ಶಿವಮೊಗ್ಗ: ನಗರದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಸಭಾ ಗಣಪತಿಗೆ ಮುಸ್ಲಿಂ ಮುಖಂಡರು ಸೇರಿದಂತೆ “ಸೌಹಾರ್ದವೇ ಹಬ್ಬ” ಶಾಂತಿ ನಡಿಗೆ ಸಮಿತಿ ವತಿಯಿಂದ ಇಂದು ಸಮಿತಿಯ ಪ್ರಮುಖರು ಮಾಲಾರ್ಪಣೆ ಮಾಡುವ ಮೂಲಕ ಸೌಹಾರ್ದ ಸಾರಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಚಾಲಕ ವಕೀಲ ಕೆ.ಪಿ.ಶ್ರೀಪಾಲ, ಶಿವಮೊಗ್ಗದ ಗಣಪತಿ ಹಬ್ಬದ ಮೆರವಣಿಗೆ ಶಾಂತಿಯುತವಾಗಿ ನಡೆಯಬೇಕು. ಎಲ್ಲಾ ಧರ್ಮದ ಮುಖಂಡರು ಹಬ್ಬದಲ್ಲಿ ಪಾಲ್ಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ನಮ್ಮ ಮುಸ್ಲಿಂ ಮುಖಂಡರು ಕೂಡ ಗಣಪತಿಯ ದರ್ಶನ ಮಾಡಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ. ಸ್ನೇಹ, ಸಾಮರಸ್ಯಗಳೇ ಇಂದು ಬೇಕಾಗಿದೆ. ಧರ್ಮಾಂಧತೆ, ದ್ವೇಷ ಅಳಿಯಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ಓಪನ್ ಮೈಂಡ್ ಸ್ಕೂಲ್ನ ಮುಖ್ಯಸ್ಥ ಕಿರಣ್ಕುಮಾರ್, ಜಾಮಿಯ ಮಸೀದಿ ಸದಸ್ಯ ಮೊಹಮದ್ ಹುಸೇನ್, ಮುಸ್ಲಿಂ ಮುಖಂಡರು ಮತ್ತು ಆಜ್ ಕಾ ಇನ್ಕಿಲಾಬ್ ಪತ್ರಿಕೆಯ ಲಿಯಾಕತ್, ಪ್ರಗತಿಪರ ಹೋರಾಟಗಾರರಾದ ಸುರೇಶ್ ಅರಸಾಳು, ಸಾಹಿತಿ, ಅಂಕಣಕಾರ ಬಿ.ಚಂದ್ರೆಗೌಡ, ರೈತಸಂಘದ ಟಿ.ಎಂ. ಚಂದ್ರಪ್ಪ, ಚೇತನ್, ಪ್ರಸಾದ್ ಮೊದಲಾದವರು ಹಾಜರಿದ್ದರು.
ಹಿಂದೂ ಮಹಾಸಭಾ ಗಣಪತಿ ಕಮಿಟಿಯ ಮುಖ್ಯಸ್ಥರಾದ ದತ್ತಣ್ಣ ಮತ್ತು ಪ್ರಮುಖರು ಹಾಜರಿದ್ದು ಸೌಹಾರ್ದ ಸಮಿತಿಯವರನ್ನು ಗೌರವಪೂರ್ವಕವಾಗಿ ಬರಮಾಡಿಕೊಂಡರು.