ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಕರ್ನಾಟಕದಲ್ಲಿ ವಿದ್ಯುತ್ ಕೊರತೆ, ಲೋಡ್ ಶೆಡ್ಡಿಂಗ್ ಬಿಸಿ: ಅನ್ಯ ರಾಜ್ಯಗಳ ಮೊರೆ ಹೋದ ಸರ್ಕಾರ

ಬೆಂಗಳೂರು: ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು ಭೀಕರ ಬರ ಆವರಿಸಿದೆ. ಬಹುತೇಕ ಎಲ್ಲಾ ಜಲಾಶಯಗಳು ಭರ್ತಿಯಾಗಿಲ್ಲ. ಇದರ ಪರಿಣಾಮ ವಿದ್ಯುತ್ ಮೇಲೆ ಬೀರಿದ್ದು, ವಿದ್ಯುತ್ ಕೊರತೆ, ಲೋಡ್ ಶೆಡ್ಡಿಂಗ್ ಬಿಸಿ ರಾಜ್ಯದಲ್ಲಿ ತಟ್ಟಿದೆ.

ಮಳೆ ಇಲ್ಲದಿದ್ದರಿಂದ ಡ್ಯಾಂಗಳು ಖಾಲಿ-ಖಾಲಿಯಾಗಿದ್ದು, ಜಲ ವಿದ್ಯುತ್ ಉತ್ಪಾದನೆಯಲ್ಲಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಕೊರತೆ ಹೆಚ್ಚಾಗಿದ್ದು, ಇದೀಗ ರೈತರು ಕಂಗಾಲಾಗಿದ್ದಾರೆ. ಮಳೆ ಇಲ್ಲದೆ ಇರುವುದರಿಂದ ರೈತರ ಪಂಪ್ ಸೆಟ್ಗಳಿಂದ ವಿದ್ಯುತ್ ಗೆ ಬೇಡಿಕೆ ಹೆಚ್ಚಾಗಿದೆ. ಇದಕ್ಕೆ ತಕ್ಕಂತೆ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಈ ಹಿಂದೆ ರೈತರಿಗೆ 7 ತಾಸು ತ್ರಿಪೇಸ್ ವಿದ್ಯುತ್ ಪೂರೈಸಲಾಗುತ್ತಿತ್ತು. ಆದ್ರೆ ಸದ್ಯ ಅದು ಕೆಲವೊಂದು ಜಿಲ್ಲೆಗಳಲ್ಲಿ ಕೇವಲ 2 ತಾಸಿಗೆ ಇಳಿದಿದೆ ಇದರಿಂದ ರೊಚ್ಚಿಗೆದ್ದಿರುವ ರೈತರು ಜಿಲ್ಲೆ ಜಿಲ್ಲೆಯಲ್ಲೂ ಹೋರಾಟ ಶುರು ಮಾಡಿದ್ದಾರೆ.

ರಾಜ್ಯದಲ್ಲಿ ಮುಂಗಾರು ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆಯಲ್ಲಿ ಕುಸಿತ ಹಾಗೂ ಬೇಡಿಕೆಯಲ್ಲಿ ತೀವ್ರಗತಿಯ ಹೆಚ್ಚಳವಾಗಿರುವುದರಿಂದ ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದು, ಪ್ರತಿ ನಿತ್ಯ ಅಗತ್ಯಕ್ಕಿಂತ 40 ರಿಂದ 50 ಮಿಲಿಯನ್ ಯೂನಿಟ್ ವಿದ್ಯುತ್ ಕೊರತೆ ಎದುರಿಸುತ್ತಿದೆ. ಈ ವರ್ಷ ಆಗಸ್ಟ್ ತಿಂಗಳಲ್ಲಿ 16,950 ಮೆಗಾ ವ್ಯಾಟ್ನಷ್ಟು ವಿದ್ಯುತ್ ಇದ್ದರೆ, 2022ರ ಆಗಸ್ಟ್ನಲ್ಲಿ 11286 ಮೆ.ವ್ಯಾ ಬೇಡಿಕೆ ಕಂಡುಬಂದಿತ್ತು. ಇದೀಗ ಅಕ್ಟೋಬರ್ನಲ್ಲಿ ವಿದ್ಯುತ್ ಬೇಡಿಕೆ ಮತ್ತೆ 15000 ಮೆ.ವ್ಯಾಟ್ಗಿಂತಲೂ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.

2022ರ ಅಕ್ಟೋಬರ್ನಲ್ಲಿ ನಿತ್ಯ 150 ಮೆ.ವ್ಯಾಟ್ನಷ್ಟು ಇರುತ್ತಿದ್ದ ಬೇಡಿಕೆ, ಈ ವರ್ಷ ಅ.1ರಿಂದ 6ರವರೆಗಿನ ಸರಾಸರಿ ನೋಡಿದರೆ ವಿದ್ಯುತ್ ಬೇಡಿಕೆ 250 ಮೆ.ವ್ಯಾಟ್ ದಾಟಿದೆ. ಜುಲೈ 2022 ರಲ್ಲಿ ಕೃಷಿ ಕ್ಷೇತ್ರಕ್ಕೆ 1,425 ಮೆ.ವ್ಯಾಟ್ ಬಳಕೆಯಾಗಿದ್ದರೆ, ಜುಲೈ 2023 ರಲ್ಲಿ ಇದು 2,209 ಮೆಗಾ ವ್ಯಾಟ್ಗೆ ಏರಿಕೆಯಾಗಿದೆ. ಲಿಂಗನಮಕ್ಕಿ, ಸೂಫಾ ಮತ್ತು ವಾರಾಹಿ ಜಲಾಶಯದ ಜಲ ವಿದ್ಯುತ್ ಉತ್ಪಾದನೆ ಶೇ 50ರಷ್ಟು ಕಡಿಮೆಯಾಗಿದೆ. ಇನ್ನು ಅಕ್ಟೋಬರ್ 1 ರಂದು ಗಾಳಿಯಿಂದ ವಿದ್ಯುತ್ ಉತ್ಪಾದನೆ 53.63 ಮೆ.ವಾ. ಆಗಿದ್ದರೆ, ಅಕ್ಟೋಬರ್ 9 ರಂದು 4.76 ಮೆ.ವ್ಯಾಟ್ಗೆ ಇಳಿದಿದೆ. ಇನ್ನೊಂದೆಡೆ ವಿದ್ಯುತ್ ಸ್ಥಾವರಗಳು ಆಗಾಗ್ಗೆ ಸ್ಥಗಿತಗೊಳ್ಳುತ್ತಿವೆ.

2024ರ ಮುಂಗಾರು ಹಂಗಾಮಿನ ವರೆಗೂ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಪರಿಸ್ಥತಿ ನಿಭಾಯಿಸಲು ಇಂಧನ ಇಲಾಖೆಯು ಉತ್ತರ ಪ್ರದೇಶ, ಪಂಜಾಬ್ನಿಂದ ವಿನಿಮಯ ಯೋಜನೆಯಡಿ ವಿದ್ಯುತ್ ಪಡೆಯಲು ಮುಂದಾಗಿದೆ ಎಂದು ತಿಳಿದುಬಂದಿದೆ. ಈ ವಿದ್ಯುತ್ ಕೊರತೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈಗಾಗಲೇ ಲೋಡ್ ಶೆಡ್ಡಿಂಗ್ ಸಹ ಶುರುವಾಗಿದೆ.

ಮತ್ತೊಂದೆಡೆ ಇಂಧನ ಸಚಿವ ಕೆಜೆ ಜಾರ್ಜ್ ಮಾತ್ರ ವಿದ್ಯುತ್ ಕೊರತೆ ಇಲ್ಲ. ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ರಾಜ್ಯಾದ್ಯಂತ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ವಿದ್ಯುತ್ ವ್ಯತ್ಯಯ, ಕೃಷಿ ಪಂಪ್ ಸೆಟ್ಗಳಿಗೆ ವಿದ್ಯುತ್ ಕಡಿತ ಮುಂದುವರೆದಿದೆ. ಇದರಿಂದ ರೈತರು ಕಂಗಾಲಾಗಿದ್ದು, ಇಂಧನ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Related posts

ಕ್ರೀಡೆಯಿಂದ ಶಿಸ್ತು, ಏಕಾಗ್ರತೆ  ಬೆಳೆಯುವುದು-ಚನ್ನಪ್ಪ

ಡೀಸೆಲ್ ಎಂಜಿನ್ ವಾಹನಗಳ ಬಳಕೆದಾರರಿಗೆ ಶಾಕ್: ಶೇ.10ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲು ಸರ್ಕಾರ ಪ್ಲಾನ್.

ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಲು ಆಗ್ರಹ

TOD News