ರಾಯಚೂರು: ಕರ್ನಾಟಕ ರತ್ನ, ಕನ್ನಡ ಚಿತ್ರರಂಗದ ದೊಡ್ಮನೆ ಕಣ್ಮಣಿ ಪುನೀತ್ ರಾಜಕುಮಾರ್ ನಿಧನರಾಗಿ ಎರಡು ವರ್ಷಗಳು ತುಂಬಿವೆ. ಆದರೂ ಸಹ ಅಪ್ಪುವಿನ ನೆನಪು ಮಾಸಿಲ್ಲ. ಅಪ್ಪು ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಸಾಕಷ್ಟು ಅಭಿಮಾನಿಗಳು ಈಗಾಗಲೇ ಭಿನ್ನ ವಿಭಿನ್ನ ರೀತಿಯಲ್ಲಿ ಪವರ್ ಸ್ಟಾರ್ ಮೇಲಿನ ಅಭಿಮಾನ ತೋರಿದ್ದಾರೆ. ಆದರೆ ರಾಯಚೂರಿನ ಅಭಿಮಾನಿ ರೈತ ಕಲಾವಿದರೊಬ್ಬರು ವಿಭಿನ್ನ ಪ್ರಯತ್ನದ ಮೂಲಕ ತಮ್ಮ ಅಭಿಮಾನವನ್ನ ವ್ಯಕ್ತಪಡಿಸಿದ್ದಾರೆ
ಸಿರವಾರ ತಾಲೂಕಿನ ಡೋಣಿ ಬಸವಣ್ಣ ಕ್ಯಾಂಪ್ನ ರೈತ ಸತ್ಯನಾರಾಯಣ ಅವರು, ಅಪ್ಪು ಅಭಿಮಾನಿಯಾಗಿದ್ದು, ತನ್ನ ಎರಡು ಎಕರೆ ಗದ್ದೆಯಲ್ಲಿ ಜಪಾನ್ ತಂತ್ರಜ್ಞಾನ ಮೂಲಕ ವಿವಿಧ ಭತ್ತದ ತಳಿಗಳನ್ನು ಬೆಳೆದು ಅಪ್ಪು ಚಿತ್ರ ಬಿಡಿಸಿದ್ದಾರೆ. ಈ ಮೂಲಕ ಭತ್ತದ ಬೆಳೆಯಲ್ಲಿ ಪುನೀತ್ ರಾಜಕುಮಾರ್ನ ಜೀವಂತವಿರಿಸಿದ್ದಾರೆ.
ತೆಲಂಗಾಣ, ಗುಜರಾತ್ನಿಂದ ತಂದ ಕಾವೇರಿ, ಗೋಲ್ಡನ್ ರೋಸ್, ಕಾಲ ಭಟ್ಟಿ ಹೆಸರಿನ 100 ಕೆ.ಜಿ ಭತ್ತದ ಬೀಜಗಳನ್ನು ನೆಟ್ಟು ಸಾವಯವ ಪದ್ಧತಿಯಲ್ಲಿ ಬೆಳೆದು ಅಪ್ಪು ಮೇಲಿನ ಅಭಿಮಾನ ಮೆರೆದಿದ್ದಾರೆ. ಬರದ ನಡುವೆಯೇ ಟ್ಯಾಂಕರ್ ಮೂಲಕ ಗದ್ದೆಗೆ ನೀರು ಹಾಯಿಸಿ ಸುಮಾರು 3 ಲಕ್ಷ ರೂ. ಖರ್ಚು ಮಾಡಿ, ನಿತ್ಯ ನಿಗಾವಹಿಸಿ 90 ದಿನದ ಬೆಳೆಯಲ್ಲಿ ಅದ್ಭುತ ಕಲಾಚಿತ್ರ ಮೂಡಿಸಿದ್ದಾರೆ.
ಭಾವಚಿತ್ರದ ಕೆಳಗೆ ‘ಕರ್ನಾಟಕ ರತ್ನ’ ಅನ್ನೋ ಅಕ್ಷರಗಳನ್ನೂ ಬೆಳೆಯಲ್ಲೇ ಬರೆದಿದ್ದಾರೆ. ಒಂದೊಂದು ಅಕ್ಷರ 40 ಅಡಿ ಇದೆ. ತನ್ನ ಅಂಗವೈಕಲ್ಯ ಮೆಟ್ಟಿ ನಿಂತು ಉತ್ತಮ ಬೆಳೆ ಬೆಳೆಯುವ ಮೂಲಕ ಅಪ್ಪು ದ್ವಿತೀಯ ಪುಣ್ಯಸ್ಮರಣೆಗೆ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.