ಶಿವಮೊಗ್ಗ : ಸಾಹಿತ್ಯ ಮನುಷ್ಯನಿಗಿರಬೇಕಾದ ಶ್ರೇಷ್ಟ ಅಭಿರುಚಿಯಾಗಿದ್ದು ಅದರಲ್ಲಿ ಆಸಕ್ತಿ ಕಡಿಮೆಯಾಗಬಾರದು ಬದಲಾದ ಕಾಲಮಾನದಲ್ಲಿ ಜಾಗತೀಕರಣದ ಹೊಡೆತದಿಂದ ಹೊಸ ತಲೆಮಾರು ಸಾಹಿತ್ಯ, ಸಂಗೀತ ಯಾವುದರಲ್ಲೂ ಭಾಗವಹಿಸುತ್ತಿಲ್ಲ. ಸಾಹಿತ್ಯ ಓದುತ್ತಿಲ್ಲ. ಅದು ಕೆಲಸಕ್ಕೆ ಬಾರದು ಎನ್ನುವ ಧೋರಣೆ ತಾಳಿದಂತೆ ಭಾಸವಾಗುತ್ತಿದೆ ಎಂದು ಸಾಹಿತಿ ಬಿ. ಚಂದ್ರೇಗೌಡ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ, ತಾಲ್ಲೂಕು ಸಮಿತಿ ಸಹಯೋಗದಲ್ಲಿ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿದ್ದ ಶ್ರಾವಣ ಕಥಾ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡದಲ್ಲಿ ಭಂಡಾಯದ ನಂತರ ಕಥಾ ಪ್ರಕಾರ ನಿಂತಿದ್ದು ಸಾಹಿತ್ಯವನ್ನು ಪ್ರಭುತ್ವವಾಗಿ ನಿಯಂತ್ರಿಸುವ ಕೆಲಸ ಮಾಡುತ್ತಿದೆ. ಸಾಹಿತಿಗಳ ಮೇಲೆ ಪ್ರಭಾವ ಬೀರುತ್ತಿದೆ. ಇಂತಹ ವಾತಾವರಣದಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಚಟುವಟಿಕೆಗಳ ಅವಲೋಕನ ಬದಲು ಊಟದ ಸಂತೆಯಾಗಿ ಅಪ್ರಸ್ತುತವಾಗುವತ್ತ ಸಾಗಿದೆ. ನಮ್ಮ ಕಸಾಪ ಅಧ್ಯಕ್ಷರು ಶ್ರಾವಣ ನೆಪವಾಗಿಟ್ಟುಕೊಂಡು ಕಥಾ ಸಂಜೆ ಏರ್ಪಡಿಸಿರುವುದು ಉತ್ತಮ ಚಿಂತನೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಕಥೆಗಾರರಾದ ಡಾ. ಕಲೀಮ್ ಉಲ್ಲಾ, ತುರುವನೂರು ಮಲ್ಲಿಕಾರ್ಜುನ, ಡಾ. ಅಣ್ಣಪ್ಪ ಮಳೀಮಠ, ಡಾ. ಕೆ. ಎಸ್. ಗಂಗಾಧರ, ಶ್ರೀನಿವಾಸ ನಗಲಾಪುರ, ಮಂಜುಳಾ ರಾಜು, ವಿನಯ್ ಕೆ. ಶಿವಮೊಗ್ಗ, ಡಿ. ಎಚ್. ಸೂರ್ಯಪ್ರಕಾಶ್ ಕಥೆ ಹೇಳಿದರು. ಕಥೆಗಳೊಂದಿಗೆ ಸಂವಾದ ನಡೆಸಲು ಆರ್.ಎಸ್. ಹಾಲಸ್ವಾಮಿ, ಡಾ.ಕೆ.ಜಿ. ವೆಂಕಟೇಶ, ಮಹಾದೇವಿ ಭಾಗವಹಿಸಿದ್ದರು. ಸಂಚಾಲಕರಾದ ಎಸ್. ನಾರಾಯಣ, ಬಿ. ಆರ್. ರವಿ ಜನಪದ ಗೀತೆಗಳನ್ನು ಹಾಡಿದರು. ಶಿವಪ್ಪಗೌಡ ಸ್ವಾಗತಿಸಿ, ಕೆ.ಎಸ್. ಮಂಜಪ್ಪ ನಿರೂಪಿಸಿ, ಅನುರಾಧ ವಂದಿಸಿದರು.