ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ವಿದ್ಯೆಯೊಂದಿಗೆ ಸಂಸ್ಕಾರ ನೀಡುವ ಆದಿಚುಂಚನಗಿರಿ ಸಂಸ್ಥೆ- ಸಂಸದ ಬಿ.ವೈ.ರಾಘವೇಂದ್ರ ಇಂಗಿತ

ಶಿವಮೊಗ್ಗ:  ಮಕ್ಕಳಿಗೆ ವಿದ್ಯೆ, ವಿನಯ ಹಾಗೂ ಸಂಸ್ಕಾರ ಒಟ್ಟಿಗೆ ಸಿಗುವ ಏಕೈಕ ಕೇಂದ್ರ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ  ಹೇಳಿದರು.
ಅವರು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ೫೦ ರ ಸುವರ್ಣ ಸಂಭ್ರಮ ಹಾಗೂ “ಶ್ರೀ ಆದಿಚುಂಚನಗಿರಿ ಶಾಖಾ ಮಠದ ೩೩ ನೇ ವಾರ್ಷಿಕೋತ್ಸವ, ಉಪನ್ಯಾಸ ಮಾಲೆ,  ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಲ್ಲಿರುವ ಶಕ್ತಿಯನ್ನು ಗುರುತಿಸಿ ಅದಕ್ಕೆ ಸೂಕ್ತ ವೇದಿಕೆ ಒದಗಿಸುವುದು ಶಿಕ್ಷಕರು, ಅದಿಚುಂಚನಗಿರಿ ಶಿಕ್ಷಣ ಸಂಸ್ಥೆ ಮಕ್ಕಳಲ್ಲಿ ಸಂಸ್ಕಾರ ತುಂಬುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಮಕ್ಕಳಿಗೆ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅಗತ್ಯವಾದ ಶಿಕ್ಷಣ ಇಲ್ಲಿ ಸಿಗುತ್ತಿದೆ ಎಂದರು.
ಧಾರ್ಮಿಕ ಅಡಿಪಾಯ ಇರುವವರೆಗೂ ಈ ರಾಷ್ಟ್ರಕ್ಕೆ ಸಾವಿಲ್ಲ ಎಂದು ಸ್ವಾಮಿ ವಿವೇಕಾನಂದರು ಬಹಳ ವರ್ಷಗಳ ಹಿಂದೆಯೇ ಹೇಳಿದ್ದರು. ಆದಿಚುಂಚನಗಿರಿ ಶ್ರೀಗಳನ್ನು ಗಮನಿಸಿದಾಗ ಈ ಮಾತು ನಿಜವಾಗುತ್ತಿದೆ. ಅವರ ಆಶೀರ್ವಾದದಿಂದ ನಾವು ಒಂದಿಷ್ಟು ಕೆಲಸ ಮಾಡಿದ್ದೇವೆ. ಕೆಂಪೇಗೌಡ ವಿಮಾನ ನಿಲ್ದಾಣದ ಎದುರು ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ ಮಾಡಲಾಗಿದೆ ಎಂದರು.
ಶಾಸಕ ಎಸ್. ಎನ್.ಚನ್ನಬಸಪ್ಪ ಮಾತನಾಡಿ, ಈ ಸಮಾಜಕ್ಕೆ ಶಕ್ತಿ ನೀಡಿದ ಮಠಾಧೀಶರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ. ನನ್ನ ಬೆಳವಣಿಗೆಯಲ್ಲಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮಾರ್ಗದರ್ಶನ ಕಾರಣ, ಈ ಶಿಕ್ಷಣ ಸಂಸ್ಥೆ ಅತ್ಯಂತ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶಿವಮೊಗ್ಗ ಶಾಖಾ ಮಠದ ಶ್ರೀ ಪ್ರಸನ್ನನಾಥಸ್ವಾಮೀಜಿ, ನಿಟ್ಟೂರು ಈಡಿಗ ಸಂಸ್ಥಾನಮಠದ ರೇಣುಕಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿವಿಧ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತ್ಯುನ್ನತ ಅಂಕ ಪಡೆದ ಹಾಗೂ ಕ್ರೀಡಾ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಬಾಕ್ಸ್
ಚಿಕ್ಕಮಕ್ಕಳ ಮನಸ್ಸು ಹಸಿಮಣ್ಣಿನ ಮುದ್ದೆಯಂತೆ. ಅದು ಪೋಷಕರು, ಶಿಕ್ಷಕರು ಹಾಗೂ ಗುರು ಹಿರಿಯರನ್ನು ಗಮನಿಸುತ್ತದೆ. ಅವರ ಮಾತನ್ನು ಆಲಿಸುತ್ತದೆ. ಪಾಲಿಸಲು ಮುಂದಾಗುತ್ತದೆ. ಹಾಗಾಗೀ ಹಸಿ ಮಣ್ಣಿನಂತಿರುವ ಮಗುವಿನ ಮನಸ್ಸಿಗೆ ಸಂಸ್ಕಾರದ ಜೀವನ ರೂಪಿಸುವಂತಹ ಕೆಲಸ ನಡೆಯಬೇಕಿದೆ. ಸ್ವಾಮಿವಿವೇಕಾನಂದರ ವಾಣಿಯಂತೆ ಮಗುವಿನ ಅಭಿವೃದ್ಧಿಯಲ್ಲಿ ಪೋಷಕರು ಹಾಗೂ ಗುರುಗಳ ಪಾತ್ರ ಅತಿಮುಖ್ಯವಾಗಿದೆ.
ಒಂದು ವಿದ್ಯಾಸಂಸ್ಥೆಯಲ್ಲಿ ಮಕ್ಕಳು ಪೋಷಕರು, ಶಿಕ್ಷಕರು ಹಾಗೂ ಗಣ್ಯರು ಸೇರುವ ಒಂದು ವೇದಿಕೆ ಎಂದರೆ ಅದುವೇ ವಾರ್ಷಿಕೋತ್ಸವವಾಗುತ್ತದೆ. ಅದಕ್ಕೆ ಪೂರಕವಾದಂತಹ ವೇದಿಕೆಗಳನ್ನು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ನಿರಂತರವಾಗಿ ರೂಪಿಸುತ್ತಾ ಬಂದಿದೆ. ರಾಜ್ಯದಲ್ಲಿ ನಮ್ಮ ಶಿಕ್ಷಣ ಸಂಸ್ಥೆಯೊಂದರಲ್ಲೇ ೫.೨ ಲಕ್ಷ ಮಕ್ಕಳು ಓದುತ್ತಿದ್ದು, ಅವರಿಗೆ ತಮ್ಮ ಆಯ್ಕೆಯ ಪುಸ್ತಕವನ್ನು ಸಂಸ್ಥೆಗೆ ನೀಡಲು ಕೋರಲಾಗಿದೆ. ಇದು ನಾವು ಪುಸ್ತಕಕೊಳ್ಳಲಾಗುವುದಿಲ್ಲ ಎಂಬ ಕಾರಣಕ್ಕಲ್ಲ ಆ ಪುಸ್ತಕದ ಆಯ್ಕೆಯ ನಡುವೆ ಮಗುವಿನ ಮಾನಸಿಕ ಸ್ಥಿರತೆ ಕಾಣಿಸುತ್ತದೆ.
-ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ
ಪೀಠಾಧ್ಯಕ್ಷರು, ಆದಿಚುಂಚನಗಿರಿ ಮಹಾಸಂಸ್ಥಾನ ಮಠ

Related posts

*ಚಾರಣ ಕ್ಷೇತ್ರದಲ್ಲಿ ಅ.ನಾ.ವಿಜಯೇಂದ್ರರಾವ್ ಸಂಘಟನಾತ್ಮಕ ಕೆಲಸ-ಎನ್.ಗೋಪಿನಾಥ್

ಕರವೇ ನಾರಾಯಣಗೌಡ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

TOD News

ಮಹರ್ಷಿ ವಾಲ್ಮೀಕಿ ರಚಿತ ರಾಮಾಯಣ ಇಂದಿಗೂ ಪ್ರಸ್ತುತ:- ಸಚಿವ ಮಧು ಬಂಗಾರಪ್ಪ