ಬೆಂಗಳೂರು : ಇಡೀ ದೇಶವೇ ಹೆಮ್ಮೆಪಡುತ್ತಿರುವ ಚಂದ್ರಯಾನ-3 ಬಗ್ಗೆ ವ್ಯಂಗ್ಯವಾಡಿದ್ಧ ಬಹುಭಾಷಾ ನಟ ಪ್ರಕಾಶ್ ರೈ ವಿರುದ್ಧ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಠಾಣೆಯಲ್ಲಿ ಹಿಂದೂ ಮುಖಂಡರು ನಟ ಪ್ರಕಾಶ್ ರೈ ವಿರುದ್ಧ ದೂರು ದಾಖಲಿಸಿದ್ದು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇಡೀ ದೇಶವೇ ಹೆಮ್ಮೆ ಪಡುವಂತೆ ಇಸ್ರೋ ವಿಜ್ಞಾನಿಗಳು ಕಾರ್ಯನಿರ್ವಹಿಸಿದ್ದು, ಚಂದ್ರಯಾನ-3 ಚಂದ್ರನ ಮೇಲ್ಮೈ ಮೇಲೆ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಗಾಗಿ ದೇಶಾದ್ಯಂತ ಜನರು ಕಾಯುತ್ತಿದ್ದಾರೆ. ಸುರಕ್ಷಿತವಾಗಿ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಅಲ್ಲದೆ ಇದಕ್ಕಾಗಿ ದೇಶದಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿದೆ. ಆದರೆ ಈ ಚಂದ್ರಯಾನ-3 ಬಗ್ಗೆ ನಟ, ನಿರ್ದೇಶಕ ಪ್ರಕಾಶ್ ರೈ ಮಾತ್ರ ಚಂದ್ರಯಾನದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ‘ಬ್ರೇಕಿಂಗ್ ನ್ಯೂಸ್ ವಿಕ್ರಂ ಲ್ಯಾಂಡರ್ ಮೂಲಕ ಚಂದ್ರನಿಂದ ಬರುವ ಮೊದಲ ಚಿತ್ರ Wowww..’ಎಂದು ಶೀರ್ಷಿಕೆ ಕೊಟ್ಟು ಇಸ್ರೋ ಮಾಜಿ ಮುಖ್ಯಸ್ಥ ಕೆ.ಶಿವನ್ ಚಹಾ ಸುರಿಯುತ್ತಿರುವ ವ್ಯಂಗ್ಯಚಿತ್ರದ ಫೋಟೋ ಹಾಕಿದ್ದರು.
ನಟ ಪ್ರಕಾಶ್ ರೈ ಅವರ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ಹಾಗೂ ರಾಜಕೀಯ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮ ದೇಶ, ಜನರ ಪ್ರಗತಿ, ಸಾಧನೆಯನ್ನು ನೀವು ದ್ವೇಷಿಸಲು ಆರಂಭಿಸದಷ್ಟು ದ್ವೇಷ ನಿಮ್ಮನ್ನು ಆವರಿಸುತ್ತದೆ. ಇದರಿಂದ ಜೀವನ ವ್ಯರ್ಥ ಎಂದು ಕೆಲವರು ಗರಂ ಆಗಿದ್ದಾರೆ.
ತನಗೆ ಎಲ್ಲವನ್ನೂ ಕೊಟ್ಟ ದೇಶವನ್ನೇ ಪ್ರಕಾಶ್ ರೈ ಅವಮಾನಿಸುತ್ತಿದ್ದಾರೆ ಎಂದು ಹಲವರು ಕಿಡಿಕಾರಿದಾರೆ. ಭಾರತದ ಅಸ್ಮಿತತೆಯನ್ನೇ ಪ್ರಶ್ನೆ ಮಾಡುವ ನಟನಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಚಂದ್ರಯಾನದ ಬಗ್ಗೆ ಹಿರಿಯ ನಟನ ವ್ಯಂಗ್ಯಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.