ಮಂಡ್ಯ: ಇತ್ತೀಚಿನ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆ ಬದಲಾಗಿದ್ದು, ವಿದ್ಯಾರ್ಥಿಗಳಿಗೆ ಶಿಕ್ಷಕರು ಬೈಯುವಂತಿಲ್ಲ ಹೊಡೆಯುವಂತಿಲ್ಲ ಎಂಬ ನಿಯಮವಿದೆ. ಆದರೆ ಈ ನಿಯಮ ಕೆಲವು ಕಡೆಗಳಲ್ಲಿ ದುರುಪಯೋಗವಾಗುತ್ತಿದೆ. ಹೌದು, ಪೋಷಕರಿಗೆ ದೂರು ನೀಡಿದ್ದಕ್ಕೆ ಉಪನ್ಯಾಸಕರೊಬ್ಬರಿಗೆ ವಿದ್ಯಾರ್ಥಿ ಮಚ್ಚು ತೋರಿಸಿ ಎಚ್ಚರಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಡಿಪ್ಲೊಮೋ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ತರಗತಿಗೆ ಬರುತ್ತಿಲ್ಲವೆಂದು ತನ್ನ ಬಗ್ಗೆ ಹೆತ್ತವರಿಗೆ ದೂರು ನೀಡಿದ್ದಕ್ಕೆ ವಿದ್ಯಾರ್ಥಿಯೊಬ್ಬ , ಉಪನ್ಯಾಸಕರಿಗೆ ಲಾಂಗ್ ತೋರಿಸಿ ದರ್ಪ ಮೆರೆದಿದ್ದಾನೆ.
ವಿದ್ಯಾರ್ಥಿ ಉದಯ್ ಗೌಡ (18) ಎಂಬ ವಿದ್ಯಾರ್ಥಿ ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಡಿಪ್ಲೊಮೋ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನ. ಈತ ಸರಿಯಾಗಿ ಬರುತ್ತಿರಲಿಲ್ಲ ಹೀಗಾಗಿ ಉಪನ್ಯಾಸಕ ಚಂದನ್ ಎಂಬುವವರು , ಉದಯ್ ಕ್ಲಾಸ್ಗೆ ಸರಿಯಾಗಿ ಬರುತ್ತಿಲ್ಲವೆಂದು ಆತನ ಪೋಷಕರಿಗೆ ದೂರು ನೀಡಿದ್ದರು. ಇದರಿಂದ ಕೋಪಗೊಂಡ ವಿದ್ಯಾರ್ಥಿ ಉದಯ್ ಗೌಡ ಈ ರೀತಿ ಲಾಂಗ್ ತೋರಿಸಿ ಎಚ್ಚರಿಸಿದ್ದಾನೆ ಎನ್ನಲಾಗಿದೆ.