ಶಿವಮೊಗ್ಗ: ಭೂಮಿ ಹುಣ್ಣಿಮೆ ಪ್ರಯುಕ್ತ ಶಿವಮೊಗ್ಗ ಜಿಲ್ಲಾದ್ಯಂತ ವಿಶೇಷ ಪೂಜೆ ಸಲ್ಲಿಸಲಾಯಿತು. ರೈತರು ಹೊಲ ಗದ್ದೆಗಳಲ್ಲಿ ಪೂಜೆ ಸಲ್ಲಿಸಿ ಉತ್ತಮ ಮಳೆ ಬೆಳೆ ಆಗುವಂತೆ ಪ್ರಾರ್ಥಿಸಿದರು. ಶಿವಮೊಗ್ಗದ ಮಲ್ಲಿಕಾರ್ಜುನ್ ಕಾನೂರು ಅವರ ತೋಟದಲ್ಲಿ ಪೂಜೆ ಸಲ್ಲಿಸಲಾಯಿತು.
ಭೂಮಿ ಹುಣ್ಣಿಮೆಯು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುವ ದಿನ, ಎಲ್ಲವನ್ನು ಕರುಣಿಸುವ ಭೂ ತಾಯಿಗೆ ಸೀಗೆ ಹುಣ್ಣಿಮೆ ದಿನದಂದು ವಿವಿಧ ಬಗೆಯ ಖಾಧ್ಯವನ್ನು ನೀಡುವ ಮೂಲಕ ಆಕೆಯನ್ನು ಸಂತುಷ್ಟಪಡಿಸುವ ದಿನ. ಇದನ್ನು ಎಲ್ಲಾ ಕಡೆಗಳಲ್ಲೂ ಭೂತಾಯಿಗೆ ಸೀಮಂತದ ಕ್ಷಣ ಎಂದು ಕರೆಯಲಾಗುತ್ತದೆ.
ಪೂರ್ಣಿಮೆಯ ದಿನದಂದು ಭೂದೇವಿಗೆ, ಲಕ್ಷ್ಮೀದೇವಿಗೆ ಪೂಜೆ ಸಲ್ಲಿಸುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹುಣ್ಣಿಮೆಯ ದಿನದಂದು ಆಕಾಶದಿಂದ ಅಮೃತ ನಿಸರ್ಗವನ್ನು ಸೇರಿಕೊಳ್ಳುತ್ತದೆ ಎಂಬ ನಂಬಿಕೆ ಇದೆ. ಭೂದೇವಿಗೆ ಹಣ್ಣು ಮತ್ತು ಸಿಹಿ ತಿಂಡಿಗಳನ್ನು ಅರ್ಪಿಸಲಾಗುತ್ತದೆ.
ಭೂಮಿ ತಾಯಿಯನ್ನು ನಂಬಿ ವರ್ಷವೀಡಿ ದುಡಿಯುವ ರೈತ ತನ್ನ ಪರಿಶ್ರಮಕ್ಕೆ ತಕ್ಕ ಫಲವನ್ನು ನೀಡೆಂದು ಭೂ ಮಾತೆಯನ್ನು ಪೂಜಿಸಿ ಬೇಡುವ ಪವಿತ್ರ ಆಚರಣೆ. ಈ ಹಬ್ಬದಲ್ಲಿ ಚಿನ್ನಿಕಾಯಿ ಕಡುಬು, ರೊಟ್ಟಿ, ಬುತ್ತಿ, ವಿಧ ವಿಧವಾದ ಪಲ್ಯ ಚಟ್ನಿ ಮುಂತಾದ ವಿಶೇಷವಾದ ಖಾದ್ಯಗಳನ್ನು ಹಬ್ಬದಲ್ಲಿ ತಯಾರಿಸಿ ಭೂತಾಯಿಗೆ ಅರ್ಪಿಸಲಾಗುತ್ತದೆ.
ಭೂಮಿ ಹುಣ್ಣಿಮೆಯಂದು ಭೂಮಿತಾಯಿಗೆ ಪೂಜೆ ಸಲ್ಲಿಸಿ ನಂತರ ಉಡಿ ತುಂಬಿ ತಂದತಹ: ಆಡುಗೆಯನ್ನು ಮನೆ ಮಂದಿ ಎಲ್ಲ ಕೂತು ಸಂತೋಷದಿಂದ ಸವಿಯಾಲಾಗುತ್ತದೆ. ಈ ಆಚರಣೆ ನಿಸರ್ಗಕ್ಕೆ ಹತ್ತಿರವಾಗಿದ್ದು, ಈ ಹಬ್ಬ ನಿಸರ್ಗದಲ್ಲಿ ದೇವರನ್ನು ಕಾಣುವ ವಿಶೇಷ ಹಬ್ಬವಾಗಿದೆ.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್ ಕುಮಾರ್ ಮಾತನಾಡಿ, ಜನರು ಹೊಲ, ತೋಟಗಳಲ್ಲಿ ಭೂಮಿ ಪೂಜೆ ಮಾಡಿ ನೈವೇದ್ಯಗಳನ್ನು ಅರ್ಪಿಸುತ್ತಾರೆ. ಇದು ಭೂತಾಯಿ ಗರ್ಭಿಣಿಯಾಗಿರುವ ಸಂಕೇತ. ಹಾಗಾಗಿ ತುಂಬಿದ ಗರ್ಭಿಣಿಯರಿಗೆ ಯಾವ ರೀತಿ ಬಯಕೆ ಶಾಸ್ತ್ರ ಮಾಡುತ್ತಾರೆಯೋ ಅದೇ ರೀತಿ ಹಬ್ಬವನ್ನು ಸಡಗರದಿಂದ ಆಚರಿಸಲಾಗುವುದು. ಪೂಜೆ ಮಾಡುವ ಸ್ಥಳವನ್ನು ಸ್ವಚ್ಛಗೊಳಿಸಿ ಬಾಳೆಗಿಡದ ಮಂಟಪ ಮಾವಿನೆಲೆಯ ತೋರಣ ಕಟ್ಟಿ ಭೂ ತಾಯಿಗೆ ಪೂಜೆ ಮಾಡಲಾಗುವುದು. ಬಗೆ ಬಗೆ ತಿಂಡಿಗಳನ್ನು ಅರ್ಪಿಸಿ ಬಾಗಿನ ನೀಡಿ ನಮ್ಮನ್ನು ಹರಿಸುವಂತೆ ಪ್ರಾರ್ಥಿಸಲಾಗುತ್ತದೆ ಎಂದು ತಿಳಿಸಿದರು.
ರೂಪಾ ಮಲ್ಲಿಕಾರ್ಜುನ್, ಬಿಂದು ವಿಜಯಕುಮಾರ್, ಮಲ್ಲಿಕಾರ್ಜುನ್ ಕಾನೂರ್, ನಾಗಪ್ಪ ಕುಟುಂಬದವರು ಉಪಸ್ಥಿತರಿದ್ದರು.
previous post