ಬೆಂಗಳೂರು: ಕರ್ನಾಟಕ ಸರ್ಕಾರವು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ನಂದಿನಿ ಹಾಲಿನ ಪ್ಯಾಕ್, ಉತ್ಪನ್ನಗಳನ್ನ ಮಾರಾಟ ಮಾಡುತ್ತಿರುವ ಮಾದರಿಯಲ್ಲಿ ರಾಜ್ಯಾದ್ಯಂತ ಮಾಂಸ ಮಾರಾಟ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ತನ್ನ ಮಳಿಗೆಗಳ ಮೂಲಕ ಪ್ಯಾಕ್ ಮಾಡಿದ ಕುರಿ ಮತ್ತು ಮೇಕೆ ಮಾಂಸವನ್ನು ಸಮರ್ಪಕ ಬೆಲೆಯಲ್ಲಿ ಮಾರಾಟ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಪಶುಸಂಗೋಪನಾ ಇಲಾಖೆಯಡಿ ಈ ಯೋಜನೆ ಜಾರಿ ಮಾಡಲು ಉದ್ದೇಶಿಸಿದ್ದು, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸುವ ನಿರೀಕ್ಷೆ ಮಾಡಲಾಗಿದೆ.
ಈ ಕುರಿತು ನವದೆಹಲಿಯಲ್ಲಿ ಮಾತನಾಡಿದ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ಹಾಗೂ ಕಾಂಗ್ರೆಸ್ ಶಾಸಕ ಟಿ.ಬಿ.ಜಯಚಂದ್ರ, ರೈತರು ತಮ್ಮ ಕುರಿ ಮತ್ತು ಮೇಕೆಗಳಿಗೆ ಉತ್ತಮ ಬೆಲೆಯನ್ನು ಪಡೆಯಲು ಮತ್ತು ಜನರಿಗೆ ಗುಣಮಟ್ಟದ ಮಾಂಸವನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ರೈತರಿಂದ ನೇರವಾಗಿ ಪ್ರಾಣಿಗಳನ್ನು ಖರೀದಿಸಲಾಗುತ್ತದೆ. ಇದು ಅವರ ಆದಾಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕೆಎಂಎಫ್ ನ ನಂದಿನಿ ಮಾದರಿಯಲ್ಲಿ ಮಾಂಸದ ಬ್ರಾಂಡ್ ನಿರ್ಮಿಸಲು ಪಶುಸಂಗೋಪನಾ ಇಲಾಖೆ ಶ್ರಮಿಸಲಿದೆ ಎಂದು ಹೇಳಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.
ಕುರಿ ಮತ್ತು ಮೇಕೆ ಸಾಕುವ ರೈತರು ತಮ್ಮ ಪ್ರಾಣಿಗಳಿಗೆ ಲಾಭದಾಯಕ ಬೆಲೆಗಳನ್ನು ಪಡೆಯಬೇಕೆಂದು ನಾವು ಬಯಸುತ್ತೇವೆ. ಈ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಉದ್ದೇಶ ಹೊಂದಿದ್ದೇವೆ. ಮಾಂಸ ಮಾರಾಟ ಮಳಿಗೆ ಸ್ಥಾಪನೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.
ಕುರಿ ಮತ್ತು ಮೇಕೆ ಚರ್ಮದಿಂದ ಉತ್ಪನ್ನಗಳನ್ನು ತಯಾರಿಸುವ ಯೋಜನೆಯನ್ನೂ ಸರ್ಕಾರ ಹೊಂದಿದೆ. ಇಲಾಖೆಯ ಅಧಿಕಾರಿಗಳನ್ನು ತಮಿಳುನಾಡು ಮತ್ತು ಕೋಲ್ಕತ್ತಾದ ಅಂಬೂರ್ಗೆ ಕಳುಹಿಸಲಾಗುವುದು, ಅಲ್ಲಿ ಕುರಿ ಮತ್ತು ಮೇಕೆ ಚರ್ಮವನ್ನು ಬಳಸಿ ಚರ್ಮ ಮತ್ತು ಇತರ ಉತ್ಪನ್ನಗಳನ್ನು ಅಧ್ಯಯನ ಮಾಡಲಿದ್ದಾರೆ ಎಂದು ಹೇಳಿದರು.