ಶಿವಮೊಗ್ಗ: ಕಾಂತರಾಜ್ ಆಯೋಗದ ವರದಿ ಮತ್ತು ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿ ಬಹುಜನ ಸಮಾಜ ಪಾರ್ಟಿಯ (ಬಿಎಸ್ಪಿ) ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಾಂತರಾಜ್ ಹಾಗೂ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಿ ಇಲ್ಲವೇ ಖುರ್ಚಿ ಖಾಲಿ ಮಾಡಿ ಎಂದು ಪ್ರತಿಭಟನಕಾರರು ಘೋಷಣೆ ಕೂಗಿದರು. ಹಿಂದುಳಿದ ವರ್ಗದವರ ಸಾಮಾಜಿಕ, ಶೈಕ್ಷಣಿಕ, ಸ್ಥಿತಿಗತಿಯ ಕುರಿತು ಅಧ್ಯಯನ ಮಾಡಲು ಸಿದ್ದರಾಮಯ್ಯ ಸರ್ಕಾರವೇ 2015ರಲ್ಲಿ ಕಾಂತರಾಜ್ ನೇತೃತ್ವದಲ್ಲಿ ವರದಿಯನ್ನು ಸಿದ್ಧಪಡಿಸಿತ್ತು. ನಂತರ ಈ ವರದಿ ಸೋರಿಕೆ ಕೂಡ ಆಗಿತ್ತು. ಕಾಂತರಾಜ್ ಆಯೋಗ ವರದಿ ಕೂಡ ಜಾರಿಯಾಗಲಿಲ್ಲ. ಅವರ ಅವಧಿ ಮುಗಿದ ಮೇಲೆ ಜಯಪ್ರಕಾಶ್ ಹೆಗಡೆಯವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆದರೆ ಈ ವರದಿಯೂ ಕೂಡ ಜಾರಿಯಾಗಲಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಕಾಂತರಾಜ್ ಹಾಗೂ ಸದಾಶಿವ ಆಯೋಗದ ವರದಿಯನ್ನು ಜಾರಿಮಾಡುತ್ತೇವೆ ಎಂದು ಆಶ್ವಾಸನೆ ನೀಡಿತ್ತು. ಆದರೆ ಸರ್ಕಾರ ಬಂದು ಆರು ತಿಂಗಳಾದರೂ ಕೂಡ ಈ ಬಗ್ಗೆ ಏನೂ ಮಾತನಾಡುತ್ತಿಲ್ಲ. ಹೀಗೆ ಸರ್ಕಾರಗಳು ಏನೇನೋ ಸಬೂಬು ಹೇಳುತ್ತಾ ಚಳ್ಳೆಹಣ್ಣು ತಿನ್ನಿಸುತ್ತಾ ಬಂದಿವೆ ಎಂದು ಆರೋಪಿಸಿದ ಅವರು, ಯಾವ ಆಯೋಗಗಳ ವರದಿ ಕೂಡ ಜಾರಿಯಾಗಿಲ್ಲ.
ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯ ಎತ್ತಿಹಿಡಿಯುವ ಕಾಂತರಾಜ್ ಆಯೋಗದ ವರದಿ ಹಾಗೂ ಸದಾಶಿವ ಆಯೋಗದ ವರದಿಯನ್ನು ಕೂಡಲೇ ವಿಧಾನಸಭೆಯಲ್ಲಿ ಮಂಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಬಿಎಸ್ಪಿಯ ಜಿಲ್ಲಾಧ್ಯಕ್ಷ ಎ.ಡಿ. ಶಿವಪ್ಪ, ಪದಾಧಿಕಾರಿಗಳಾದ ಪ್ರೊ. ಕೃಷ್ಣಪ್ಪ, ಹೆಚ್.ಎನ್. ಶ್ರೀನಿವಾಸ್, ಲೋಕೇಶ್ ತಮ್ಮಡಿಹಳ್ಳಿ, ಗುತ್ಯಪ್ಪ ಸೇರಿದಂತೆ ಹಲವರಿದ್ದರು.
previous post
next post