ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಆಗಮಿಸಿದ ಬಿವೈ ವಿಜಯೇಂದ್ರಗೆ ಸಂಭ್ರಮ, ಸಡಗರದಿಂದ ಸ್ವಾಗತ.

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಆಗಮಿಸಿದ್ದ ಬಿ.ಎಸ್. ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಅತ್ಯಂತ ಸಂಭ್ರಮ, ಸಡಗರದಿಂದ ಸ್ವಾಗತಿಸಲಾಯಿತು.
ವಿಜಯೇಂದ್ರ ಬರುವ ಹಿನ್ನಲೆಯಲ್ಲಿ ಇಡೀ ನಗರದಲ್ಲಿ ಹಬ್ಬದ ವಾತಾವರಣ ಉಂಟಾಗಿತ್ತು. ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ನಗರದ ಎಲ್ಲಾ ಕಡೆ ಕಟೌಟ್ ಹಾಗೂ ಫ್ಲೆಕ್ಸ್ ಗಳನ್ನು ಹಾಕಿ ಸ್ವಾಗತ ಕೋರಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಕೇಂದ್ರ ಬಿಜೆಪಿ ನಾಯಕರು, ಪ್ರಧಾನಿಯವರ ಕಟೌಟ್ ಗಳು ಕೂಡ ನಗರದಲ್ಲಿ ರಾರಾಜಿಸಿದವು. ಬೆಳಗಿನ ಜಾವ ರೈಲಿನಲ್ಲಿ ಬಂದ ಅವರನ್ನು ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಬೆಳಗ್ಗೆ 9 ಗಂಟೆಗೆ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಅಭಿನಂದನೆ ಸ್ವೀಕರಿಸಿದರು. ನಗರದ ಗುಂಡಪ್ಪಶೆಡ್ ನಲ್ಲಿರುವ ಕೆ.ಎಸ್. ಈಶ್ವರಪ್ಪ ನಿವಾಸ, ಮತ್ತೂರು ಗ್ರಾಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣಾ ಪ್ರಾಂತ ಕಾರ್ಯವಾಹ ಪಟ್ಟಾಭಿರಾಮ ಅವರ ನಿವಾಸಕ್ಕೆ ಹಾಗೂ ರಾಜ್ಯ ಪ್ರಕೋಷ್ಟಗಳ ಸಂಯೋಜಕ ಎಂ.ಬಿ. ಭಾನುಪ್ರಕಾಶ್ ಅವರ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು.
ಅದ್ಧೂರಿ ಬೈಕ್ ರ್ಯಾಲಿ:
ಬೆಕ್ಕಿನ ಕಲ್ಮಠದಲ್ಲಿ ಶ್ರೀಗಳ ಆಶೀರ್ವಾದ ಪಡೆದ ನಂತರ ವಿಜಯೇಂದ್ರ ಅವರನ್ನು ತೆರೆದ ವಾಹನದಲ್ಲಿ ಬೈಕ್, ಕಾರ್ ರ್ಯಾಲಿಯೊಂದಿಗೆ ಪೆಸಿಟ್ ಕಾಲೇಜಿಗೆ ಕರೆತರಲಾಯಿತು. ಬೆಕ್ಕಿನ ಕಲ್ಮಠದಲ್ಲಿ ಜೆಸಿಬಿ ಮೂಲಕ ಬೃಹತ್ ಸೇಬಿನ ಹಾರ ಹಾಕಲಾಯಿತು. ಪೆಸಿಟ್ ಕಾಲೇಜಿನ ಸಭಾಂಗಣಕ್ಕೆ ಬರುತ್ತಿದ್ದಂತೆ ಮಂಗಳ ವಾದ್ಯ ಮೊಳಗಿಸಲಾಯಿತು. ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು.
ತೆರೆದ ವಾಹನದಲ್ಲಿ ವಿಜಯೇಂದ್ರ ಅವರೊಂದಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಹರತಾಳು ಹಾಲಪ್ಪ ಮೊದಲಾದವರಿದ್ದರು.
ಈ ಸಂದರ್ಭಗಳಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಶಾಸಕ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಕೆ.ಬಿ. ಅಶೋಕ್ ನಾಯ್ಕ್, ಎಸ್. ದತ್ತಾತ್ರಿ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಳ್ಳೇಕೆರೆ ಸಂತೋಷ್, ಡಾ. ಧನಂಜಯ್ ಸರ್ಜಿ ಮೊದಲಾದವರು ಇದ್ದರು.
ಬಾಕ್ಸ್:
ಹೆಲ್ಮೆಟ್ ಹಾಕದೇ ಬೈಕ್ ರ್ಯಾಲಿ:
ನಗರದ ಬೆಕ್ಕಿನ ಕಲ್ಮಠದಿಂದ ಪೆಸಿಟ್ ಕಾಲೇಜ್ ವರೆಗೆ ನಡೆದ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಬಹುತೇಕರು ಹೆಲ್ಮೆಟ್ ಧರಿಸಿರಲಿಲ್ಲ. ಕೆಲವೇ ಕೆಲವರು ಹೆಲ್ಮೆಟ್ ಧರಿಸಿ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಉಳಿದಂತೆ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಹೆಚ್ಚಿನವರು ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿದರು. ಇದನ್ನು ಕಂಡು ಕಾಣದಂತೆ ಪೊಲೀಸರಿದ್ದರು.

Related posts

ಅ.18(ನಾಳೆ) ಮಲ್ನಾಡ್ ಶೈರೆ ರೆಸಾರ್ಟ್‍ನ ಉದ್ಘಾಟನಾ ಸಮಾರಂಭ.

ಆಹಾರ ದಸರಾ: ಕಡುಬು ಅವರೇಕಾಳು ಸಾಂಬಾರ್, ಬಾಳೇಹಣ್ಣು ತಿನ್ನುವ ಸ್ಪರ್ಧೆ.

 ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ, ಮಾತುಕತೆ