ಶಿವಮೊಗ್ಗ: ಭಾರತವು ವೈವಿಧ್ಯ ಸಾಂಸ್ಕೃತಿಕ ಪರಂಪರೆ ಹೊಂದಿರುವ ದೇಶ ಆಗಿದ್ದು, ವಿವಿಧತೆಯಲ್ಲಿ ಏಕತೆ ಮೂಡಿಸುವ ಭಾರತೀಯ ಸಂಸ್ಕೃತಿ ನಮ್ಮದು. ಎಲ್ಲ ದೇಶಗಳಿಗಿಂತ ವಿಭಿನ್ನ ದೇಶ ನಮ್ಮದು ಎಂದು ಇನ್ನರ್ವ್ಹೀಲ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಶ್ವೇತಾ ಆಶಿತ್ ಹೇಳಿದರು.
ಮಥುರಾ ಪಾರಾಡೈಸ್ನಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಇನ್ನರ್ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ನಮ್ಮ ಸಂಸ್ಕೃತಿ ಪರಂಪರೆ ಮರೆಯಾಗುತ್ತಿರುವುದು ಬೇಸರದ ಸಂಗತಿ ಎಂದು ತಿಳಿಸಿದರು.
ಭಾರತೀಯ ಶ್ರೇಷ್ಠ ಸಂಸ್ಕೃತಿ ಪರಂಪರೆ ಹಾಗೂ ಆಚಾರ ವಿಚಾರಗಳ ಬಗ್ಗೆ ಮುಂದಿನ ಯುವ ಪೀಳಿಗೆಗೆ ಕಲಿಸಬೇಕಾದ ಜವಾಬ್ದಾರಿ ಪೋಷಕರ ಮೇಲಿದೆ. ಹಿರಿಯರು ಮಾರ್ಗದರ್ಶನ ನೀಡುವ ಮೂಲಕ ಮಕ್ಕಳ ಉತ್ತಮ ಭವಿಷ್ಯ ರೂಪಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ವಸ್ತç ವಿನ್ಯಾಸಕಿ ಉಮಾ ವೆಂಕಟೇಶ್ ಇನ್ನರ್ವ್ಹೀಲ್ ಮಹಿಳೆಯರಿಗೆ, ಯುವತಿಯರಿಗೆ ವಿವಿಧ ರಾಜ್ಯಗಳ ಸೀರೆ ಧರಿಸುವ ರೀತಿ ಬಗ್ಗೆ ಹಾಗೂ ಅದರ ಮಹತ್ವದ ಕುರಿತು ಮಾಹಿತಿ ನೀಡಿದರು. ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಸೀರೆ ಉಡಿಸುವ ಮೂಲಕ ಗಿನ್ನೆಸ್ ದಾಖಲೆ ಮಾಡುವ ಉದ್ದೇಶವಿದೆ ಎಂದು ತಿಳಿಸಿದರು.
ಇನ್ನರ್ವ್ಹೀಲ್ ಕುಟುಂಬದ ಸದಸ್ಯರು ವಿವಿಧ ರಾಜ್ಯಗಳ ವೈವಿಧ್ಯಮಯ ಉಡುಗೆ ತೊಡುಗೆಗಳನ್ನು, ಸಂಸ್ಕೃತಿ ಬಿಂಬಿಸುವ ಉಡುಪುಗಳನ್ನು ಧರಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಗೇಮ್ಸ್ಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯದರ್ಶಿ ವಾಗ್ದೇವಿ ಬಸವರಾಜ್, ಇನ್ನರ್ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ್ಕುಮಾರ್, ವಿಜಯ ರಾಯ್ಕರ್, ವಿಜಯ ಶಶಿಧರ್, ವೀಣಾ ಹರ್ಷ, ನಿರ್ಮಲಾ ಮಹೇಂದ್ರ, ರಾಜೇಶ್ವರಿಪ್ರತಾಪ್, ವಾಣಿ ಪ್ರವೀಣ್, ವೇದಾ ನಾಗರಾಜ್, ಜ್ಯೋತಿ ಸುಬ್ಬೇಗೌಡ, ಡಾ. ಕೌಸ್ತುಭ ಅರುಣ್, ವೀಣಾ ಸುರೇಶ್, ಜಯಂತಿ ವಾಲಿ ಮತ್ತಿತರರು ಉಪಸ್ಥಿತರಿದ್ದರು.