ಶಿವಮೊಗ್ಗ: ಉದ್ದಿಮೆಗಳ ಅಭಿವೃದ್ಧಿಗೆ ಕೌಶಲ್ಯತೆ ಬಹಳ ಪ್ರಮುಖ ಎಂದು ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಹೇಳಿದರು.
ಅವರು ಇಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸಂಘದ ಶಾಂತಲಾ ಸ್ಪೆರೋಕ್ಯಾಸ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಇಂಜಿನಿಯರ್ಸ್ ಡೇ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಜನ್ಮದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವೇಶ್ವರಯ್ಯನವರು ಈ ನಾಡು ಕಂಡು ಅದ್ಭುತ ವ್ಯಕ್ತಿ. ಶಿವಮೊಗ್ಗ ಜಿಲ್ಲೆಗೂ ಇವರ ಕೊಡುಗೆ ಅಪಾರವಾಗಿದೆ. ಭದ್ರಾವತಿಯ ಎರಡು ಕಾರ್ಖಾನೆಗಳ ಸ್ಥಾಪನೆಗೆ ಇವರು ಕಾರಣರಾಗಿದ್ದಾರೆ. ಸ್ವತಂತ್ರ ಭಾರತದ ಸಮಗ್ರ ಅಭಿವೃದ್ಧಿಯಲ್ಲಿ ಇವರ ಪಾತ್ರವೂ ಇದೆ. ಇವರ ಜ್ಞಾನ ಕೌಶಲ್ಯ ಶಕ್ತಿ ಅಪಾರವಾದುದು ಎಂದರು.
ಯಾವುದೇ ಉದ್ಯಮಗಳು ಯಶಸ್ವಿಯಾಗಬೇಕಾದರೆ ಕೌಶಲ್ಯತೆ ಬಹಳ ಮುಖ್ಯವಾಗುತ್ತದೆ. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಕೂಡ ಶಿವಮೊಗ್ಗದಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಸ್ಥಾಪಿಸುವ ಚಿಂತನೆ ಇದೆ. ಈ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಿದ್ದಾರೆ ಕೂಡ. ಇದರಿಂದ ಇಲ್ಲಿ ಕೈಗಾರಿಕೆಗಳು ಯಶಸ್ವಿಯಾಗಲು ಸಹಕಾರಿಯಾಗುತ್ತದೆ. ಸರ್ಕಾರದ ಸಹಾಯದಿಂದ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆಗೆ ನಿವೇಶನ ನೀಡಲು ಪ್ರಯತ್ನಿಸಲಾಗುವುದು ಎಂದರು.
ಇಂದು ಪ್ರಜಾಪ್ರಭುತ್ವದ ದಿನಾಚರಣೆ ಕೂಡ. ಭಾರತವು ಇಡೀ ಜಗತ್ತಿನಲ್ಲಿಯೇ ಬಹುದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರವಾಗಿದೆ. ಸ್ವಾತಂತ್ರ್ಯದ ನಂತರ ಭಾರತ ಅಭಿವೃದ್ಧಿಯತ್ತ ಸಾಗಿದೆ. ಶಿವಮೊಗ್ಗವೂ ಇದಕ್ಕೆ ಹೊರತಾಗಿಲ್ಲ. ಉದ್ದಿಮೆಗಳಿಗೆ ಅನುಕೂಲವಾಗುವಂತೆ ವಿಮಾನ ನಿಲ್ದಾಣ ಕೂಡ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗದಿಂದ ಭಾರತದಿಂದ ಎಲ್ಲಾ ಪ್ರಮುಖ ನಗರಗಳಿಗೂ ಹಾರಾಟ ಸೌಲಭ್ಯವನ್ನು ಕಲ್ಪಿಸಲಾಗುವುದು. ಮತ್ತು ಬೆಂಗಳೂರಿಗೆ ಇನ್ನೊಂದು ವಿಮಾನ ಶೀಘ್ರವೇ ಸಂಚಾರ ಆರಂಭಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಹಾರನಹಳ್ಳಿ ಕೆ. ಮಂಜಪ್ಪ ಅಂಡ್ ಕೋ.ನ ಹೆಚ್.ಎಂ. ಲೀಲಾಮೂರ್ತಿ, ಮಾಚೇನಹಳ್ಳಿಯ ವಿಜಯ್ ಟೆಕ್ನೋಕ್ರಾಟ್ಸ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಡಿ.ಜಿ. ಬೆನಕಪ್ಪ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಹಾಗೆಯೇ 2023ನೇ ಸಾಲಿನ ವಾಣಿಜ್ಯ ಪ್ರಶಸ್ತಿಯನ್ನು ಪುರಸ್ಕøತ ಸಂಸ್ಥೆಗಳಾದ ಪ್ರಣವ್ ಪ್ಯಾಕೇಜಿಂಗ್ ಪ್ರೈವೇಟ್ ಲಿಮಿಟೆಡ್, ಶಿವಾಜಿ ಆಗ್ರೋ ಕಾಂಪೊನೆಂಟ್ಸ್, ಎನ್.ಎನ್. ಇಂಜಿನಿಯರಿಂಗ್ ಸಂಸ್ಥೆಗಳಿಗೆ ನೀಡಲಾಯಿತು.
ಮತ್ತು ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ ಪಡೆದ ಪ್ರಾರ್ಥನಾ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ನ ಸೂಪರ್ವೈಸರ್ ಕೆ.ವೇದನಾಥನ್, ವೋಲ್ಮ್ಯಾಕ್ ಕಾಂಪೊನೆಂಟ್ಸ್ನ ಮೇಲ್ವಿಚಾರಕ ಸಿ.ವೀರೇಂದ್ರ ಅವರನ್ನು ಸನ್ಮಾನಿಸಲಾಯಿತು. ಮತ್ತು ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಅಂಗವಾಗಿಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ನ ರಾಷ್ಟ್ರೀಯ ಅಧ್ಯಕ್ಷ ಡಿ.ಎಸ್.ಚಂದ್ರಶೇಖರ್, ವಾಣಿಜ್ಯ ಸಂಘದ ಪದಾಧಿಕಾರಿಗಳಾದ ವಸಂತ್ ಹೋಬಳಿದಾರ್, ಜಿ. ವಿಜಯಕುಮಾರ್, ಬಿ.ಆರ್. ಸಂತೋಷ್ ಮುಂತಾದವರಿದ್ದರು. ಉಪಾಧ್ಯಕ್ಷ ಬಿ.ಗೋಪಿನಾಥ್ ಸ್ವಾಗತಿಸಿದರು. ಖಜಾಂಚಿ ಎಂ. ರಾಜು ಪ್ರಾಸ್ತಾವಿಕ ಮಾತನಾಡಿದರು. ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರು ಹಾಜರಿದ್ದರು.