸಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಸಂಬಂಧಿಸಿದ ಅಧಿಕಾರಿಗೆ ತಾಕೀತು ಮಾಡಿದರು.
ಸಮಸ್ಯಾತ್ಮಕ ಪೈಕಿ ಆರ್‍ಟಿಸಿ ಗಳನ್ನು ಒಂದುಗೂಡಿಸಿ ಸರ್ವೇ ಮಾಡಿಸಲು  ಕ್ರಮ ವಹಿಸಲಾಗುತ್ತಿದ್ದು ಜನರ ಬಹಳ ವರ್ಷಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಸುಧಾರಣೆ ಕ್ರಮಗಳು ಆಗುತ್ತಿವೆ. ಆದರೆ ಇನ್ನೂ ಹಲವಾರು ಸವಾಲುಗಳಿವೆ ಎಂದರು.
ಜಿಲ್ಲೆಯಲ್ಲಿ 97 ಸಾವಿರ ಫಾರ್ಮ್ 57 ಅರ್ಜಿಗಳು ಬಂದಿವೆ. ಇವನ್ನು ಇತ್ಯರ್ಥಪಡಿಸಲು ಸಮಿತಿ ರಚನೆ ಮಾಡಲಾಗುವುದು. ಸದರಿ ಸಮಿತಿಯು ನಿಜವಾದ ಬಡ ಸಾಗುವಳಿದಾರರನ್ನು ಗುರುತಿಸಿ ಅವರ ಜಮೀನಿಗೆ ತ್ವರಿತವಾಗಿ ಹಕ್ಕುಪತ್ರ ನೀಡುವ ಕೆಲಸ ಆಗಬೇಕು. ರೈತರ ಹೆಸರಿನಲ್ಲಿ ಬೇರೆಯವರು ಭೂಮಿ ಕಬಳಿಸುವಂತಾಗಬಾರದು. ಕಡೂರು ತಾಲ್ಲೂಕಿನಲ್ಲಿ ಅನರ್ಹರಿಗೆ ಸಾವಿರಾರು ಎಕರೆ ಜಮೀನು ಮಂಜೂರು ಮಾಡಿದ ಅಧಿಕಾರಿಗಳ ವಿರುದ್ದ ಶಿಸ್ತಿನ ಕ್ರಮ ವಹಿಸಲಾಗಿದೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಅಧಿಕಾರಿಗಳು ಕೆಲಸ ಮಾಡಬೇಕು. ಅರ್ಹರಿಗೆ ಅನುಕೂಲ ಮಾಡಿಕೊಡಬೇಕೆಂದು ಸೂಚಿಸಿದರು.
ಫಾರಂ 57 ವಿಲೇ ಮಾಡಲು ತಹಶೀಲ್ದಾರರಿಗೆ ಹೊಸ ಆ್ಯಪ್ ನೀಡಲಾಗುವುದು. ಇದರಲ್ಲಿ ಡಾಟಾ ಅಪ್‍ಲೋಡ್ ಮಾಡಿದಾಗ ಅದು ಸರ್ಕಾರಿ ಅಥವಾ ಅರಣ್ಯ ಭೂಮಿ ಎಂದು ಗೊತ್ತಾಗುತ್ತದೆ. 15 ವರ್ಷದ ಸ್ಯಾಟಲೈಟ್ ಇಮೇಜ್ ಸಿಗಲಿದೆ. ಗ್ರಾಮ ಲೆಕ್ಕಿಗರು ಪ್ರತಿ ಮೂರು ತಿಂಗಳಿಗೆ ಕ್ಷೇತ್ರ ಭೇಟಿ ನೀಡಿ ಒತ್ತುವರಿ ಬಗ್ಗೆ ಪರಿವೀಕ್ಷಿಸಿ ವರದಿ ನೀಡಬೇಕು ಎಂದ ಅವರು ನಿಜವಾದ ಬಗರ್‍ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು ಮತ್ತು ಸರ್ಕಾರಿ ಜಾಗವನ್ನು ಭದ್ರಪಡಿಸುವ ಕೆಲಸವನ್ನು ಕಂದಾಯ ಇಲಾಖೆ ಅಧಿಕಾರಿ/ಸಿಬ್ಬಂದಿ ಮಾಡಬೇಕು ಎಂದರು.
ಜೆಸ್ಲಿಪ್ ಮತ್ತು ಪೌತಿ ಖಾತೆ ಬಿಟ್ಟು ಉಳಿದ ಖಾತೆಗಳನ್ನು ಸ್ವಯಂಚಾಲಿತವಾಗಿ ಮಾಡುವ ಯೋಜನೆ ಇದೆ. ವಿವಾದಿತ ಮ್ಯುಟೇಷನ್‍ಗಳ ಪೆಂಡಿನ್ಸಿ ಜಿಲ್ಲೆಯಲ್ಲಿ ಕಡಿಮೆ ಇದೆ. ಇಂತಹ ಪ್ರಕರಣ ಇತ್ಯರ್ಥಕ್ಕೆ ಸರಾಸರಿ 1 ವರ್ಷ ತೆಗೆದುಕೊಂಡಿದ್ದ ಸಮಯವನ್ನು 135 ದಿನಗಳಿಗೆ ಇಳಿಸಿದ್ದೀರಿ. ಉತ್ತಮ ಬೆಳಿವಣಿಗೆ ಆದರೆ ಇದು ಗರಿಷ್ಟ 90 ದಿನಗಳಲ್ಲಿ ವಿಲೇ ಆಗಬೇಕು. ತಾವು 60 ರಿಂದ 65 ದಿನಗಳಲ್ಲಿ ವಿಲೇ ಮಾಡಲು ಪ್ರಯತ್ನಿಸಬೇಕು.
ಶಿವಮೊಗ್ಗದಲ್ಲಿ ಭೂಮಿ ಮಂಜೂರಾತಿ ವಿಷಯದಲ್ಲಿ ಹೆಚ್ಚಿನ ಸಮಸ್ಯೆಗಳಿವೆ. ಜಿಲ್ಲಾಧಿಕಾರಿಗಳು ಶರಾವತಿ ಸಂತ್ರಸ್ತರು, ಹಾಗೂ ಇತರೆ ಭೂಮಿ ಮಂಜೂರಾತಿ ಕುರಿತು ನನ್ನ ಗಮನಕ್ಕೆ ತಂದಿದ್ದಾರೆ. ಅರಣ್ಯ ಮತ್ತು ಕಂದಾಯ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಿ ಇದನ್ನು ಬಗೆಹರಿಸಲು ಕ್ರಮ ವಹಿಸಲಾಗುವುದು.
ಶರಾವತಿ ಸಂತ್ರಸ್ತರಿಗೆ ಪರಿಹಾರ ಒದಗಿಸಲು ತಜ್ಞರ ಸಮಿತಿ ರಚಿಸಿ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತಿದೆ. ಸರ್ಕಾರದಿಂದ ಈ ಕುರಿತು ಸೆಟ್ಲ್‍ಮೆಂಟ್ ಮಾಡಲು ‘ಸೆಟ್ಲ್‍ಮೆಂಟ್ ಆಫೀಸರ್’ ನೇಮಕ ಮಾಡಲಾಗುತ್ತಿದೆ. ಶೇ.50 ಕಂದಾಯ ಭೂಮಿ ಇದ್ದರೆ, ಶೇ.50 ಅರಣ್ಯ ಭೂಮಿ ಈ ರೀತಿ ಸಮಸ್ಯೆಗಳಿವೆ. ಭೂಮಿ ಸರ್ವೇ ಕಾರ್ಯ ತ್ವರಿತವಾಗಿ ಆಗಬೇಕಿದೆ.ಅದಕ್ಕೆ ಲೈಸನ್ಸ್ಡ್ ಸರ್ವೇಯರ್ ಅಗತ್ಯವಿದೆ ಎಂದು ಜಿಲ್ಲಾಧಿಕರಿಗಳು ತಿಳಿಸಿದ್ದು, ಭೂಮಾಪನ ಇಲಾಖೆ ಆಯುಕ್ತರು ಅಕ್ಕಪಕ್ಕದ ಜಿಲ್ಲೆಯ ಸರ್ವೇಯರ್ ಅಥವಾ ನೇಮಕಾತಿ ಹೊಂದಿದ ಸರ್ವೇಯರ್‍ನ್ನು ನಿಯೋಜಿಸುವಂತೆ ಹಾಗೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಹಕರಿಸುವಂತೆ ತಿಳಿಸಿದರು.
ಆರ್‍ಟಿಸಿ ಮಿಸ್‍ಮ್ಯಾಚ್ 5313 ಪ್ರಕರಣಗಳು ಬಾಕಿ ಇವೆ. ಇದರಲ್ಲಿ ಅರಣ್ಯಕ್ಕೆ ಸಂಬಂಧಿಸಿದ ಸುಮಾರು 2000 ಜಟಿಲ ಪ್ರಕರಣಗಳಿವೆ ಎಂದು ಡಿಸಿ ಯವರು ತಿಳಿಸಿದ್ದು, ಇನ್ನುಳಿದ ಪ್ರಕರಣಗಳನ್ನು ತ್ವರಿತವಾಗಿ ವಿಲೇ ಮಾಡುವಂತೆ ಸೂಚಿಸಿದ್ದೇನೆ.

Related posts

ಇಲಿಯಾಸ್ ನಗರಕ್ಕೆ ನ್ಯಾಯಬೆಲೆ ಅಂಗಡಿ ಮಂಜೂರು ಮಾಡುವಂತೆ ಮನವಿ.

ರೋಟರಿ ವಲಯ ಮಟ್ಟದ ಕ್ರೀಡಾಕೂಟ ನ. 18, 19ಕ್ಕೆ

ಭಾರತ- ಬಾಂಗ್ಲಾ ಯುದ್ಧದಲ್ಲಿ ಭಾಗಿಯಾಗಿದ್ದ ಟಿ55 ಯುದ್ಧ ಟ್ಯಾಂಕರ್ ನಾಳೆ ಶಿವಮೊಗ್ಗಕ್ಕೆ.