ಶಿವಮೊಗ್ಗ: ಸವಿತಾ ಸಮಾಜದ ಜನಾಂಗಕ್ಕೆ ಜಾತಿ ನಿಂದನೆಗೆ ಪೂರಕವಾದ ಮೀಸಲಾತಿ ಹಾಗೂ ಕಾಯಿದೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಸವಿತಾ ಸಮಾಜದ ವತಿಯಿಂದ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸವಿತಾ ಸಮಾಜವು ಕ್ಷೌರಿಕ ವೃತ್ತಿ ಹಾಗೂ ನಾದಸ್ವರ ನುಡಿಸುವ ಕಾಯಕ ಮಾಡಿಕೊಂಡು ಬರುತ್ತಿದ್ದಾರೆ. ಈ ಸಮಾಜ ಅತ್ಯಂತ ಹಿಂದುಳಿದಿದ್ದು, ಮಾನಸಿಕ ತೊಂದರೆ ಅನುಭವಿಸುತ್ತಿದ್ದಾರೆ. ಜಾತಿ ಮತ್ತು ಕಾಯಕದ ಹೆಸರುಹಿಡಿದು ನಿಂದನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಜನಾಂಗಕ್ಕೆ ಕಿರಿಕಿರಿ ಉಂಟಾಗುತ್ತದೆ. ನಮ್ಮ ಸಮಾಜದವರು ಗೌರವಯುತವಾಗಿ ನಿಂದನೆಯಿಂದ ಹೊರಬರಬೇಕಾಗಿದೆ. ಜಾತಿ ನಿಂದನೆ ಹಾಗೂ ದೌರ್ಜನ್ಯ ಕಾಯಿದೆ ಅಗತ್ಯವಿದೆ ಎಂದು ಮನವಿದಾರರು ತಿಳಿಸಿದ್ದಾರೆ.
ಸವಿತಾ ಸಮಾಜಕ್ಕೆ ಯಾವ ಮೀಸಲಾತಿಯೂ ದೊರೆತಿಲ್ಲ. ಅಲ್ಲದೆ ಮೀಸಲಾತಿಯಲ್ಲಿ ತಾರತಮ್ಯ ಕೂಡ ಮಾಡಲಾಗುತ್ತದೆ. ಸವಿತಾ ಸಮಾಜವು ದಲಿತರನ್ನು ಹೋಲುವಂತಹ ಸಮಾಜವಾಗಿದೆ. ಹಾಗಾಗಿ ಈ ಸಮುದಾಯಕ್ಕೆ ಮೀಸಲಾತಿ ಅವಶ್ಯಕತೆಯಿದೆ. ಜಾತಿ ನಿಂದನೆಗೆ ಪೂರಕವಾದ ಕಾಯಿದೆಯನ್ನು ಜಾರಿಗೆ ತರಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎಂ.ಜೆ. ಬಾಲು, ಪ್ರಧಾನ ಕಾರ್ಯದರ್ಶಿ ಎನ್.ಎಸ್. ರಮೇಶ್, ಪ್ರಮುಖರಾದ ಪ್ರಭಾಕರ, ಧರ್ಮರಾಜ, ವೆಂಕಟೇಶ್ ಜಿ., ರಾಘು, ನೀಲಾವತಿ, ರುದ್ರಪ್ಪ, ಗಂಗಪ್ಪ, ಧನಂಜಯ, ಪವನ್ ಇದ್ದರು.
previous post