ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಕೆ.ಎಸ್. ಈಶ್ವರಪ್ಪ ಅಪ್ರಬುದ್ಧ ರಾಜಕಾರಣಿ,ಲಜ್ಜೆಗೆಟ್ಟ ವ್ಯಕ್ತಿ-ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ವಾಗ್ದಾಳಿ.

ಶಿವಮೊಗ್ಗ: ಕೆ.ಎಸ್. ಈಶ್ವರಪ್ಪ ಅಪ್ರಬುದ್ಧ ರಾಜಕಾರಣಿ. ಬಾಯಿ ಹರುಕ, ಹಗುರ ಮಾತುಗಾರ, ಲಜ್ಜೆಗೆಟ್ಟ ವ್ಯಕ್ತಿ ಜೊತೆಗೆ ಭ್ರಷ್ಟಾಚಾರಿ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಇಂದು ಈಶ್ವರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪನವರು ನನಗೆ ತಲೆಕೆಟ್ಟವನು ಎಂದಿದ್ದಾರೆ. ಆದರೆ ಅವರಿಗೆ ತಲೆ ಯಾವಾಗ ಸರಿ ಇತ್ತು. ಅಧಿಕಾರದ ಹಪಾಹಪಿಗೆ ಒಳಗಾದ ಅವರು ಸಂವಿಧಾನವನ್ನೂ ಓದಿಲ್ಲ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯೂ ಇಲ್ಲ. ಬಾಯಿಗೆ ಬಂದಹಾಗೆ ಮಾತನಾಡುವುದೇ ಪ್ರತಿಭೆ ಎಂದು ಎಂದುಕೊಂಡಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿದೆಯೇ. ಅವರಿಗೆ ಪದಗಳ ಅರ್ಥವೇ ಗೊತ್ತಿಲ್ಲ. ಅವರ ಬಾಯಿಯೊಂದು ಗಟಾರವಾಗಿದೆ ಎಂದರು.
ಈಶ್ವರಪ್ಪನವರು ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರಿಗೆ ಭ್ರಷ್ಟಾಚಾರಿಗಳು ಎಂದು ಕರೆಯುತ್ತಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹಕ್ಕು ಅವರಿಗಿದೆಯೇ. ಡಿ.ಕೆ. ಶಿವಕುಮಾರ್ ಮತ್ತೆ ಜೈಲಿಗೆ ಹೋಗುತ್ತಾರೆ ಎಂದು ಹೇಳುತ್ತಾರೆ. ಅವರೇನು ನ್ಯಾಯಾಧೀಶರೇ. ಜೈಲಿಗೆ ಹೋದವರನ್ನು ಹೇಗೆ ಸಹಿಸಿಕೊಳ್ಳುತ್ತೀರಿ ಎಂದು ಪ್ರಶ್ನೆ ಮಾಡುತ್ತಾರೆ. ಬಿ.ಎಸ್. ಯಡಿಯೂರಪ್ಪ ಅವರು ಜೈಲಿಗೆ ಹೋಗಿ ಬಂದಾಗ ಇವರು ಪ್ರಶ್ನೆ ಮಾಡಿದ್ದರೇ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಶ್ವರಪ್ಪ ಅವರ ಕುರಿತಂತೆ ಒಂದು ಮಾತನಾಡಿದ್ದಾರೆ. ಅವರ ಮೆದುಳಿಗೂ ನಾಲಿಗೆಗೂ ಸಂಪರ್ಕವಿಲ್ಲ ಎಂದಿದ್ದಾರೆ. ಅದನ್ನು ಈಶ್ವರಪ್ಪ ಮತ್ತೆ ಮತ್ತೆ ಸಾಬೀತುಪಡಿಸುತ್ತಲೇ ಇದ್ದಾರೆ. ಅವರ ಭ್ರಷ್ಟಾಚಾರದ ಬಗ್ಗೆ ನಾನೂ ಸಾಕಷ್ಟು ಮಾತನಾಡಬಹುದು. ಈಶ್ವರಪ್ಪ ಅವರು ಕಂದಾಯ, ವಿದ್ಯುತ್, ನೀರಾವರಿ ಸಚಿವರಾಗಿದ್ದಾಗ ಏನೆಲ್ಲಾ ಮಾಡಿದರು, ಎಷ್ಟುಹಣ ಲೂಟಿ ಮಾಡಿದ್ದಾರೆ ಎಂಬುದು ನನಗೂ ಗೊತ್ತಿದೆ. ಅವರು ಹೀಗೇ ಮಾತುಗಳನ್ನು ಮುಂದುವರಿಸಿದರೆ ದಾಖಲೆಗಳ ಸಮೇತ ಹೊರತರುವೆ ಎಂದರು.
ಈಶ್ವರಪ್ಪ ಒಬ್ಬ ವಿಚಿತ್ರ ಮನುಷ್ಯ ರೂಪವಷ್ಟೆ. ಈಗಾಗಲೇ ಅವರ ಪಕ್ಷದಿಂದಲೇ ಅವರನ್ನು ಮೂಲೆಗುಂಪು ಮಾಡಲಾಗಿದೆ. ನಾನಾದರೂ ಪಕ್ಷದ ರಾಜ್ಯ ವಕ್ತಾರನಾಗಿದ್ದೇನೆ. ಅವರಿಗೆ ಯಾವ ಹುದ್ದೆ ಇದೆ. ಅವರ ಕೂಡುಗೆ ಶಿವಮೊಗ್ಗಕ್ಕೆ ಏನಿದೆ. ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಟ್ಟು ಅವರು ಯಾವ ಅಭಿವೃದ್ಧಿಯನ್ನು ಮಾಡಿದ್ದಾರೆ. ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಕೆಲಸಗಳು ಹಳ್ಳ ಹಿಡಿದರೂ ಉತ್ತಮವಾಗಿವೆ ಎಂದು ಹೇಳುತ್ತಾರೆ. ಪ್ರಭಾವ ಬೀರಿ ಪ್ರಶಸ್ತಿ ತರುತ್ತಾರೆ. ಸ್ಮಾರ್ಟ್ ಸಿಟಿಯ ಭ್ರಷ್ಟಾಚಾರದ ಬಗ್ಗೆ ಪ್ರೆತ್ಯೇಕ ತನಿಖೆಯೇ ಆಗಬೇಕು ಎಂದರು.
ಬಿ.ಎಸ್. ಯಡಿಯೂರಪ್ಪ ಅವರನ್ನು ಕಡೆಗಣಿಸಿದ ವ್ಯಕ್ತಿ ಈಶ್ವರಪ್ಪ. ಅವರು ಜೈಲಿನಲ್ಲಿದ್ದಾಗ ಅವರ ವಿರುದ್ಧವೇ ರಾಜ್ಯಪಾಲರಿಗೆ ದೂರು ಕೊಟ್ಟವರು. ಯಾರಿಗೆ ಯಾವ ರೀತಿ ದೂರು ಕೊಡಬೇಕೆಂಬ ವಿಷಯವೂ ಅವರಿಗೆ ಗೊತ್ತಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್, ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್, ಎಸ್.ಕೆ. ಮರಿಯಪ್ಪ, ಧೀರರಾಜ್ ಹೊನ್ನವಿಲೆ, ಗಿರೀಶ್ ಮುಂತಾದವರಿದ್ದರು.

Related posts

 ತಾಯಿ ಚಾಮುಂಡೇಶ್ವರಿ ಸನ್ನಿದಾನದಲ್ಲಿ ಹರಕೆ ತೀರಿಸಿದ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್.

ರಾಜ್ಯದಲ್ಲಿ ಈ ಬಾರಿಯೂ ದಸರಾ ರಜೆ ಕಡಿತ.

ಅಪಘಾತದಲ್ಲಿ ಸಾವನ್ನಪ್ಪುವ ಸಂಖ್ಯೆಯಲ್ಲಿ ಯುವ ಸಮೂಹವೇ ಹೆಚ್ಚು- ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಕಳವಳ.