ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಶಿವಮೊಗ್ಗ ಜಿಲ್ಲೆ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿ-ಸಂಸದ ಬಿ.ವೈ. ರಾಘವೇಂದ್ರ ಆಗ್ರಹ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ  ಬರಗಾಲಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ರಾಜ್ಯ ಸರ್ಕಾರಕ್ಕೆ ಆಗ್ರಹಪಡಿಸಿದ್ದಾರೆ.
ಅವರು ಇಂದು ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ವರ್ಷ ಮಳೆಗಾಲ ವಾಡಿಕೆಗಿಂತ ಕಡಿಮೆಯಾಗಿದೆ. ಒಟ್ಟಾರೆ ತೆಗೆದುಕೊಂಡರೆ ಜಿಲ್ಲೆಯಲ್ಲಿ ಶೇ.40ಕ್ಕಿಂತ ಹೆಚ್ಚು ಕಡಿಮೆ ಮಳೆಯಾಗಿದೆ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗಿದೆ. ಭತ್ತ, ಮೆಕ್ಕೆಜೋಳ ಸೇರಿದಂತೆ ಎಲ್ಲಾ ಬೆಳೆಗಳ ಬಿತ್ತನೆ ಕಡಿಮೆಯೇ ಆಗಿದೆ. ಭತ್ತದ ನಾಟಿ ಇನ್ನೂ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯೇ ಆಗಿಲ್ಲ. ಮೆಕ್ಕೆಜೋಳ ಕೂಡ ಬಿತ್ತನೆಯಲ್ಲಿ ಅತ್ಯಂತ ಕಡಿಮೆಯಾಗಿದೆ. ಬಿತ್ತಿದ ಪೈರು ಕೂಡ ನಾಶವಾಗಿದೆ ಎಂದರು.
ಮಳೆಗಾಲ ಕಡಿಮೆ ಆಗಿರುವುದರಿಂದ ರಾಜ್ಯದಲ್ಲಿ ವಿದ್ಯುತ್ ಸೇರಿದಂತೆ ಹಲವು ಸಮಸ್ಯೆ ಉಂಟಾಗಿವೆ ಇದರ ನಡುವೆ ಬೆಳೆ ವಿಮೆ ಕೂಡ ಸರಿಯಾಗಿ ಆಗಿಲ್ಲ. ಉದಾ. 50 ಸಾವಿರ ಹೆಕ್ಟೇರ್‍ಗಳಲ್ಲಿ ಭತ್ತ ಬಿತ್ತಿದ್ದರೂ ಕೂಡ ಕೇವಲ 7250 ಎಕರೆಯಲ್ಲಿ ಮಾತ್ರ 13 ಸಾವಿರ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಉಳಿದವರು ಬೆಳೆ ವಿಮೆ ಮಾಡಿಸಲೇ ಇಲ್ಲ. ಬೆಳೆ ವಿಮೆ ಮಾಡಿಸದೆ ಪರಿಹಾರವೂ ಸಿಗುವುದಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತಕ್ಷಣವೇ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದು ಮಧ್ಯಂತರ ಬೆಳೆವಿಮೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಸಮಸ್ಯೆಯಂತೂ ಗಂಭೀರವಾಗಿದೆ. ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ರೈತರ ಸಂಕಷ್ಟಗಳು ಅವರಿಗೆ ಅರ್ಥವಾಗುತ್ತಿಲ್ಲ ಎಂದರು.
ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಕೂಡ ಬಗೆಹರಿಸಬೇಕಾಗಿದೆ. ಅಡಿಕೆ ಬೆಳೆಗೆ ಸಂಬಂಧಿಸಿದಂತ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಬೂತಾನ್‍ನಿಂದ ಅಡಿಕೆ ಬರುತ್ತಿದೆ. ಅದರಿಂದ ಅಡಿಕೆ ಬೆಳೆಗಾರರಿಗೆ ತೊಂದರೆಯಾಗುತ್ತಿದೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಅಂತರಾಷ್ಟ್ರೀಯ ಒಪ್ಪಂದದ ಪ್ರಕಾರ ಯಾವುದೇ ಬೆಳೆಯನ್ನು ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆದರೂ ಕೂಡ ಕೇಂದ್ರ ಸರ್ಕಾರ ಬೂತಾನ್‍ನಿಂದ ಹಸಿ ಅಡಿಕೆಯನ್ನು ಮಾತ್ರ ಖರೀದಿಸಲು ಒಪ್ಪಿದೆ. ಅದೂ ಹಡಗಿನ ಮೂಲಕ ಮಾತ್ರ. ಬೂತಾನ್‍ನಿಂದ ಭಾರತಕ್ಕೆ ಅಡಿಕೆ ಬರುವುದು ಕೂಡ ಕಷ್ಟವಾಗುತ್ತದೆ ಎಂದರು.
ಕೆಲವರು ಕೇಂದ್ರ ಸರ್ಕಾರದ ಬಗ್ಗೆ ಇನ್ನೂ ಹೊಟ್ಟೆಕಿಚ್ಚು ಪಡುತ್ತಲೇ ಇದ್ದಾರೆ. ವಂದೇ ಮಾತರಂ ರೈಲನ್ನು ಪ್ರಧಾನ ಮಂತ್ರಿ ಉದ್ಘಾಟಿಸಿದರು ಎಂಬ ಕಾರಣಕ್ಕಾಗಿ ಕೆಲವು ಕಿಡಿಗೇಡಿಗಳು ಕೆಲವರ ಪ್ರಚೋದನೆಯಿಂದ ರೈಲಿನ ಮೇಲೆ ಕಲ್ಲುತೂರಾಟ ನಡೆಸುತ್ತಿರುವುದು ಖಂಡನೀಯ ಎಂದರು.
ಶಾಸಕ ಹಾಗೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಅಡಿಕೆ ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ. ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ಕೆಲವರು ಅಡಿಕೆ ಬೆಲೆ ಕುಸಿಯುತ್ತಿದೆ ಇದಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಈ ಆತಂಕ ಬೇಡ. ರಾಜ್ಯ ಸರ್ಕಾರ ಕೂಡ ಅಡಿಕೆ ಬೆಳೆಗಾರರ ನೆರವಿಗೆ ಬರಬೇಕು. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಎಲೆಚುಕ್ಕಿ ರೋಗಕ್ಕೆ ಸಂಬಂಧಿಸಿದಂತೆ 10 ಕೋಟಿ ರೂ.ಗಳ ನಿಧಿಯನ್ನು ಇಟ್ಟಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಈ ಹಣವನ್ನು ವಾಪಾಸು ತೆಗೆದುಕೊಂಡಿದೆ. ಆದ್ದರಿಂದ ಆ ಹಣವನ್ನು ಮತ್ತೆ ಸಂಶೋಧನೆಗಾಗಿ ನೀಡಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡ ಮತ್ತು ಮಧ್ಯಮ ವರ್ಗದವರ ಮೇಲೆ ಹೊರೆಯಾಗುತ್ತಿದೆ. ಸರ್ಕಾರಿ ನೌಕರರಿಗೆ ವೇತನ ನೀಡಲು ಕೂಡ ಹಣ ಇಲ್ಲದಂತಾಗಿದೆ. ಅದರಲ್ಲೂ ವಿದ್ಯುತ್ ದರವನ್ನು ಏರಿಸಲಾಗಿದೆ. ಇಂಧನ ಸಚಿವರು ಸುಮ್ಮನೆ ಕುಳಿತಿದ್ದಾರೆ. ಲೋಡ್ ಶೆಡ್ಡಿಂಗ್ ಬೇರೆ ಇದೆ. ಇದೆಲ್ಲವೂ ಸರ್ಕಾರದ ಉಚಿತ ಯೋಜನೆಯಿಂದ ಆಗಿರುವ ತೊಂದರೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಪ್ರಮುಖರಾದ ರುದ್ರೇಗೌಡರು, ಟಿ.ಡಿ. ಮೇಘರಾಜ್, ಗಿರೀಶ್ ಪಟೇಲ್, ಸಂತೋಷ್ ಬಳ್ಳೇಕೆರೆ, ಶಿವರಾಜ್, ಕೆ.ವಿ. ಅಣ್ಣಪ್ಪ ಮುಂತಾದವರು ಇದ್ದರು.
ಬಾಕ್ಸ್:

ಶಿವಮೊಗ್ಗ: ಯಾರೂ ಬಿಜೆಪಿ ಬಿಡುತ್ತಿಲ್ಲ. ಈ ಕುರಿತು ಕಾಂಗ್ರೆಸ್ ಹುಯಿಲೆಬ್ಬಿಸಿದೆ ಅμÉ್ಟೀ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮತನಾಡಿದ ಅವರು, ಸರ್ಕಾರದಲ್ಲಿ ಭ್ರμÁ್ಟಚಾರ ಹೆಚ್ಚಾಗಿದೆ. ಅವರ ಶಾಸಕರೇ ಕೋಪಗೊಂಡಿದ್ದಾರೆ. ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಜನರ ಮನಸ್ಸು ಬೇರೆಡ ಸೆಳೆಯಲು ಕಾಂಗ್ರೆಸ್‍ನವರೇ ಮಾಡಿದ ಹುನ್ನಾರವಿದು. ಈ ಸರ್ಕಾರ ಹೆಚ್ಚು ದಿನ ಉಳಿಯೊಲ್ಲ ಎಂದರು.

Related posts

ಆಧಾರ್ ಲಿಂಕ್ ಮಾಡದ 11.5 ಕೋಟಿ ‘ಪ್ಯಾನ್ ಕಾರ್ಡ್’ ನಿಷ್ಕ್ರಿಯ..

ಚುನಾವಣಾ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಡಿ.ವಿ ಸದಾನಂದಗೌಡ ಅವರ ಪ್ರತಿಕ್ರಿಯೆ ಏನು ಗೊತ್ತೆ..?

ನ.22ರಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟ ಪ್ರತಿಭಟನೆ.