ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

‘ಝೀ-ಸೋನಿ’ ವೀಲನಕ್ಕೆ ಕೂಡಿ ಬಂತು ಕಾಲ..

ನವದೆಹಲಿ: ಭಾರತದ ಎರಡು ಪ್ರಮುಖ ಮಾಧ್ಯಮ ಸಂಸ್ಥೆಗಳಾದ ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ (ಝೀ) ಹಾಗೂ ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ (ಎಸ್ಪಿಐಎನ್) ವಿಲೀನಕ್ಕೆ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ (ಎನ್ಸಿಎಲ್ಟಿ) ಒಪ್ಪಿಗೆ ನೀಡಿದೆ.

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಮತ್ತು ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ ವಿಲೀನಕ್ಕೆ ಒಪ್ಪಿಗೆ ನೀಡಿದೆ. ವಿಲೀನಕ್ಕೆ ಅನುಮೋದನೆ ನೀಡಿರುವ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ವಿಲೀನದ ಕುರಿತಾದ ಎಲ್ಲಾ ಆಕ್ಷೇಪಣೆಗಳನ್ನೂ ವಜಾಗೊಳಿಸಿದೆ. ಇದರಿಂದ ಕಳೆದ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲದಿಂದ ತೂಗುಯ್ಯಾಲೆಯಲ್ಲಿದ್ದ ಬಹುನಿರೀಕ್ಷಿತ ವಿಲೀನಕ್ಕೆ ಹಾದಿ ಸುಗಮವಾಗಿದೆ.

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಮತ್ತು ಕಲ್ವರ್ ಮ್ಯಾಕ್ಸ್ ಎಂಟರ್ಟೈನ್ಮೆಂಟ್ (ಈ ಹಿಂದಿನ ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ) ನಡುವಿನ ವಿಲೀನದ ಕುರಿತು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಇದೀಗ ಒಂದು ತಿಂಗಳ ನಂತರ ತೀರ್ಪು ಪ್ರಕಟಿಸಿದೆ.

ಎಚ್.ವಿ. ಸುಬ್ಬಾ ರಾವ್ ಮತ್ತು ಮಧು ಸಿನ್ಹಾ ಅವರನ್ನೊಳಗೊಂಡ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಮುಂಬೈ ಪೀಠವು ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಮತ್ತು ಕಲ್ವರ್ ಮ್ಯಾಕ್ಸ್ ಎಂಟರ್ಟೈನ್ಮೆಂಟ್ನ ವಿಲೀನಕ್ಕೆ ಒಪ್ಪಿಗೆ ನೀಡಿದೆ.

ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಹಾಗೂ ಕಲ್ವರ್ ಮ್ಯಾಕ್ಸ್ ಎಂಟರ್ಟೈನ್ಮೆಂಟ್ನ ವಿಲೀನಕ್ಕೆ ತಡೆ ಕೋರಿ ಝೀನ ಸಾಲದಾತರಾದ ಆಕ್ಸಿಸ್ ಫೈನಾನ್ಸ್, ಜೆಸಿ ಫ್ಲವರ್ ಅಸೆಟ್ ರೀಕನ್ಸ್ಟ್ರಕ್ಷನ್ ಕಂ, ಐಡಿಬಿಐ ಬ್ಯಾಂಕ್, ಐಮ್ಯಾಕ್ಸ್ ಕಾರ್ಪೊರೇಷನ್ ಮತ್ತು ಐಡಿಬಿಐ ಟ್ರಸ್ಟಿಶಿಪ್ಗಳು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಮೊರೆ ಹೋಗಿದ್ದವು. ಇವರ ಆಕ್ಷೇಪಗಳನ್ನು ಆಲಿಸಿದ ನಂತರ ಪೀಠವು ತೀರ್ಪನ್ನು ಕಾಯ್ದಿರಿಸಿತ್ತು.

ಡಿಸೆಂಬರ್ 2021ರಲ್ಲಿ ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಹಾಗೂ ಸೋನಿ ಪಿಕ್ಟರ್ಸ್ ನೆಟ್ವರ್ಕ್ಸ್ ಇಂಡಿಯಾ ತಮ್ಮ ವ್ಯವಹಾರಗಳನ್ನು ಸಂಯೋಜಿಸಲು ಒಪ್ಪಂದ ಮಾಡಿಕೊಂಡಿದ್ದವು. ಈ ಸಂದರ್ಭದಲ್ಲಿ ಸೋನಿ ಮತ್ತು ಝೀ ತಮ್ಮ ತಮ್ಮ ಟಿವಿ ವಾಹಿನಿಗಳು, ಚಲನಚಿತ್ರ ಸ್ವತ್ತುಗಳು ಮತ್ತು ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳನ್ನು ವಿಲೀನಗೊಳಿಸಲು ನಿರ್ಧರಿಸಿದ್ದವು.

ಬಳಿಕ, ವಿಲೀನಕ್ಕೆ ರಾಷ್ಟ್ರೀಯ ಷೇರು ಮಾರುಕಟ್ಟೆ (ಎನ್ಎಸ್ಇ), ಬಾಂಬೆ ಷೇರು ಮಾರುಕಟ್ಟೆ (ಬಿಎಸ್ಇ) ಮತ್ತು ಇತರ ನಿಯಂತ್ರಣ ಸಂಸ್ಥೆಗಳಾದ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಹಾಗೂ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ದಿಂದ ಅನುಮೋದನೆ ಪಡೆದುಕೊಂಡ ಎರಡೂ ಮಾಧ್ಯಮ ಸಂಸ್ಥೆಗಳು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯನ್ನು ಸಂಪರ್ಕಿಸಿದ್ದವು. ಇಲ್ಲಿ ಝೀನ ಸಾಲದಾತರಿಂದ ಆಕ್ಷೇಪ ವ್ಯಕ್ತವಾದ ಕಾರಣ ವಿಲೀನ ವಿಳಂಬವಾಗಿತ್ತು.

ಒಪ್ಪಂದದ ಭಾಗವಾಗಿ ಪುನೀತ್ ಗೋಯೆಂಕಾ ವಿಲೀನಗೊಂಡ ಘಟಕದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕರಾಗಲಿದ್ದಾರೆ. ದೇಶದಲ್ಲಿ ಎರಡು ಚಾನೆಲ್ ಗಳ ವಿಲೀನದ ಮೂಲಕ ದೈತ್ಯ ಮಾಧ್ಯಮ ಸಂಸ್ಥೆಯೊಂದು ಜನ್ಮ ತಾಳಲಿದೆ.‘

 

Related posts

ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಿಂದೂಗಳನ್ನು ಸ್ವಾಭಿಮಾನಿಗಳನ್ನಾಗಿ ಮಾಡುವ ಕೆಲಸ ಹಿಂದಿನಿಂದಲೂ ಮಾಡುತ್ತಿದೆ-ಕೆ.ಆರ್. ಸುನೀಲ್

ಯುಪಿ ಸಿಎಂ ಯೋಗಿ ಆದಿತ್ಯನಾಥ್  ಭೇಟಿ ಮಾಡಿದ ನಿಖಿಲ್ ಕುಮಾರಸ್ವಾಮಿ: ಚರ್ಚೆ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಶಿ.ಜು.ಪಾಶ ನೇಮಕ.