ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಕಲೆ ಸವಾಲು ಎದುರಿಸುವ ಶಕ್ತಿ ನೀಡುತ್ತದೆ-ಜಿ.ಎಸ್.ನಾರಾಯಣರಾವ್

ಶಿವಮೊಗ್ಗ : ಕಲೆ ಸಂಸ್ಕೃತಿ ಸಂಸ್ಕಾರದೊಂದಿಗೆ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ಶಕ್ತಿ ನೀಡುತ್ತದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಅಭಿಪ್ರಾಯಪಟ್ಟರು.
ನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತಿನ ವತಿಯಿಂದ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ಶಿವಮೊಗ್ಗ ನಗರದ ವಿವಿಧ ಬಿಎಡ್ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಒಂದು ದಿನದ ಗಮಕ ವಾಚನ ವ್ಯಾಖ್ಯಾನ ಕಲಿಕಾ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಮಾತುಗಳನ್ನಾಡಿದರು.
ಗಮಕ ಅತ್ಯಂತ ಶ್ರೀಮಂತ ಕಲೆ. ಲಲಿತ ಕಲೆಗಳ ಅಭ್ಯಾಸದಿಂದ ನಮ್ಮ ಬದುಕಿನಲ್ಲಿ ಉತ್ತಮ ವ್ಯಕ್ತಿತ್ವ ಶ್ರೀಮಂತಿಕೆ ಸಾಧ್ಯ. ಅಂತಹ ಕಲೆಗಳ ಇತಿಹಾಸದ ಅರಿವು ಯುವ ಸಮೂಹಕ್ಕೆ ಬೇಕಿದೆ. ಇತಿಹಾಸವನ್ನು ಸಮರ್ಥವಾಗಿ ಅರಿತಾಗ ಮಾತ್ರ ‌ಮುಂದಿನ ಭವಿಷ್ಯ ಕಟ್ಟಲು ಸಾಧ್ಯವಾಗಲಿದ್ದು ಕಲೆಗಳು ಸಂಸ್ಕಾರ ಕಲಿಸುವ ಸತ್ವ ನೀಡುತ್ತದೆ ಎಂದು ಹೇಳಿದರು.
ಶಿಕ್ಷಣ ಕಲಿಸುವ ಶಿಕ್ಷಕರಿಗೆ ಎಲ್ಲಾ ಪ್ರಕಾರಗಳ ಕಲಿಕೆ ಅತ್ಯಗತ್ಯ. ಸಂವಹನ ಎಂಬುದು ಬದುಕಿನ ಒಂದು ದೊಡ್ಡ ಕಲೆ. ಒಳ್ಳೆಯ ಸಂವಹನ ಹೊಂದಿದ ಶಿಕ್ಷಕ ಮಾತ್ರ ವಿದ್ಯಾರ್ಥಿಗಳ ಮೆಚ್ಚಿನ ಗುರುವಾಗುತ್ತಾರೆ. ತಿಳುವಳಿಕೆ ಬಹಳ ಮುಖ್ಯವಲ್ಲ ತಿಳುವಳಿಕೆಗಿಂತ ನಡವಳಿಕೆ ಬಹಳ ಮುಖ್ಯ.
ನಮ್ಮ ಮನೆಯ ಹಿರಿಯರು ನಮಗೆ ಲಭ್ಯವಿರುವ ಬೃಹತ್ ಜ್ಞಾನದ ಕೋಶ. ಎಂದಿಗೂ ಅಂತಹ ಜ್ಞಾನದ ಭಂಡಾರವನ್ನು ಉಪೇಕ್ಷೆ ಮಾಡದಿರಿ. ಮಾನವೀಯ ಮೌಲ್ಯಗಳನ್ನು ಕಲಿಸುವ ಶಾಲೆಗಳಾಗಿದ್ದ ತುಂಬು ಕುಟುಂಬಗಳಿಂದ ಯುವ ಸಮೂಹ ವಂಚಿತರಾಗುತ್ತಿದ್ದಾರೆ. ಜ್ಞಾನದಿಂದ ಅಧಿಕಾರ ದೊರೆಯಬಹುದು ಅದರೇ ಉತ್ತಮ ವ್ಯಕ್ತಿತ್ವದಿಂದ ಮಾತ್ರ ಉತ್ತಮ ಸಂಬಂಧಗಳು ದೊರೆಯಲು ಸಾಧ್ಯ ಎಂದು ಪ್ರತಿಪಾದಿಸಿದರು.
ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎನ್.ಕೆ.ಚಿದಾನಂದ ಮಾತನಾಡಿ, ಅನೇಕ ಕಲೆಗಳು ಸರಿಯಾದ ದಾಖಲಿಕರಣಗೊಳ್ಳದೆ ನಶಿಸಿ ಹೋಗಿವೆ. ಸಂಗೀತ ಮತ್ತು ಕಲೆಯಿಂದ ಜ್ಞಾನದ ವರ್ಗಾವಣೆ ನಡೆದಿದ್ದು ಅದುವೇ ಪಂಚಮವೇದ. ಅಂತಹ ಜ್ಞಾನದ ಬೃಹತ್ ಕೋಶ ನೀಡುವ ಸಂಗೀತ ಕಲೆ ಸದಾ ನಮ್ಮಯ ಅಸ್ಮಿತೆ ಎಂದು ಹೇಳಿದರು.
ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾ ಸಂಯೋಜಕ ಹೊಸಹಳ್ಳಿ ರಾಜಾರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗಮಕ ಕಲಾ ಪರಿಷತ್ತಿನ ಗೌರವಾಧ್ಯಕ್ಷರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಸಹ ಪ್ರಾಧ್ಯಾಪಕರಾದ ಡಾ.ಶರಣನಾಯಕ್ ಸೇರಿದಂತೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಗಮಕ ಎಂದರೇನು ಕುರಿತಾಗಿ ಎಂ.ಎನ್.ವಿನಾಯಕ, ವಾಚನ ವೈವಿಧ್ಯ ಕುರಿತು ಚಿತ್ರದುರ್ಗ ಚಂಪಕಾ ಶ್ರೀಧರ್, ವ್ಯಾಖ್ಯಾನ ವಿಶೇಷತೆ ಕುರಿತು ರಾಜಾರಾಮಮೂರ್ತಿ, ಗಮಕ ಕಲೆಯಲ್ಲಿ ಆಸಕ್ತಿ ಮೂಡಿಸುವುದು ಹೇಗೆ ಕುರಿತಾಗಿ ಕಲಾಶ್ರೀ ಗಣೇಶ ಉಡುಪ, ಗಮಕ ವಾಚನ ವ್ಯಾಖ್ಯಾನ ಕುರಿತು ಡಾ.ಸನತ್ ಕುಮಾರ್, ಕಲಾಶ್ರೀ ಗೋಪಾಲ ಮಾತನಾಡಿದರು.

Related posts

ಸಿಎಂ  ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್: ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿ 15 ಸಚಿವರು ಭಾಗಿ.

 ಅಗ್ನಿ ಅವಘಡ : ಬೆಂಕಿ ಕೆನ್ನಾಲಿಗೆ 10ಕ್ಕೂ ಹೆಚ್ಚು ಖಾಸಗಿ ಬಸ್ ಗಳು ಸುಟ್ಟು ಕರಕಲು

ಸಾಧನೆಗೆ ಅವಮಾನಗಳನ್ನು ಇಂಧನವಾಗಿ ಬಳಸಿ-ಪ್ರೊ.ಎಸ್.ಎಂ.ಗೋಪಿನಾಥ