ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಸರ್ಕಾರಿ ನೌಕರಿಗೆ ಗುಡ್ ನ್ಯೂಸ್ ; ಇನ್ಮುಂದೆ ಆಸ್ತಿ ಖರೀದಿ ಮತ್ತಷ್ಟು ಸರಳ!

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಇನ್ಮುಂದೆ ಆಸ್ತಿ ಖರೀದಿ ಮತ್ತಷ್ಟು ಸರಳವಾಗಲಿದೆ.

ಕರ್ನಾಟಕದಲ್ಲಿ ಸರ್ಕಾರಿ ನೌಕರಿಯಲ್ಲಿರುವವರು ಆಸ್ತಿ ಖರೀದಿ  ಮಾಡಲು ಹರಸಾಹಸವನ್ನೇ ಪಡಬೇಕಿತ್ತು. ಆದರೆ, ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ನಿವಾರಿಸಲು ಮುಂದಾಗಿದ್ದು, ಶೀಘ್ರದಲ್ಲಿಯೇ ಸರ್ಕಾರಿ ನೌಕರರ ಆಸ್ತಿ ಖರೀದಿ ಪ್ರಕ್ರಿಯೆಯನ್ನು ಸರಳೀಕರಿಸುವತ್ತ ಹೆಜ್ಜೆಯನ್ನಿಟ್ಟಿದೆ. ರಾಜ್ಯ ಮಟ್ಟದ ಜಂಟಿ ಸಮಾಲೋಚನಾ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಹೀಗಾಗಿ ಸರ್ಕಾರಿ ನೌಕರರಿಗೆ ಆಸ್ತಿ ಖರೀದಿ ವಿಚಾರದಲ್ಲಿ ಇದ್ದ ತೊಡಕು ಶೀಘ್ರವೇ ಪರಿಹಾರವಾಗಲಿದೆ.

ನಿಯಮ ಸಡಿಲಿಕೆ ಮಾಡಲು ಸರ್ಕಾರ ತೀರ್ಮಾನ

ಸರ್ಕಾರಿ ನೌಕರರು ತಮ್ಮ ಸೇವಾವಧಿಯಲ್ಲಿ ಚರ/ ಸ್ಥಿರ ಆಸ್ತಿ ಖರೀದಿ ಮಾಡುವ ಪೂರ್ವದಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯಬೇಕು ಎಂಬ ನಿಯಮವು ಈಗಾಗಲೇ ಚಾಲ್ತಿಯಲ್ಲಿದೆ. ಈಗ ಈ ನಿಯಮವನ್ನು ಸಡಿಲಿಸಲು ತೀರ್ಮಾನ ಮಾಡಲಾಗಿದೆ. ಇದರ ಅನುಸಾರ ಕಾಲಮಿತಿಯಲ್ಲಿ ಸಂಬಂಧಿಸಿದ ಪ್ರಾಧಿಕಾರಕ್ಕೆ ವರದಿ ಮಾಡುವಂತೆ ಸರಳೀಕೃತ ನಿಯಮದಲ್ಲಿ ಬದಲಾವಣೆ ತರಲಾಗುತ್ತಿದೆ. ಈ ರೀತಿಯಾದರೆ ಸರ್ಕಾರಿ ನೌಕರರು ಸಂಬಂಧಿಸಿದ ಪ್ರಾಧಿಕಾರಕ್ಕೆ ವರದಿ ನೀಡಬೇಕಾಗುತ್ತದೆ.

ಸರ್ಕಾರಿ ನೌಕರರ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರ ಪಟ್ಟಿಯನ್ನು ನಿಗದಿತ ಸಮಯಕ್ಕೆ ಸಲ್ಲಿಸಬೇಕು. ಈ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು, 1996ರ ನಿಯಮಗಳು, ಪರಿಷ್ಕೃತವಾಗಿ ಕರ್ನಾಟಕ ರಾಜ್ಯ ನಾಗರಿಕ ನಾಗರಿಕ ಸೇವಾ (ನಡತೆ) ನಿಯಮಗಳು, 2021 ದಿನಾಂಕ 07/01/2021ರಿಂದ ಜಾರಿಗೆ ಬಂದಿವೆ. ಸದರಿ ನಿಯಮಗಳ ನಿಯಮ 24ರಲ್ಲಿ ಸರ್ಕಾರಿ ನೌಕರರು ಚರ/ ಸ್ಥಿರ ಆಸ್ತಿ ಖರೀದಿ/ ವಿಲೇ ಮಾಡುವುದಕ್ಕೆ ಸಂಬಂಧಿಸಿದಂತೆ ಉಪಬಂಧಗಳನ್ನು ಕಲ್ಪಿಸಲಾಗಿದೆ.

ಯಾವುದೇ ಸರ್ಕಾರಿ ನೌಕರಿಗೆ ನೇಮಕವಾದಾಗ ಆರಂಭದಲ್ಲಿಯೇ ಅವರು ತಮ್ಮ ಹೆಸರಿನಲ್ಲಿ ಇಲ್ಲವೇ ಕುಟುಂಬ ಸದಸ್ಯರ ಹೆಸರಿನಲ್ಲಾಗಲಿ ಅಥವಾ ತಮಗೆ ಸಂಬಂಧಪಟ್ಟ ಇತರ ವ್ಯಕ್ತಿಯ ಹೆಸರಿನಲ್ಲಿ ಪಿತ್ರಾರ್ಜಿತವಾಗಿ ಬಂದ ಸ್ವಯಂ ಅರ್ಜಿಸಿದ ಅಥವಾ ಗುತ್ತಿಗೆ ಅಥವಾ ಅಡಮಾನದ ಮೇಲೆ ಹೊಂದಿರುವ ಸ್ಥಿರಾಸ್ತಿಯ ಸಂಪೂರ್ಣ ವಿವರಗಳನ್ನು ನೀಡಬೇಕು. ಈ ವಿವರಗಳನ್ನು ನಿಗದಿತ ನಮೂನೆಯಲ್ಲಿ ಪೂರಕ ದಾಖಲೆಗಳೊಂದಿಗೆ ನೇಮಕವಾದ ಮೂರು ತಿಂಗಳೊಳಗೆ ಸಲ್ಲಿಸಬೇಕು.

ಇದರ ಹೊರತಾಗಿಯೂ ಸರ್ಕಾರಿ ನೌಕರರು ಪ್ರತಿ ವರ್ಷ ಡಿಸೆಂಬರ್ 31ಕ್ಕೆ ತಮ್ಮ ಹಾಗೂ ಕುಟುಂಬದ ಎಲ್ಲ ಸದಸ್ಯರ ಆಸ್ತಿ ವಿವರ ಮತ್ತು ಹೊಣೆಗಾರಿಕೆಗಳ ವಾರ್ಷಿಕ ವಿವರ ಪಟ್ಟಿಯನ್ನು ನೀಡಬೇಕು. ಜತೆಗೆ ನಿಯಮ 24 ರಲ್ಲಿನ ಉಪಬಂಧಗಳಂತೆ ಪ್ರತಿಯೊಬ್ಬ ಸರ್ಕಾರಿ ನೌಕರರು ಚರ ಮತ್ತು ಸ್ಥಿರಾಸ್ತಿಗೆ ಸಂಬಂಧಿಸಿದಂತೆ ನಿಯಮಗಳಲ್ಲಿ ತಿಳಿಸಿರುವ ಸಂದರ್ಭಗಳಲ್ಲಿ ಅನುಮತಿ ಪಡೆಯುವುದು ಹಾಗೂ ವರದಿ ನೀಡುವುದು ಕಡ್ಡಾಯವಾಗಿದೆ. ಒಂದು ವೇಳೆ ಇದರಲ್ಲಿ ವಿಫಲರಾದರೆ, ನಡತೆ ನಿಯಮಗಳಿಗೆ ವ್ಯತಿರಿಕ್ತ ನಡವಳಿಕೆ ಪ್ರದರ್ಶಿಸಿದ ಕಾರಣ ನೀಡಿ ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಬಹುದಾಗಿದೆ.

 

Related posts

ಭಾರತದಲ್ಲಿ 1.9 ಬಿಲಿಯನ್ ಡಾಲರ್ ಹೂಡಿಕೆಗೆ ಟೆಸ್ಲಾ ಚಿಂತನೆ.

ಜಿ ಎಮ್‍ನಲ್ಲಿ ಗಾಂಧಿ ಜಯಂತಿ ಆಚರಣೆ – ಸ್ವಚ್ಛತಾ ಅಭಿಯಾನ

ಚಂದ್ರಯಾನ-3 ಬಗ್ಗೆ ವ್ಯಂಗ್ಯ: ಬಹುಭಾಷಾ ನಟ ಪ್ರಕಾಶ್ ರೈ ವಿರುದ್ಧ ಪ್ರಕರಣ ದಾಖಲು.