ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಕನ್ನಡ ಚಲನಚಿತ್ರಗಳು ಗೆಲ್ಲಲು ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗಬೇಕಿದೆ-ನಿರ್ಮಾಪಕ ಹಾಗೂ ನಿರ್ದೇಶಕ ಪನ್ನಗಾಭರಣ

ಶಿವಮೊಗ್ಗ: ಕನ್ನಡ ಚಲನಚಿತ್ರಗಳು ಗೆಲ್ಲಲು ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗಬೇಕಿದೆ ಎಂದು ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಪನ್ನಗಾಭರಣ ಹೇಳಿದರು.
ಮಹಾನಗರ ಪಾಲಿಕೆಯಿಂದ ದಸರಾ ಮಹೋತ್ಸವದ ಅಂಗವಾಗಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ದಸರಾ ಚಲನಚಿತ್ರೋತ್ಸವವನ್ನು ಇಂದು ಮಲ್ಲಿಕಾರ್ಜುನ ಚಿತ್ರಮಂದಿರದ ಆವರಣದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಚಿತ್ರರಂಗ ಸಾಕಷ್ಟು ಬದಲಾವಣೆ ಕಾಣುತ್ತಿದೆ. ಮನೆಯಲ್ಲಿಯೇ ಚಿತ್ರವನ್ನು ನೋಡುವ ಸ್ಥಿತಿ ಉದ್ಭವವಾಗಿದೆ. ಒಟಿಟಿ, ವೂಟ್, ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಇಂದು ಜನರು ತಮಗೆ ಬೇಕಾದ ಚಿತ್ರವನ್ನು ನೋಡುವ ಅವಕಾಶ ಇರುವುದರಿಂದ ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.
ಕೌಟುಂಬಿಕ ಚಿತ್ರಗಳು ಇಂದು ಕಡಿಮೆಯಾಗುತ್ತಿವೆ. ಹಿಂದೆ ಕುಟುಂಬಸಮೇತರಾಗಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸುತ್ತಿದ್ದರು. ಮೊಬೈಲ್ ಬಂದನಂತರ ಜನರು ಮೊಬೈಲ್‍ನಲ್ಲೇ ಸಿನಿಮಾ ನೋಡಿಕೊಳ್ಳುತ್ತಿದ್ದಾರೆ. ಇದು ಬದಲಾದಲ್ಲಿ ಮಾತ್ರ ಚಲನಚಿತ್ರ ಗೆಲ್ಲಲು ಸಾಧ್ಯ ಎಂದರು.
ಚಲನಚಿತ್ರ ಕಲಾವಿದೆ ಸಂಧ್ಯಾ ಭಟ್ ಮಾತನಾಡಿ, ಕನ್ನಡ ಭಾಷೆ ಉಳಿಯಬೇಕು. ಕನ್ನಡ ಚಿತ್ರಗಳನ್ನು ಬೆಳೆಸಬೇಕು. ಕನ್ನಡಿಗರು ಭಾಷೆಯನ್ನು ಸುಲಲಿತವಾಗಿ ಸುಲಭವಾಗಿ ಓದಲು ಮತ್ತು ಬರೆಯಲು ಕಲಿಯಬೇಕು. ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು. ಕನ್ನಡ ಕಲಾವಿದರನ್ನು ಬೆಳೆಸಬೇಕು ಎಂದರು.
ಕಿರುತೆರೆ ಕಲಾವಿದೆ ರೂಪಿಕಾ ಮಾತನಾಡಿ, ಶಿವಮೊಗ್ಗ ನನ್ನ ತವರು ಮನೆ. ಇಲ್ಲಿ ವೇದಿಕೆ ಹಂಚಿಕೊಳ್ಳುತ್ತಿರುವುದು ಸಂತೋಷದ ವಿಷಯ. ಸಿನಿಮಾ ಮಂದಿ ಕೇವಲ ಮನರಂಜನೆಗೆ ಸೀಮಿತವಾಗಬಾರದು. ಅದರಾಚೆ ಗುರುತಿಸಿಕೊಳ್ಳಬೇಕು. ಕಲಾವಿದರಿಗೆ ಸರ್ಕಾರ ಪ್ರೋತ್ಸಾಹಿಸಿ ಯೋಜನೆಗಳನ್ನು ರೂಪಿಸಬೇಕು. ಕನ್ನಡ ಚಿತ್ರರಂಗ ಬೆಳೆಯಬೇಕು ಎಂದರು.
ಪಾಲಿಕೆ ಸದಸ್ಯ ಹೆಚ್.ಸಿ. ಯೋಗೇಶ್ ಮಾತನಾಡಿ, ಚಿತ್ರಮಂದಿರಗಳು ಇಂದು ಬಾಗಿಲು ಹಾಕಿಕೊಳ್ಳುತ್ತಿವೆ. ವಾಣಿಜ್ಯ ಕೇಂದ್ರಗಳಾಗಿ ಬೆಳೆಯತೊಡಗಿವೆ. ಸಿನಿಮಾ ವೀಕ್ಷಕರು ಈಗ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಿಲ್ಲ. ಒಂದು ವಾರ ಕಾದರೆ ಮನೆಯಲ್ಲೇ ಕುಳಿತು ನೋಡಬಹುದು ಎಂಬ ಮನೋಭಾವನೆ ಹೆಚ್ಚಿದೆ. ಇದಕ್ಕೆಲ್ಲಾ ಒಂದು ವ್ಯವಸ್ಥೆಯನ್ನು ಸರಿಪಡಿಸಬೇಕಾಗಿದೆ. ಹಾಗಾದಾಗ ಮಾತ್ರ ಕನ್ನಡ ಚಿತ್ರಗಳು ಉಳಿಯುತ್ತವೆ ಎಂದರು.
ವೇದಿಕೆಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಉಪ ಮೇಯರ್ ಲಕ್ಷ್ಮಿ ಶಂಕರ ನಾಯಕ್, ಪಾಲಿಕೆ ಸದಸ್ಯರಾದ ಎಸ್.ಎನ್. ಮಂಜುನಾಥ್, ಯು.ಹೆಚ್. ವಿಶ್ವನಾಥ್, ಸುವರ್ಣಾಶಂಕರ್, ಅನಿತಾ ರವಿಶಂಕರ್, ಪ್ರಭಾಕರ್, ಸುರೇಖಾ ಮುರುಳೀಧರ್, ಬೆಳ್ಳಿಮಂಡಲದ ಸಂಚಾಲಕ ಹೆಚ್.ಯು. ವೈದ್ಯನಾಥ್ ಉಪಸ್ಥಿತರಿದ್ದರು.

Related posts

ಆ.27ರಂದು ಹಾಲುಮತ ಜನಜಾಗೃತಿ ಸಭೆ, ಪ್ರತಿಭಾ ಪುರಸ್ಕಾರ ಹಾಗೂ ಹಾಲುಮತ ಚೇತನ ಪುರಸ್ಕಾರ ಕಾರ್ಯಕ್ರಮ.

ಆದಿವಾಸಿ ಸಮುದಾಯದ ಪುನರುಜ್ಜೀವನಕ್ಕೆ ಬಿರ್ಸಾಮುಂಡಾ ಅವರ ಕೊಡುಗೆ ಮಹತ್ವದ್ದು – ಶಾಸಕ ತಮ್ಮಯ್ಯ

ಸರ್ವಾಂಗೀಣ ವಿಕಾಸ ಮಹಿಳಾಶ್ರಮದ ಧ್ಯೇಯ- ಅನಿತಾ ನಾಗೇಂದ್ರ