ಶಿವಮೊಗ್ಗ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೊಂದಾಯಿತ ಫಲಾನುಭವಿಗಳಿಗೆ ಸಿಗುವ ಸೌಲಭ್ಯಗಳ ಸಹಾಯ ಧನವನ್ನು ಕಡಿತಗೊಳಿಸಬಾರದು ಸೇರಿದಂತೆ ಇತರೆ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ವತಿಯಿಂದ ನ.22ರ ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ.
ನೊಂದಾಯಿತ ಫಲಾನುಭವಿಗಳ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಯೋಜನೆಯಡಿ ನೀಡುತ್ತಿದ್ದ ಸಹಾಯಧನದಲ್ಲಿ ಶೇ.80ರಷ್ಟು ಕಡಿತಗೊಳಿಸಿರುವುದರಿಂದ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ವಿ. ವಿನೋದ್ ಇಂದು ಮೀಡಿಯಾ ಹೌಸ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಹಾಯಧನ ಕಡಿತಗೊಳಿಸಿರುವ ಪ್ರಸ್ತುತ ಆದೇಶವನ್ನು ಸರ್ಕಾರ ರದ್ದುಪಡಿಸಿ ಕಳೆದ ವರ್ಷದಂತೆ ಯಥಾವತ್ತಾಗಿ ಜಾರಿಗೊಳಿಸಬೇಕು. ಅಪಘಾತ ಪರಿಹಾರ ಸಯಾಯಧನವನ್ನು 8ಲಕ್ಷ ರೂ. ಮತ್ತು ಸಂಪೂರ್ಣ ಶಾಶ್ವತ ದುರ್ಬಲತೆಗೆ 5ಲಕ್ಷ ರೂ. ಹಾಗೂ ಭಾಗಶಃ ದುರ್ಬಲತೆಗೆ 3ಲಕ್ಷ ನೀಡಬೇಕು. ಅಂತ್ಯಕ್ರಿಯೆಗೆ 25 ಸಾವಿರ ರೂ. ಹಾಗೂ ಅನುಗ್ರಹ ರಾಶಿಗೆ 1ಲಕ್ಷ ರೂ. ಸಹಾಯಧನ ನೀಡಬೇಕು. ಸಹಾಯ ಧನ ಅರ್ಜಿಯು ಮಂಜೂರಾತಿ ಆದೇಶದ ನಂತರ ನಿರ್ದಿಷ್ಟ 10 ದಿನಗಳಲ್ಲಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುರೇಶ್, ಎ. ಶಶಿಕುಮಾರ್, ನೇತ್ರಾವತಿ, ಸಂಧ್ಯಾ, ಅವಿನಾಶ್, ಮುನಿಯಪ್ಪ, ಜಯಣ್ಣ, ಶಿವಕುಮಾರ್, ಶೇಖರ್ ಆನಂದ್ ಇನ್ನಿತರರು ಉಪಸ್ಥಿತರಿದ್ದರು.
previous post