ಮಂಡ್ಯ: ರಾಜ್ಯದಲ್ಲಿ ಉತ್ತಮ ಮಳೆಯಾಗದೇ ಹಲವು ಜಲಾಶಯಗಳು ಭರ್ತಿಯಾಗದೇ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಕೆಆರ್ ಎಸ್ ಡ್ಯಾಂ ನೀರಿನ ಮಟ್ಟವೂ ಸಹ ಕಡಿಮೆಯಾಗಿದ್ದು ರೈತರಲ್ಲಿ ಆತಂಕ ಮನೆ ಮಾಡಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 101 ಅಡಿ ಆಳಕ್ಕೆ ಕುಸಿದಿದೆ. ಕೆಆರ್ಎಸ್ ಜಲಾಶಯದ ಒಳ ಹರಿವು 1378 ಕ್ಯೂಸೆಕ್ ಇದ್ದು, ಕೆಆರ್ಎಸ್ ಜಲಾಶಯದ ಹೊರ ಹರಿವು 2345 ಕ್ಯೂಸೆಕ್ ನೀರು. ಇದರಿಂದಾಗಿ ಮಂಡ್ಯ ಜಿಲ್ಲೆಯ ರೈತರಲ್ಲಿ ಆತಂಕ ಮುಂದುವರೆದಿದೆ. ಇನ್ನು ಮುಂದೆ ಕುಡಿಯವು ನೀರಿಗೂ ಹಾಹಾಕಾರ ಸೃಷ್ಠಿಯಾಗುವ ಭೀತಿ ಎದುರಾಗಿದೆ.
ಕೆಆರ್ ಎಸ್ ಜಲಾಶಯ ಭರ್ತಿಯಾಗದ್ದಿದ್ದರೂ ಸಹ ತಮಿಳುನಾಡು ಕಾವೇರಿ ನೀರಿಗಾಗಿ ಖ್ಯಾತೆ ತೆಗೆದು ಈಗಾಗಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಆದರೆ ಕಳೆದ ಶುಕ್ರವಾರ ನಡೆದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ನೀರು ಬಿಡುವಂತೆ ಆದೇಶಿಸಲು ಸಾಧ್ಯವಿಲ್ಲ ಎಂದು ತಮಿಳುನಾಡು ಸರ್ಕಾರಕ್ಕೆ ಚಾಟಿ ಬೀಸಿ ಎರಡು ರಾಜ್ಯಗಳ ಜಲಾಶಯದ ನೀರಿನ ಪ್ರಮಾಣದ ಬಗ್ಗೆ ವರದಿ ಸಲ್ಲಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸೂಚನೆ ನೀಡಿ ವಿಚಾರಣೆಯನ್ನ ಸೆಪ್ಟಂಬರ್ 1ಕ್ಕೆ ಮುಂದೂಡಿದೆ.