ಬೆಂಗಳೂರು: ಭಾನುವಾರ ಶಾಲಾಕಾಲೇಜುಗಳು, ಕೋರ್ಟ್ ಗಳಿಗಳೂ ಸೇರಿ ಎಲ್ಲದಕ್ಕೂ ರಜಾ ದಿನ. ಆದರೂ ಸಹ ಭಾನುವಾರವೂ ಕಲಾಪ ನಡೆಸಿ ಹೈಕೋರ್ಟ್ ಸಿಜೆ ಗಮನ ಸೆಳೆದಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದುಪಡಿಸಿ, ಅಭ್ಯರ್ಥಿಗಳ ತಂದೆಯ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಪರಿಗಣಿಸಿ, ಹೊಸದಾಗಿ ತಾತ್ಕಾಲಿಕ ಪಟ್ಟಿ ಪ್ರಕಟಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿಯನ್ನು ಸಲ್ಲಿಸಲಾಗಿತ್ತು.
ಈ ಮೇಲ್ಮನವಿಯನ್ನ ಹೈಕೋರ್ಟ್ ವಿಭಾಗೀಯ ಪೀಠವು, ರಜಾದಿನವಾದ ನಿನ್ನೆಯ ಭಾನುವಾರದಂದು ವಿಶೇಷ ಕಲಾಪದಲ್ಲಿ ವಿಚಾರಣೆ ನಡೆಸಿತು.
ಏಕ ಸದಸ್ಯ ನ್ಯಾಯಪೀಠ 2023ರ ಜನವರಿ 30ರಂದು ಪ್ರಕಟಿಸಿದ್ದ ಆದೇಶ ಪ್ರಶ್ನಿಸಿ ಜಿ.ವಿ ನಾಗೇಂದ್ರ ಬಾಬು, ಭಾರತಿ ಪಾಟೀಲ್, ಗಣೇಶ್ ಪ್ರಸಾದ್ ಮತ್ತು ಮಮತಾ ಸೇರಿದಂತೆ 130ಕ್ಕೂ ಹೆಚ್ಚು ಅಭ್ಯರ್ಥಿಗಳು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಭಾನುವಾರ ಮುಖ್ಯ ನ್ಯಾಯಮೂರ್ತಿ ಪಿ.ಬಿ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ವಿಭಾಗಿಯ ಪೀಠ ವಿಶೇಷ ಕಲಾಪದಲ್ಲಿ ವಿಚಾರಣೆ ನಡೆಸಿತು.
ಈ ಮೇಲ್ಮನವಿಯನ್ನು ಬೆಳಗ್ಗೆ 11.30ರ ಸುಮಾರಿಗೆ ವಿಚಾರಣೆ ಆರಂಭಿಸಿದ ನ್ಯಾಯಪೀಠವು, ಎರಡೂವರೆ ತಾಸಿಗೂ ಅಧಿಕ ಕಾಲ ವಾದ ಆಲಿಸಿದ ಬಳಿಕ, ವಿಚಾರಣೆಯನ್ನು ಮುಂದೂಡಿದೆ. ಈ ಮೂಲಕ ಭಾನುವಾರವೂ ವಿಶೇಷ ಕಲಾಪ ನಡೆಸಿ, ಹೈಕೋರ್ಟ್ ಸಿಜೆ ಗಮನ ಸೆಳೆದಿದ್ದಾರೆ.