ಶಿವಮೊಗ್ಗ: ವಿವಿಧ ವಸತಿ ಯೋಜನೆಗಳ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಲುವಂತೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರಿಗೆ ಸೂಡಾ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್ ಮನವಿ ಮಾಡಿದರು.
ಅವರು ನಿನ್ನೆ ಸಂಜೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಚಿವರುಗಳಾದ ಭೈರತಿ ಸುರೇಶ್ ಹಾಗು ಮಧು ಬಂಗಾರಪ್ಪ ಅವರನ್ನು ಸನ್ಮಾನಿಸಿ ನಂತರ ಸಚಿವರಿಗೆ ಮನವಿ ಮಾಡಿದರು.
ವಾಜಪೇಯಿ ಬಡಾವಣೆಯಲ್ಲಿ ಹಲವು ವರ್ಷಗಳಿಂದ ನಿವೇಶನ ಹಂಚಿಕೆ ನೆನೆಗುದಿಗೆ ಬಿದ್ದಿದೆ. ಲೋಕಾಯುಕ್ತ ತನಿಖೆಯಿಂದ ಅದು ಕುಂಠಿತಗೊಂಡಿತ್ತು. ಈಗ ನ್ಯಾಯಾಲಯ ನಿವೇಶನ ಹಂಚಿಕೆಗೆ ಗ್ರೀನ್ ಸಿಗ್ನಲ್ ನೀಡಿ ಒಂದು ವರ್ಷವಾದರೂಯಾವುದೇ ಕ್ರಮ ತೆಗೆದುಕೊಂಡಿಲ್ಲ. ನೂರಾರು ಬಡವರು ಸೂರಿಗಾಗಿ ಕಾಯುತ್ತಿದ್ದಾರೆ. ಪ್ರಾಧಿಕಾರಕ್ಕೆ ಸೂಚನೆ ನೀಡಿ ಆದಷ್ಟು ಬೇಗ ನಿವೇಶನ ಹಂಚಿಕೆಗೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸಚಿವರಲ್ಲಿ ಮನವಿ ಮಾಡಿದರು.
ಊರುಗಡೂರಿನ ವಸತಿ ಯೋಜನೆ ಕೂಡ ಮಂದಗತಿಯಲ್ಲಿ ಸಾಗಿದೆ. ಅಲ್ಲಿ ಹೊಸದಾಗಿ ಮತ್ತೊಮ್ಮೆ ಅರ್ಜಿ ಕರೆಯಬೇಕು. ಖಾಸಗಿಯವರು ಲೇಔಟ್ ಮಾಡಿದರೆ ಬಡವರಿಗೆ ಅನುಕೂಲವಾಗುವಂತಹ ಕಡಿಮೆ ವಿಸ್ತೀರ್ಣದ ನಿವೇಶನಗಳನ್ನು ಮಾಡುವುದಿಲ್ಲ. ಹಾಗಾಗಿ ಸೂಡಾದಿಂದಲೇ ನಿವೇಶನ ಮಾಡಬೇಕು. ಈ ಹಿನ್ನೆಲೆಯಲ್ಲಿ ಖಾಸಗಿಯವರಿಗೆ ಮಣೆ ಹಾಕದೆ ಸೂಡಾ ವತಿಯಿಂದಲೇ ಬಡಾವಣೆ ನಿರ್ಮಾಣ ಮಾಡಲು ಸಚಿವರು ಆದೇಶ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದು ಅವರು ತಿಳಿಸಿದರು.