ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

3ನೇ ಸುತ್ತಿನ ಸಾರ್ವತ್ರಿಕ ಲಸಿಕಾಕರಣ ಯಶಸ್ವಿಗೊಳಿಸಲು ಮನವಿ

ಶಿವಮೊಗ್ಗ,  : ಸಾರ್ವತ್ರಿಕ ಲಸಿಕೆ ಪಡೆಯುವಲ್ಲಿ ವಂಚಿತರಾದ, ಬಿಟ್ಟು ಹೋದ ಮಕ್ಕಳು ಮತ್ತು ಗರ್ಭಿಣಿಯರಿಗೆ ಲಸಿಕೆ ನೀಡುವ 3ನೇ ಸುತ್ತಿನ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಮತ್ತು ಮೀಸಲ್ಸ್ ರುಬೆಲ್ಲಾ ನಿರ್ಮೂಲನೆ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸಬೇಕೆಂದು ಆರ್‍ಸಿಹೆಚ್‍ಓ ಡಾ. ನಾಗರಾಜ ನಾಯ್ಕ್ ಮನವಿ ಮಾಡಿದರು.
ಮಹಾನಗರಪಾಲಿಕೆ ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ 3ನೇ ಸುತ್ತಿನ ಮಿಷನ್ ಇಂದ್ರಧನುಷ್ 5.0(ಐಎಂಐ 5.0) ಕುರಿತಾದ ನಗರ ಟಾಸ್ಕ್‍ಫೋರ್ಸ್ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಲಸಿಕೆಗಳಿಂದ ತಡೆಗಟ್ಟಬಹುದಾದ ಮಾರಕ ರೋಗಗಳ ವಿರುದ್ದ ಮಕ್ಕಳನ್ನು ರಕ್ಷಿಸಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಅನೇಕ ಲಸಿಕೆಗಳನ್ನು ನೀಡಲಾಗುತ್ತಿದೆ. ಈ ಲಸಿಕೆಗಳನ್ನು ಕಾಲ ಕಾಲಕ್ಕೆ ಪಡೆಯದೇ ವಂಚಿತರಾದ 0 ಯಿಂದ 5 ವರ್ಷದೊಳಗಿನ ಮಕ್ಕಳನ್ನು ಹಾಗೂ ಗರ್ಭಿಣಿ ಸ್ತ್ರೀಯರನ್ನು ಗುರಿಯಾಗಿಸಿಕೊಂಡು ಅವರಿಗೆ ಬಿಟ್ಟು ಹೋದ ಲಸಿಕೆಗಳನ್ನು ಪೂರ್ಣಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ.
3ನೇ ಸುತ್ತಿನ ಲಸಿಕಾಕರಣ ಅ.9 ರಿಂದ 14 ರವರೆಗೆ ಜಿಲ್ಲೆಯಾದ್ಯಂತ ನಡೆಯುವುದು.  2ನೇ ಸುತ್ತಿನಲ್ಲಿ ನಗರದಲ್ಲಿ ಶೇ.99 ಲಸಿಕಾಕರಣ ಆಗಿದೆ.
ಹೈರಿಸ್ಕ್‍ಏರಿಯಾಗಳಾದ ವಲಸಿಗರ ವಾಸಸ್ಥಳ, ಕಟ್ಟಡ ನಿರ್ಮಾಣ ಸ್ಥಳಗಳು, ನಗರ, ನಗರ ಸುತ್ತಮುತ್ತ ಪ್ರದೇಶಗಳು, ಸ್ಲಂ ಗಳಲ್ಲಿ ಲಸಿಕೆ ಬಿಟ್ಟು ಹೋದ ಮಕ್ಕಳು ಮತ್ತು ಗರ್ಭಿಣಿಯನ್ನು ಗುರುತಿಸಿ ಲಸಿಕೆ ಹಾಕಲಾಗುವುದು. ಮೀಸಲ್ಸ್ ರುಬೆಲ್ಲಾವನ್ನು ಪಲ್ಸ್ ಪೊಲೀಯೋ ರೀತಿಯಲ್ಲಿ ನಿರ್ಮೂಲನೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವತ್ರಿಕ ಲಸಿಕಾಕರಣದಲ್ಲಿ ಎಂಆರ್ ಲಸಿಕೆಗಳನ್ನು ಅರ್ಹರೆಲ್ಲರಿಗೂ ನೀಡಲಾಗುತ್ತಿದೆ.
ಜ್ವರ ಮತ್ತು ದದ್ದು ಪ್ರಕರಣಗಳು ಕಂಡು ಬಂದರೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮೀಸಲ್ಸ್ ರುಬೆಲ್ಲಾ ಪ್ರಕರಣ ಕಂಡು ಬಂದರೆ ನಿರ್ಲಕ್ಷ್ಯ ಮಾಡಬಾರದು. ಮಕ್ಕಳು ಮತ್ತು ವಿಶೇಷವಾಗಿ ಗರ್ಭಿಣಿ ಸ್ತ್ರೀಯರಲ್ಲಿ ಇದು ಹೆಚ್ಚು ತೊಂದರೆ ನೀಡುತ್ತದೆ. ಹುಟ್ಟುವ ಮಕ್ಕಳು ನ್ಯೂನ್ಯತೆಯಿಂದ ಹುಟ್ಟಬಹುದು ಆದ್ದರಿಂದ ಎಚ್ಚರಿಕೆಯಿಂದಿದ್ದು ಜ್ವರ ದದ್ದು ಪ್ರಕರಣವನ್ನು ಪರೀಕ್ಷೆಗೆ ಒಳಪಡಿಸಬೇಕೆಂದರು.
ಗ್ರಾಮೀಣ ಭಾಗದಲ್ಲಿ ಲಸಿಕಾಕರಣ ಉತ್ತಮವಾಗಿ ಆಗುತ್ತಿದೆ. ನಗರ ಪ್ರದೇಶಗಳಲ್ಲಿ ಯಶಸ್ವಿಯಾಗಿ ಆಗಲು ಪಾಲಿಕೆ, ಸ್ವಯಂ ಸೇವಾ ಸಂಘಗಳು, ವಿವಿಧ ಇಲಾಖೆಗಳು ಸಹಕರಿಸಬೇಕೆಂದ ಅವರು ಎಲ್ಲ ಪ್ರಾಥಮಿಕ ಕೇಂದ್ರಗು, ಉಪ ಕೇಂದ್ರಗಳು, ಮೆಗ್ಗಾನ್ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆಗಳನ್ನು ಹಾಕಲಾಗುತ್ತದೆ. ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳ ವಿರುದ್ದ ಎಚ್ಚರಿಕೆಯಿಂದ ಇರಬೇಕು. ಡೆಂಗ್ಯು, ಚಿಕುನ್ ಗುನ್ಯ ಪ್ರಕರಣಗಳು ಹೆಚ್ಚುತ್ತಿವೆ. ಚಿಕುನ್‍ಗುನ್ಯ ಮತ್ತು ಡೆಂಗ್ಯು ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಡೆಂಗ್ಯು ಮಾರಣಾಂತಿಕವಾಗಿದ್ದು ಅತ್ಯಂತ ಎಚ್ಚರಿಕೆಯಿಂದ ಇರಬೇಕು.
ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮನೆಯ ಸುತ್ತಮುತ್ತ ಸ್ವಚ್ಚತೆ ಕಾಪಾಡಿ, ಮನೆ ಸುತ್ತಮುತ್ತ ಟೈರು, ಟ್ಯೂಬು, ಪ್ಲಾಸ್ಟಿಕ್ ಲೋಟ, ಟ್ಯಾಂಕುಗಳಲ್ಲಿ ನೀರು ನಿಲ್ಲದಂತೆ ಜಾಗೃತೆ ವಹಿಸಬೇಕು. ಟ್ಯಾಂಕುಗಳನ್ನು ಕಾಲ ಕಾಲಕ್ಕೆ ಸ್ವಚ್ಚ ಪಡಿಸಬೇಕು. ಸೊಳ್ಳೆ ಉತ್ಪತ್ತಿಯಾಗದಂತೆ ಹಾಗೂ ಸೊಳ್ಳೆ ಕಡಿತದಿಂದ ರಕ್ಷಣೆ ಪಡೆದುಕೊಳ್ಳಬೇಕು. ರೋಗದ ಲಕ್ಷಣ ಕಂಡು ಬಂದ ತಕ್ಷಣ ಚಿಕಿತ್ಸೆ ಪಡೆಯಬೇಕೆಂದರು.
ಸಭೆಯಲ್ಲಿ ಪಾಲಿಕೆಯ ಪ್ರಭಾರ ವೈದ್ಯಾಧಿಕಾರಿ ಅಮೋಘ್, ಡಾ.ರೇಖಾ, ಆರೋಗ್ಯ ನಿರೀಕ್ಷಕರು, ಇತರೆ ಸಿಬ್ಬಂದಿಗಳು ಹಾಜರಿದ್ದರು.

Related posts

ಗ್ರಾ.ಪಂ ಸೂಪರ್ ಮಾರ್ಕೆಟ್ ಗಳಲ್ಲಿ ಹೊಸ ಮದ್ಯದಂಗಡಿಗಳನ್ನು ತೆರೆಯುವ ವಿಚಾರ: ಸ್ಪಷ್ಟನೆ ನೀಡಿದ ಸಿಎಂ ಮತ್ತು ಡಿಸಿಎಂ.

70ನೇ ವರ್ಷದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ..

ಕೇಂದ್ರ ಸರ್ಕಾರಿ ನೌಕರರಿಗೆ ಶಾಕ್: ಸದ್ಯಕ್ಕೆ 8ನೇ ವೇತನ ಆಯೋಗ ರಚನೆ ಇಲ್ಲ