ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ರಚನೆ: ನಿಷ್ಠರು-ಭಿನ್ನರಿಗೂ ಮಣೆ: ಕರ್ನಾಟಕದ ಇಬ್ಬರಿಗೆ ಸ್ಥಾನ.

ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಕಾಂಗ್ರೆಸ್ ಕಾರ್ಯಕಾರಿ ಸಮಿತಿ ರಚನೆ ಮಾಡಿದ್ದು ನಿಷ್ಠರು-ಭಿನ್ನರು ಇಬ್ಬರಿಗೂ  ಮಣೆ ಹಾಕಿದ್ದಾರೆ.

ಅಳೆದೂ ತೂಗಿ ‘ಕಾಂಗ್ರೆಸ್ ಕಾರ್ಯಕಾರಿ ಸಮಿತಿ’ಯನ್ನು (ಸಿಡಬ್ಲ್ಯುಸಿ) ರಚನೆ ಮಾಡಿದ್ದಾರೆ.  ಲೋಕಸಭಾ ಚುನಾವಣೆಗೆ  ಕೆಲವು ತಿಂಗಳೂ ಬಾಕಿ ಇದ್ದು ಖರ್ಗೆ ಅವರು ವಿವೇಚನಾಧಿಕಾರ ಬಳಸಿ ತಮ್ಮ ತಂಡವನ್ನು ರಚಿಸಿದ್ದಾರೆ. ಸಚಿನ್ ಪೈಲಟ್, ಶಶಿ ತರೂರ್, ಗೌರವ್ ಗೊಗೊಯ್ ಹಾಗೂ ಸಯ್ಯದ್ ನಾಸಿರ್ ಹುಸೇನ್ ಅವರಿಗೆ ಮೊದಲ ಬಾರಿಗೆ ಪಕ್ಷದ ಉನ್ನತ ಸಮಿತಿಯಲ್ಲಿ ಸ್ಥಾನ ಸಿಕ್ಕಿದೆ.

ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರಲ್ಲದೆ ಮುಂಚೂಣಿ ನಾಯಕರಾದ ಮನಮೋಹನ್ ಸಿಂಗ್, ರಾಹುಲ್ ಗಾಂಧಿ ಸದಸ್ಯರಾಗಿ ಮುಂದುವರಿದಿದ್ದಾರೆ. ಛತ್ತೀಸಗಢದ ರಾಯಪುರದಲ್ಲಿ ಫೆಬ್ರುವರಿಯಲ್ಲಿ ನಡೆದ ಕಾಂಗ್ರೆಸ್ ನ ಮಹಾಧಿವೇಶನದಲ್ಲಿ ಸಮಿತಿಯನ್ನು ಶೀಘ್ರದಲ್ಲಿ ರಚನೆ ಮಾಡಬೇಕು ಎಂದು ಚರ್ಚೆಗಳು ನಡೆದಿದ್ದವು. ಚುನಾವಣಾ ಪ್ರಕ್ರಿಯೆ ಮೂಲಕ ಸದಸ್ಯರ ನೇಮಕ ಮಾಡಬೇಕು ಎಂದು ಕೆಲವು ಹಿರಿಯ ನಾಯಕರು ಒತ್ತಾಯಿಸಿದ್ದರು. ಅದಕ್ಕೆ ಸಹಮತ ವ್ಯಕ್ತವಾಗಿರಲಿಲ್ಲ. ಸದಸ್ಯರ ಹೆಸರನ್ನು ನಾಮನಿರ್ದೇಶನ ಮಾಡುವ ಅಧಿಕಾರವನ್ನು ಖರ್ಗೆ ಅವರಿಗೆ ಪಕ್ಷದ ಸಂಚಾಲಕ ಸಮಿತಿ ನೀಡಿತ್ತು. ಹೊಸ ಕೋಟಾದ ಪ್ರಕಾರ, ಯುವಜನತೆ, ದಲಿತರು, ಬುಡಕಟ್ಟು, ಮಹಿಳೆಯರು, ಒಬಿಸಿ ಹಾಗೂ ಅಲ್ಪಸಂಖ್ಯಾತರಿಗೆ ಶೇ 50ರಷ್ಟು ಮೀಸಲಾತಿ ನೀಡಲು ಒಲವು ವ್ಯಕ್ತವಾಗಿತ್ತು. ರಾಯಪುರ ಸಭೆ ಮುಗಿದ ಆರು ತಿಂಗಳ ಬಳಿಕ ಕಾಂಗ್ರೆಸ್ ಅಧ್ಯಕ್ಷರು ತಮ್ಮ ತಂಡವನ್ನು ಕಟ್ಟಿದ್ದಾರೆ.

ಈ ಹಿಂದಿನ ಸಮಿತಿಯಲ್ಲಿದ್ದ ಬಹುತೇಕ ಹಿರಿಯ ನಾಯಕರಿಗೆ ಹೊಸ ಸಮಿತಿಯಲ್ಲಿ ಜಾಗ ಸಿಕ್ಕಿದೆ. ಕೆ.ಸಿ.ವೇಣುಗೋಪಾಲ್, ಪ್ರಿಯಾಂಕಾ ಗಾಂಧಿ ವಾದ್ರಾ, ದಿಗ್ವಿಜಯ್ ಸಿಂಗ್, ಪಿ.ಚಿದಂಬರಂ, ತಾರಿಕ್ ಅನ್ವರ್, ಜೈರಾಮ್ ರಮೇಶ್, ರಣದೀಪ್ ಸಿಂಗ್ ಸುರ್ಜೆವಾಲಾ, ಅಂಬಿಕಾ ಸೋನಿ, ಮೀರಾ ಕುಮಾರ್, ಕುಮಾರಿ ಸೆಲ್ಜಾ ಸೇರಿದಂತೆ ಹೆಚ್ಚಿನವರು ಈ ಹಿಂದಿನ ಸಮಿತಿಯ ಭಾಗವಾಗಿದ್ದರು. ಸಮಿತಿ ರಚನೆ ಬಳಿಕ ದೊಡ್ಡ ಮಟ್ಟದ ಪ್ರತಿರೋಧದ ಧ್ವನಿ ಬಾರದಂತೆ ಖರ್ಗೆ ಅವರು ಮುಂಜಾಗ್ರತೆ ವಹಿಸಿದ್ದಾರೆ.

ರಾಷ್ಟ್ರ ರಾಜಕಾರಣದ ಭಾಗವಾಗುವುದಿಲ್ಲ ಎಂದು ಪ್ರಕಟಿಸಿ ತಮ್ಮ ಚಟುವಟಿಕೆಯನ್ನು ತಿರುವನಂತಪುರಕ್ಕೆ ಸೀಮಿತಗೊಳಿಸಿದ್ದ ಗಾಂಧಿ ಕುಟುಂಬದ ಪರಮಾಪ್ತ ಎ.ಕೆ. ಆಯಂಟನಿ ಅವರು ಸಮಿತಿಯಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಆಯಂಟನಿ ಪುತ್ರ ಅನಿಲ್ ಆಯಂಟನಿ ಅವರು ರಾಹುಲ್ ಗಾಂಧಿ ಅವರನ್ನು ಟೀಕಿಸಿ ಕೆಲವು ತಿಂಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅವರನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕೆಲವು ದಿನಗಳ ಹಿಂದೆ ನೇಮಿಸಲಾಗಿತ್ತು.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಖರ್ಗೆ ಅವರಿಗೆ ತರೂರ್ ಎದುರಾಳಿಯಾಗಿದ್ದರು. ಅವರು ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಸಮಿತಿಯಲ್ಲಿ ತರೂರ್ ಅವರನ್ನು ಸೇರಿಸುವ ಬಗ್ಗೆ ಪಕ್ಷದ ವಲಯದಲ್ಲಿ ಊಹಾಪೋಹಗಳು ಇದ್ದವು. ಆದರೆ, ಹಾಗೇನೂ ಆಗಿಲ್ಲ.

ಪಂಜಾಬ್ನ ಮಾಜಿ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಹಾಗೂ ರಾಜಸ್ಥಾನದ ಸಚಿವ ಮಹೇಂದ್ರಜೀತ್ ಸಿಂಗ್ ಮಾಳವಿಯಾ ಸಮಿತಿಗೆ ಅಚ್ಚರಿಯ ಪ್ರವೇಶ ಪಡೆದಿದ್ದಾರೆ. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತ ಬಳಿಕವೂ ಚನ್ನಿ ಅವರ ಮೇಲೆ ರಾಷ್ಟ್ರೀಯ ನಾಯಕರು ವಿಶ್ವಾಸ ಉಳಿಸಿಕೊಂಡಿರುವುದು ಪಕ್ಷದ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪಕ್ಷದ ರಾಷ್ಟ್ರೀಯ ನಾಯಕತ್ವವನ್ನು ಟೀಕಿಸಿ ಪತ್ರ ಬರೆದು ‘ಕೈ’ಪಾಳಯದಲ್ಲಿ ಸಂಚಲನಕ್ಕೆ ಕಾರಣವಾಗಿದ್ದ ಹಿರಿಯ ನಾಯಕರನ್ನೂ ಸಮಿತಿಯಲ್ಲಿ ಸೇರಿಸಿಕೊಳ್ಳಲಾಗಿದೆ. ಈ ಮೂಲಕ ಲೋಕಸಭಾ ಚುನಾವಣೆಗೆ ಮುನ್ನ ಪಕ್ಷದೊಳಗೆ ಹೆಚ್ಚಿನ ಭಿನ್ನಮತ ಚಟುವಟಿಕೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ ಮತ್ತು ಪಕ್ಷದ ನಾಯಕತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದ ‘ಜಿ-23’ ಭಿನ್ನಮತೀಯ ನಾಯಕರ ಗುಂಪಿನ ಭಾಗವಾಗಿದ್ದ ಮುಕುಲ್ ವಾಸ್ನಿಕ್ ಆನಂದ್ ಶರ್ಮಾ ಮತ್ತು ತರೂರ್ ಸಮಿತಿಯ ‘ಸಾಮಾನ್ಯ’ ಸದಸ್ಯರಲ್ಲಿ ಸೇರಿದ್ದಾರೆ. ಗುಂಪಿನ ಭಾಗವಾಗಿದ್ದ ಮನೀಶ್ ತಿವಾರಿ ಮತ್ತು ವೀರಪ್ಪ ಮೊಯ್ಲಿ.  ಅವರನ್ನು ಕಾಯಂ ಆಹ್ವಾನಿತರನ್ನಾಗಿ ಮಾಡಲಾಗಿದೆ.

ಕರ್ನಾಟಕದ ಇಬ್ಬರಿಗೆ ಸ್ಥಾನ..

‘ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಕಾಯಂ ಆಹ್ವಾನಿತರನ್ನಾಗಿ  ಕರ್ನಾಟಕದ ಕಾಂಗ್ರೆಸ್ ನಾಯಕರಾದ ವೀರಪ್ಪ ಮೊಯ್ಲಿ, ಬಿ.ಕೆ ಹರಿಪ್ರಸಾದ್ ಅವರಿಗೆ ಸ್ಥಾನ ನೀಡಲಾಗಿದೆ.

ಮಲ್ಲಿಕಾರ್ಜುನ ಖರ್ಗೆ ಅವರ ಪರಮಾಪ್ತರೆಂದು ಪಕ್ಷದ ವಲಯದಲ್ಲಿ ಗುರುತಿಸಿಕೊಂಡಿರುವ ಕರ್ನಾಟಕದ ರಾಜ್ಯಸಭಾ ಸದಸ್ಯ ಸಯ್ಯದ್ ನಾಸಿರ್ ಹುಸೇನ್ ಅವರನ್ನು ಸಮಿತಿಯ ‘ಸಾಮಾನ್ಯ’ ಸದಸ್ಯರನ್ನಾಗಿ ನೇಮಿಸುವ ಮೂಲಕ ಬಹುದೊಡ್ಡ ಬಡ್ತಿ ನೀಡಲಾಗಿದೆ. ಈ ವಿಷಯದಲ್ಲಿ ಅವರಿಗೆ ಎಂ.ವೀರಪ್ಪ ಮೊಯ್ಲಿ ಹಾಗೂ ಬಿ.ಕೆ.ಹರಿಪ್ರಸಾದ್ ಅವರನ್ನು ಹಿಂದಕ್ಕೆ ಹಾಕಿದ್ದಾರೆ. ಮೊಯಿಲಿ ಹಾಗೂ ಹರಿಪ್ರಸಾದ್ ಅವರನ್ನು ‘ಶಾಶ್ವತ ಆಹ್ವಾನಿತರು’ ಎಂದು ನೇಮಿಸಲಾಗಿದೆ. ನಾಸಿರ್ ಅವರು ರಾಜ್ಯಸಭೆಯಲ್ಲಿ ಪಕ್ಷದ ಸಚೇತಕರು ಹಾಗೂ ಕಾಂಗ್ರೆಸ್ ಅಧ್ಯಕ್ಷರ ಕಚೇರಿಯಲ್ಲಿ ಎಐಸಿಸಿ ಸಂಯೋಜಕರು. ಅಂತರಾಷ್ಟ್ರೀಯ ಅಧ್ಯಯನದಲ್ಲಿ ಪಿಎಚ್.ಡಿ ಪಡೆದಿರುವ ಹುಸೇನ್ ಅವರು ಮೈಸೂರು ವಿಶ್ವವಿದ್ಯಾನಿಲಯ ಮತ್ತು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ ರಾಜಕೀಯದ ಮೂಲಕ ಪ್ರವರ್ಧಮಾನಕ್ಕೆ ಬಂದವರು. ಇನ್ನು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿರುವ ಬಿ.ವಿ.ಶ್ರೀನಿವಾಸ್ ಅವರು ಸಮಿತಿಯ ವಿಶೇಷ ಆಹ್ವಾನಿತರಾಗಿದ್ದಾರೆ.

Related posts

ಮಾರುಕಟ್ಟೆ ಕಾರ್ಯಾಗಾರ ನವೆಂಬರ್ 30ಕ್ಕೆ

ಶಿಕಾರಿಪುರ ಉಳ್ಳಿ ಫೌಂಡೇಶನ್ ವತಿಯಿಂದ ವಿಧಾನ ಪರಿಷತ್ ಸದಸ್ಯ  ಮಂಜುನಾಥ್ ಅವರ  ಹುಟ್ಟು_ಹಬ್ಬ ಆಚರಣೆ.

ಹಿರಿಯ ರಾಜಕಾರಣಿ ಡಿ.ಬಿ. ಚಂದ್ರೇಗೌಡರ ನಿಧನಕ್ಕೆ ಸಂಸದ ಬಿ.ವೈ. ರಾಘವೇಂದ್ರ ಸಂತಾಪ.