ಶಿವಮೊಗ್ಗ: ಭಾಷೆ ಎನ್ನುವುದು ಸೇತುವೆ ಇದ್ದ ಹಾಗೆ. ಕನ್ನಡ ಭಾಷೆಯನ್ನು ಮರೆಯಬಾರದು. ಎಲ್ಲಾ ಕನ್ನಡಿಗರೂ ಮನೆಮನೆಯಲ್ಲಿ ಕಡ್ಡಾಯವಾಗಿ ಕನ್ನಡ ಮಾತನಾಡಲೇಬೇಕು ಎಂದು ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್ ಹೇಳಿದ್ದಾರೆ.
ಅವರು ಇಂದು ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಜಿಲ್ಲಾ ಜಂಗಮ ಸಮಾಜದ ಮಹಿಳಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡಿಗರು ಬೇರೆ ಭಾಷಿಗರಿಗೆ ಮಣೆ ಹಾಕುತ್ತಾರೆ. ಅವರೊಂದಿಗೆ ಬೇಗ ಬೆರೆಯುತ್ತಾರೆ. ಮತ್ತು ಅವರ ಭಾಷೆಯಲ್ಲೇ ಮಾತನಾಡಲು ಪ್ರಯತ್ನಿಸುತ್ತಾರೆ. ಆದರೆ ಬೇರೆ ಭಾಷಿಗರು ಕರ್ನಾಟಕದಲ್ಲಿ ಇದ್ದರೂ ಸಹ ಕನ್ನಡಿಗರೊಂದಿಗೆ ಅವರ ಭಾಷೆಯಲ್ಲೇ ಮಾತನಾಡುತ್ತಾರೆ. ಇಂಗ್ಲಿಷ್ ವ್ಯಾಮೋಹ ಹೆಚ್ಚುತ್ತಿರುವ ಸಂದರ್ಭದಲ್ಲಿ ನಮ್ಮ ಕನ್ನಡವನ್ನು ಉಳಿಸಿ ಬೆಳೆಸುವ ಅನಿವಾರ್ಯತೆ ಇದೆ ಎಂದರು.
ಸರ್ಕಾರ ಮಹಿಳೆಯರಿಗೆ ಸ್ವಂತ ಉದ್ಯೋಗ ನಡೆಸಲು ಪ್ರೋತ್ಸಾಹ ನೀಡಬೇಕು. ದುಬಾರಿ ಯುಗದಲ್ಲಿ ಗಂಡ-ಹೆಂಡತಿ ಇಬ್ಬರೂ ದುಡಿಯುವ ಅನಿವಾರ್ಯತೆ ಇದೆ. ಇಂತಹ ಸಂದರ್ಭದಲ್ಲಿ ಮಹಿಳಾ ಸಂಘಟನೆಗಳು ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿ ಆರ್ಥಿಕ ಸೌಲಭ್ಯಗಳ ಬಗ್ಗೆ ಮಾಹಿತಿ, ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡಬೇಕು. ಹೆಣ್ಣು ಮಕ್ಕಳಿಗೆ ದುಡಿಯುವ ಶಕ್ತಿ ಇದೆ. ಕುಟುಂಬದ ಜವಾಬ್ದಾರಿ ಹೊರುವ ಶಕ್ತಿಯೂ ಇದ್ದು, ಸಾಮಾಜಿಕ ಚಟುವಟಿಕೆಗಳಲ್ಲಿ ಕೂಡ ತೊಡಗಿಸಿಕೊಳ್ಳಲು ಸಂಘಟನೆಗಳು ಸಹಕಾರಿ ಎಂದರು.
ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷ ಎ.ಎನ್. ಸಂಗಯ್ಯ ಮಾತನಾಡಿ, ಹೆಣ್ಣುಮಕ್ಕಳಿಗೆ ಇಂತಹ ಕಾರ್ಯಕ್ರಮಗಳು ಪ್ರತಿಭೆ ಹೊರಹೊಮ್ಮಲು ಒಂದು ವೇದಿಕೆಯಾಗಿದೆ. ಮಹಿಳೆಂiÀiರಲ್ಲಿ ಜಾಗೃತಿ ಜೊತೆಗೆ ನಾಯಕತ್ವ ಗುಣ ಹೊರಹೊಮ್ಮಲು ಸಹಕಾರಿಯಾಗುತ್ತದೆ ಎಂದರು.
ಮಹಿಳೆಯರಿಗಾಗಿ ಒಳಾಂಗಣ ಕ್ರೀಡೆಗಳು ಮತ್ತು ರಸಪ್ರಶ್ನೆ ಮುಂತಾದ ಕಾರ್ಯಕ್ರಮ ಹಮ್ಮಿಕೊಂಡು ವಿಜೇತರಿಗೆ ಬಹುಮಾತನ ವಿತರಿಸಲಾಯಿತು.
ಸಂಘಟನೆಯ ಅಧ್ಯಕ್ಷೆ ಲೀಲಾ ನಾಗಭೂಷಣ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಆಶಾ ಹಿರೇಮಠ್, ಜಂಗಮ ಸಮಾಜದ ಪ್ರಮುಖರಾದ ಪುಟ್ಟಯ್ಯ, ಕಾಟನ್ ಜಗದೀಶ್, ಲಿಂಗರಾಜ್, ಉಮಾಮಹೇಶ್ವರ, ಅನ್ನಪೂರ್ಣಮ್ಮ, ಶಿಲ್ಪಾ ಮೊದಲಾದವರು ಇದ್ದರು.