ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಯೋಧರು , ರಾಜಮಹಾರಾಜರು ಮತ್ತು ದೇಶದ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲು ಮೇರಿ ಮಾಟಿ ಮೇರಾ ದೇಶ್ ಅಮೃತ ಕಳಶ ಯಾತ್ರೆ-ಸಂಸದ ಬಿ.ವೈ. ರಾಘವೇಂದ್ರ

ಶಿವಮೊಗ್ಗ: ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತೆತ್ತ ಯೋಧರು ಮತ್ತು ಭಾರತದ ಪರಂಪರೆಯನ್ನು ಉಳಿಸಿ ಬೆಳೆಸಿ ಮುನ್ನಡೆಸಿದ ರಾಜಮಹಾರಾಜರ ಬಗ್ಗೆ ಮತ್ತು ದೇಶದ ಸಂಸ್ಕಾರ-ಸಂಸ್ಕøತಿಯ ಬಗ್ಗೆ ಯುವಕರಲ್ಲಿ ಅರಿವು ಮೂಡಿಸುವ ಸಲುವಾಗಿ ಕೇಂದ್ರ ಸರ್ಕಾರ ತಾಲೂಕು ಮಟ್ಟದ ಮೇರಿ ಮಾಟಿ ಮೇರಾ ದೇಶ್ ಅಮೃತ ಕಳಶ ಯಾತ್ರೆ ಹಮ್ಮಿಕೊಂಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಅವರು ಇಂದು ನಗರದ ತಾಲೂಕು ಪಂಚಾಯತ್ ಕಚೇರಿ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಿವಮೊಗ್ಗ ನೆಹರು ಯುವಕೇಂದ್ರ, ತಾಲೂಕು ಪಂಚಾಯತ್,ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿದ್ದ ಮೇರಿ ಮಾಟಿ ಮೇರಾ ದೇಶ್ ಅಮೃತ ಕಳಶ ಯಾತ್ರೆಯ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಜಿಲ್ಲೆಯ ಶಿಕಾರಿಪುರದ ಈಸೂರು ಗ್ರಾಮ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾಗಿ ದೇಶದ ಗಮನ ಸೆಳೆದಿತ್ತು. ಕೆಳದಿ ಶಿವಪ್ಪ ನಾಯಕರು ಕೂಡ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇಡೀ ದೇಶದಲ್ಲಿ ಲಕ್ಷಾಂತರ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಪೂರೈಸಿದ ಆಜಾದಿ ಕಾ ಅಮೃತ ಮಹೋತ್ಸವ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷೆಯಂತೆ ಯುವಶಕ್ತಿಗೆ ಅರಿವು ಮೂಡಿಸುವ ಕೆಲಸವನ್ನು ದೇಶದ ಹಿತದೃಷ್ಟಿಯಿಂದ ಜಿಲ್ಲಾಡಳಿತ ಈ ಯೋಜನೆ ಮಾಡಿದೆ. ದೆಹಲಿಯಲ್ಲಿ ಕೂಡ ಪ್ರಮುಖ ರಸ್ತೆಯಲ್ಲಿ ಕರ್ತವ್ಯ ಪಥ ಎಂದು ಘೋಷಣೆ ಮಾಡಿ ದೇಶದ 8 ಲಕ್ಷ ಗ್ರಾಮಗಳಿಂದ ಸಸಿ ಮತ್ತು ಮಣ್ಣು ತಂದು ಅಲ್ಲಿ ಸಸಿ ನೆಡುವ ಪುಣ್ಯದ ಕಾರ್ಯ ಮಾಡಲಾಗುತ್ತಿದೆ. ಇದರಲ್ಲಿ ಭಾಗವಹಿಸಿದ ಒಂದು ಅವಕಾಶ ನಿಮಗೂ ಸಲ್ಲತ್ತೆ ಎಂದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಇದು ಮಣ್ಣು ಮಾತ್ರ ಅಲ್ಲ. ಮಾತೃಭೂಮಿ ಎಂದು ನಾವು ಈ ದೇಶದ ಮಣ್ಣನ್ನು ಪೂಜಿಸುತ್ತೇವೆ. ಉದಾತ್ತ ಭಾವನೆಯಿಂದ ನಾವು ಈ ಮಣ್ಣನ್ನು ಗೌರವಿಸುತ್ತೇವೆ. ಕರ್ತವ್ಯ ಪಥ ಈ ದೇಶಕ್ಕೆ ಮಾತ್ರವಲ್ಲ. ಜಗತ್ತಿಗೇ ಶಕ್ತಿ ತುಂಬುವಂಥದ್ದು. ವಿವೇಕಾನಂದರು ವಿದೇಶ ಯಾತ್ರೆ ಮುಗಿಸಿ ನಮ್ಮ ದೇಶಕ್ಕೆ ವಾಪಾಸ್ ಬಂದಾಗ ಈ ಮಣ್ಣಿನಲ್ಲಿ ಹೊರಳಾಡಿ ಮಾತೃಭೂಮಿಗೆ ಬಂದ ಸಂತಸ ವ್ಯಕ್ತಪಡಿಸಿ, ವಿದೇಶ ಯಾತ್ರೆಯ ಕಳಂಕವೇನಾದರೂ ಇದ್ದರೆ ಈ ಮಾತೃಭೂಮಿ ಹೋಗಲಾಡಿಸಲಿ ಎಂದಿದ್ದರು.
ಕ್ಷಮಿಸುವ ಗುಣ ಮಾತ್ರಭೂಮಿಗೆ ಮಾತ್ರ ಸಾಧ್ಯ. ಈ ದೇಶದ ಮಣ್ಣಿನ ಗುಣವೇ ಅಂತದ್ದು, ಮಾತೃಭೂಮಿಯ ಋಣ ತೀರಿಸಲಾಗುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ನಮ್ಮ ದೇಶದ ಸಂವಿಧಾನ ಮತ್ತು ಕಾನೂನು ಪಾಲಿಸುತ್ತೇವೆ. ದೇಶಕ್ಕೆ ಅಪಮಾನ ಆಗುವ ರೀತಿಯಲ್ಲಿ ನಡೆದುಕೊಳ್ಳುವುದಿಲ್ಲ. ದೇಶಕ್ಕೆ ಗೌರವ ತರುತ್ತೇವೆ ಎಂಬ ಪ್ರಮಾಣ ವಚನ ಸ್ವೀಕರಿಸಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಅಮೃತ ಕಳಶ ಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಜಿ.ಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ನೆಹರು ಯುವ ಕೇಂದ್ರದ ಅಧಿಕಾರಿ ಉಲ್ಲಾಸ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಶಿವಮೊಗ್ಗ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತ್ ಸ್ಕೌಟ್ಸ್ –ಗೈಡ್ಸ್, ಭಾರತೀಯ ಅಂಚೆ ಇಲಾಖೆ ಹಾಗೂ ವಿವಿಧ ಸಂಘಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಭಾಗವಹಿಸಿದ್ದರು.

Related posts

ಹಳೆಯ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಲು ಅನುಮತಿ ನೀಡಿ ಆದೇಶ

ಆರ್ಯವೈಶ್ಯ ಮಹಿಳಾ ಮಹಾಸಭಾದಿಂದ ಸಮಾಜಮುಖಿ ಕೆಲಸ:ಡ್ಡ ಮಹಿಳಾ ಶಕ್ತಿಯಾಗಿ ಬೆಳೆದಿದೆ-ಶಾಸಕ ಎಸ್.ಎನ್. ಚನ್ನಬಸಪ್ಪ

ಕಾವೇರಿ ಹೋರಾಟದ ಅಖಾಡಕ್ಕಿಳಿದ ಮಾಜಿ ಪಿಎಂ ಹೆಚ್.ಡಿ ದೇವೇಗೌಡರು: ಮಧ್ಯಸ್ಥಿಕೆ ವಹಿಸುವಂತೆ  ಪ್ರಧಾನಿ ಮೋದಿಗೆ ಪತ್ರ .