ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಪೋಕ್ಸೋ ಕಾಯ್ದೆ ಬಗ್ಗೆ ಪೋಲೀಸ್ ಅಧಿಕಾರಿಗಳಿಗೆ ಹೆಚ್ಚಿನ ಅರಿವು ಅಗತ್ಯ-ಮಂಜುನಾಥ್ ನಾಯಕ್

ಶಿವಮೊಗ್ಗ: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ ಬಗ್ಗೆ ಪೋಲೀಸ್ ಅಧಿಕಾರಿಗಳಿಗೆ ಹೆಚ್ಚಿನ ಅರಿವು ಅಗತ್ಯವಿದೆ. ಕೆಲವೊಂದು ಸೂಕ್ಷ್ಮ ಕಾಯ್ದೆಗಳ ಬಗ್ಗೆ ಯಾವುದೇ ಸಂಶಯವಿದ್ದರೂ ಇಂತಹ ಕಾರ್ಯಾಗಾರಗಳಲ್ಲಿ ನಿಮ್ಮ ಸಂಶಯ ಬಗೆಹರಿಸಿಕೊಳ್ಳಿ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ್ ನಾಯಕ್ ಹೇಳಿದ್ದಾರೆ.
ಅವರು ಇಂದು ನಗರದ ಡಿ.ಎ.ಆರ್. ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೋಲೀಸ್ ಇಲಾಖೆ ಶಿವಮೊಗ್ಗ ಇವರ ಸಹಯೋಗದೊಂದಿಗೆ ಪೋಕ್ಸೋ ಕಾಯ್ದೆ ಕುರಿತು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅರಿವು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪೋಕ್ಸೋ ಕಾಯ್ದೆಯಲ್ಲಿ ಸಂತ್ರಸ್ಥೆಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತದ್ದು ಸಾಕ್ಷಿ ವಿಚಾರಣೆ ಕಾರ್ಯದಲ್ಲಿ ಇರುವ ತೊಂದರೆ ಮತ್ತು ಈ ಕಾಯ್ದೆ ಜಾರಿಗೊಳಿಸುವಾಗ ಕಂಡು ಬರುವ ಕೆಲವು ಲೋಪದೋಷಗಳ ಬಗ್ಗೆ ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆಯ ನಡುವೆ ಅರಿವಿನ ಕೊರತೆ ಇರುತ್ತದೆ. ಅದಕ್ಕಾಗಿ ಯಾವುದೇ ಸಂಶಯವಿದ್ದರು ಇಲ್ಲಿ ಬಗೆಹರಿಸಿಕೊಳ್ಳಬಹುದು ಎಂದರು.
ಅಜ್ಜನೆಟ್ಟ ಆಲದಮರ ಎಂಬಂತೆ ಕೆಲವೊಂದು ವಿಚಾರಗಳಲ್ಲಿ ಹಳೆ ಪದ್ದತಿಗಳಿಗೆ ಜೋತು ಬಿದ್ದಿದ್ದೇವೆ. ಕಾಲಕಾಲಕ್ಕೆ ಕಾಯ್ದೆಗಳು ಬದಲಾಗುತ್ತಿರುತ್ತವೆ. ಕಾನೂನು ಪುಸ್ತಕಗಳನ್ನು ಓದುವುದು ಅತಿ ಅವಶ್ಯವಾಗಿದೆ. ಯಾವುದೇ ಕಾಯ್ದೆಗೆ ತಿದ್ದುಪಡಿ ತಂದು ಹೊಸ ಕಾಯ್ದೆಗೆ ಜಾರಿಗೆ ತರುವಾಗ ಜನಪ್ರತಿನಿಧಿಗಳು ಲೋಕಸಭೆಮತ್ತು ವಿಧಾನಸಭೆಯಲ್ಲಿ ಚರ್ಚೆ ಮಾಡಿ ಜಾರಿಗೆ ತರಬೇಕು. ಈ ರೀತಿ ಜಾರಿಗೆ ಬಂದ ಕಾಯ್ದೆಗಳಲ್ಲೂ ಕೂಡ ಸರಿಯಾಗಿ ಚರ್ಚೆ ನಡೆದಿಲ್ಲ ಎಂಬ ಅಭಿಪ್ರಾಯವನ್ನು ಸುಪ್ರೀಂಕೋರ್ಟ್‍ನ ಕೆಲ ಹಿರಿಯ ನ್ಯಾಯಾಧೀಶರು ವ್ಯಕ್ತಪಡಿಸಿದ್ದಾರೆ ಎಂದರು.
ಪೊಲೀಸ್ ಇಲಾಖೆಯ ಜಿಲ್ಲಾ ಕೇಂದ್ರಗಳಲ್ಲಿ ನಿವೃತ್ತ ಹಿರಿಯ ಅನುಭವಿ ಪೊಲೀಸ್ ಅಧಿಕಾರಿಗಳು ಅಥವಾ ಅಭಿಯೋಜಕರು, ಜಿಲ್ಲಾನಿವೃತ್ತ ನ್ಯಾಯಾಧೀಶರನ್ನು ಪೊಲೀಸ್ ಇಲಾಖೆ ನೇಮಕ ಮಾಡಿಕೊಂಡು ಒಂದು ಹೆಲ್ಪ್‍ಡೆಸ್ಕ್‍ನ್ನು ತೆರೆಯಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‍ಕುಮಾರ್ ಮಾತನಾಡಿ, ಈ ರೀತಿಯ ಕಾರ್ಯಾಗಾರಗಳು ನಿರಂತರವಾಗಿ ನಡೆಯಬೇಕು. ಪರಿಣಿತರಿದ್ದಲ್ಲಿ ಮಾತ್ರ ಪ್ರಕರಣಗಳು ಅಂತ್ಯ ಕಾಣುತ್ತದೆ. ಆರೋಪಿಗೆ ಶಿಕ್ಷೆಯಾದಾಗ ಮಾತ್ರ ಫಲ ಸಿಗುತ್ತದೆ. ಕರ್ತವ್ಯಲೋಪದಿಂದಾಗಿ ಒಬ್ಬ ಅಪರಾಧಿ ನಿರಾಪರಾಧಿ ಎಂದೆನ್ನಿಸಿಕೊಂಡರೆ ನಮ್ಮ ಶ್ರಮ ವ್ಯರ್ಥವಾಗುತ್ತದೆ. ಯಾವುದೇ ಕಾರಣಕ್ಕೂ ನಿರಾಪರಾಧಿಗೆ ಶಿಕ್ಷೆಯಾಗಬಾರದು. ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆಯ ನಡುವ ಅವರವರ ಕರ್ತವ್ಯದ ಅನುಗುಣವಾಗಿ ಸಾಕಷ್ಟು ಬಾರಿ ಭಿನ್ನಾಭಿಪ್ರಾಯಗಳು ಬರುತ್ತದೆ. ಅದನ್ನು ಈ ಕಾರ್ಯಗಾರದಲ್ಲಿ ನಿವಾರಿಕೊಳ್ಳಿ ಎಂದರು.
ಪೋಕ್ಸೊ ಪ್ರಕರಣಗಳಲ್ಲಿ ಅಗತ್ಯವಾಗಿ ಒದಗಿಸಬೇಕಾಗಿರುವ ಸಾಕ್ಷಿ ಮತ್ತು ನ್ಯಾಯಾಲಯವು ಗಮನಿಸಿರುವ ಲೋಪದೋಷಗಳು, ಸಂತ್ರಸ್ಥೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವಾಗ ಅನುಸರಿಸಬೇಕಾದ ಮುಂಜಾಗೃತ ಕ್ರಮಗಳು. ತನಿಖಾ ಕಾರ್ಯದಲ್ಲಿ ತನಿಖಾಧಿಕಾರಿಗಳು ಅನುಸರಿಸಬೇಕಾದ ಕ್ರಮಗಳು ಮತ್ತು ದೋಷರೂಪಣೆ ಪಟ್ಟಿ ಸಲ್ಲಿಸುವಾಗ ಪರಿಶೀಲಿಸಬೇಕಾದ ಅಂಶಗಳು ಎಂಬ ವಿಚಾರವಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಗಾರ ನಡೆಯಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಲತಾ, ಮೋಹನ್ ಜಿ.ಎಸ್. ಹಿರಿಯ ಸಿವಿಲ್ ನ್ಯಾಯಾಧೀಶರು, ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಚಂದನ್ ಸಿ.ಎಸ್., ಸರ್ಕಾರಿ ಅಭಿಯೋಜಕರಾದ ಸುರೇಶ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಅನಿಲ್‍ಕುಮಾರ್ ಭುಮ್‍ರೆಡ್ಡಿ, ಉಪ ಅಧೀಕ್ಷಕರಾದ ಬಿ.ಬಾಲರಾಜು, ಸರ್ಕಾರಿ ಅಭಿಯೋಜಕರಾದ ಮಮತಾ, ಡಾ.ಅನುಷಾ, ಡಾ.ಚಿದಾನಂದ್ ಇನ್ನಿತರ ನ್ಯಾಯಾಧೀಶರು ಮತ್ತು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು

Related posts

ನೀರಾವರಿ ವಿಷಯದಲ್ಲಿ ರಾಜಿ ಇಲ್ಲ- ಸರ್ವಪಕ್ಷ ಸಭೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ನುಡಿ.

ಅಹವಾಲು ತಗೊಳ್ಳದು ಮುಖ್ಯವಲ್ಲ. ಉತ್ತರ ಕೊಡೋದು ಮುಖ್ಯ-ಶಿಕ್ಷಣ ಸಚಿವ ಮಧು ಬಂಗಾರಪ್ಪ

ರಾಜ್ಯದ ವಿದ್ಯುತ್‌ ಉತ್ಪಾದನೆ ಸ್ಥಾಪಿತ ಸಾಮರ್ಥ್ಯಕ್ಕಿಂತ ಕುಸಿತ -ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ  ತರಾಟೆ