ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಕಾವ್ಯಕ್ಕೆ ಯಾವುದೇ ಕಟ್ಟಳೆಗಳು ಇರಬಾರದು-ಪತ್ರಕರ್ತ ಆರುಂಡಿ ಶ್ರೀನಿವಾಸಮೂರ್ತಿ

ಶಿವಮೊಗ್ಗ: ಕಾವ್ಯಕ್ಕೆ ಯಾವುದೇ ಕಟ್ಟಳೆಗಳು ಇರಬಾರದು ಎಂದು ಪತ್ರಕರ್ತ ಆರುಂಡಿ ಶ್ರೀನಿವಾಸಮೂರ್ತಿ ಹೇಳಿದರು.
ಅವರು ಇಂದು ಹೊಸಮನೆಯ ಶ್ರೀ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಮತ್ತು ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪ್ರೊ. ಸತ್ಯನಾರಾಯಣರ ಬದುಕಿನ ರಥದ ಸುತ್ತಮುತ್ತ ಪುಸ್ತಕ ಬಿಡುಗಡೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾವ್ಯ ತಣ್ಣಗಿರಬೇಕು. ಅದಕ್ಕೆ ಯಾವುದೇ ವಿಧಿ ವಿಧಾನಗಳು ಇರಬಾರದು. ಸಹಜವಾಗಿ ಮೂಡಿಬರಬೇಕು. ಗಿಡದಲ್ಲಿ ಅರಳುವ, ನಳನಳಿಸುವ ಹೂವಿನಂತೆ ಕಾವ್ಯ ಇರಬೇಕು. ಅವಸರದ, ಅಧ್ಯಯನವೇ ಇಲ್ಲದ ಅನುಭವದ ಕೊರತ ಇರುವ ಕಾವ್ಯಗಳು ಗಟ್ಟಿತನ ಕಂಡುಕೊಳ್ಳಲು ಸಾಧ್ಯವಿಲ್ಲ. ಅನುಭವವೇ ಕಾವ್ಯದ ಸಾರ ಎಂದರು.
ಕಾವ್ಯ ಮನುಷ್ಯ ಸಂಬಂಧಗಳನ್ನು ಬೆಸೆಯಬೇಕು. ಶೋಷಿತರ ಧನಿಯಾಗಬೇಕು. ತಲ್ಲಣಗಳ ತಣಿಸುವ, ನೋವುಗಳಿಗೆ ಮದ್ದಾಗುವ ಮಾನವೀಯತೆಯ ಕಾವ್ಯಗಳು ಇಂದು ಕಡಿಮೆಯಾಗುತ್ತಿವೆ. ಯಾವುದೋ ಜಾತಿ, ಧರ್ಮ ಅಥವಾ ಟೀಕೆಗೆ ಅಥವಾ ಪ್ರಚಾರಕ್ಕೆ ಕಾವ್ಯ ಬಳಕೆಯಾಗಬಾರದು.ಮತ್ತು ಕಾವ್ಯ ಸದಾ ತಳಮಳ ಉಂಟುಮಾಡುವ ಹಾಗೂ ಕಾಡುವಂತಿರಬೇಕು. ನಾನು ಕವಿಯಾಗಬೇಕು ಎಂಬ ಹಠವೂ ಸಲ್ಲದು. ಕಾವ್ಯಗಳೇ ಕವಿಯನ್ನು ಉಳಿಸುತ್ತವೆ. ಅದೊಂದು ಮಿಂಚು ಎಂದರು.
ಕನ್ನಡ ಭಾಷೆ ಎಂದಿಗೂ ಸಾಯುವುದಿಲ್ಲ. ಆದರೆ ಸೊರಗಬಹುದು. ಇಂಗ್ಲಿಷ್ ವಿಜೃಂಭಣೆಯ ನಡುವೆ ಕನ್ನಡ ಯಾವಾಗಲೂ ಉಳಿದುಬರುತ್ತದೆ. ಇಂಗ್ಲಿಷ್ ಕಂಠದ ಭಾಷೆಯಾದರೆ ಕನ್ನಡ ಕರುಳಿನ ಭಾಷೆ. ಅಕ್ಷರ ಸಂಸ್ಕøತಿಗಿಂತ ಅನಕ್ಷರಸ್ಥ ಸಮಾಜವೇ ಕನ್ನಡವನ್ನು ಉಳಿಸುತ್ತದೆ. ಕನ್ನಡ ಮತ್ತು ಇಂಗ್ಲಿಷ್ ನಡುವೆ ಒಂದು ಹೊಂದಾಣಿಕೆಯ ಮಾಧ್ಯಮ ಇಂದು ಅಗತ್ಯವಿದೆ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್. ಸುಂದರ್‍ರಾಜ್ ಮಾತನಾಡಿ, ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಮಾತನಾಡುವ ಮೂಲಕ ಉಳಿಸಬೇಕಾಗಿದೆ. ಆಂಗ್ಲ ಭಾಷೆ ಅಂತರಾಷ್ಟ್ರೀಯ ಭಾಷೆ ಎಂಬ ತಪ್ಪು ಕಲ್ಪನೆ ನಮಗಿದೆ. ಕನ್ನಡ ಭಾಷೆ ಉದಯವಾದ ಎಷ್ಟೋ ವರ್ಷಗಳ ನಂತರ ಆಂಗ್ಲ ಭಾಷೆ ಬಂದಿದೆ. ಅದರ ವ್ಯಾಮೋಹದಿಂದ ಹೊರಬಂದು ಕನ್ನಡವನ್ನು ಉಳಿಸಬೇಕಾಗಿದೆ. ಕನ್ನಡ ಪುಸ್ತಕಗಳನ್ನು ಕೊಂಡು ಓದಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕವಿ ಹಾಗೂ ಪುಸ್ತಕದ ಲೇಖಕ ಪ್ರೊ. ಸತ್ಯನಾರಾಯಣ ಮಾತನಾಡಿ, ಕನ್ನಡಕ್ಕೆ ಆದ್ಯತೆ ಇರಬೇಕು. ಕನ್ನಡನ್ನು ಪ್ರೀತಿಸಬೇಕು. ಗೌರವಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷೆ ನಾಗರತ್ನಾ ಕುಮಾರ್, ಉಪಪ್ರಾಂಶುಪಾಲೆ ಲಕ್ಷ್ಮೀ ರವೀಶ್, ರಮೇಶ್, ಸಾವಿತ್ರಮ್ಮ, ಪಾಲಾಕ್ಷಪ್ಪ ಮುಂತಾದವರಿದ್ದರು.
ಉಪನ್ಯಾಸಕಿ ಮಂಜಮ್ಮ ನಿರೂಪಿಸಿ, ಶಿವಾನಿ ಸ್ವಾಗತಿಸಿ, ನಿಶ್ಚಿತ ವಂದಿಸಿದರು.

Related posts

ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ದುರ್ಮರಣ.

ನೆಹರೂ ಕ್ರೀಡಾಂಗಣದಲ್ಲಿ  ದೈಹಿಕ ಶಿಕ್ಷಣ ಶಿಕ್ಷಕರಿಗೆ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ 

ರಾಜಕೀಯಕ್ಕಾಗಿ ಬಿಜೆಪಿಯವರಿಂದ ಬರ ಅಧ್ಯಯನ-ಸಿಎಂ ಸಿದ್ದರಾಮಯ್ಯ