ಶಿವಮೊಗ್ಗ: ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರೆ. ಸಾಮೂಹಿಕ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಇಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ವೈ. ವಿಜಯೇಂದ್ರ ಅವರನ್ನು ಅಭಿನಂದಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಇಡೀ ಪ್ರಪಂಚ ಭಾರತದ ಲೋಕಸಭಾ ಚುನಾವಣೆಯತ್ತ ನೋಡುತ್ತಿದೆ. ಮೋದಿಯವರು ವಿಶ್ವನಾಯಕ ಎಂಬ ಪಟ್ಟ ಪಡೆದುಕೊಂಡಿದ್ದಾರೆ. ಪ್ರತಿ ಹಳ್ಳಿಯವರೂ ಅವರನ್ನು ಪ್ರೀತಿಸುತ್ತಾರೆ. ಕಳೆದ ಬಾರಿ ನಾವು 25 ಸ್ಥಾನವನ್ನು ಕರ್ನಾಟಕದಲ್ಲಿ ಗೆದ್ದಿದ್ದೆವು. ಈ ಬಾರಿ 28ಕ್ಕೆ 28 ಸ್ಥಾನವನ್ನೂ ಗೆಲ್ಲುತ್ತೇವೆ. ಒಬ್ಬ ವ್ಯಕ್ತಿಯನ್ನು ಮುಂದಿಟ್ಟುಕೊಂಡು ನಾವು ಚುನಾವಣೆಗೆ ಹೋಗುವುದಿಲ್ಲ. ಬಿಜೆಪಿ ಹಿಂದುತ್ವದ ಮೇಲೆ ನಡೆಯುತ್ತಿದೆ ಎಂದರು.
ಬಿಜೆಪಿ ಒಡೆದ ಮನೆ ಎಂದು ಕಾಂಗ್ರೆಸ್ನವರು ಆರೋಪಿಸುತ್ತಿದ್ದಾರೆ. ಆದರೆ ಇದು ಸರಿಯಲ್ಲ. ಕಾಂಗ್ರೆಸ್ಸೇ ಒಡೆದ ಮನೆಯಾಗಿದೆ. ದೇಶದಲ್ಲಿ ಒಂದೇ ಕಾಂಗ್ರೆಸ್ ಇಲ್ಲ. ಅದು ಚೂರಾಗಿರುವ ಪಕ್ಷ. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ ಎಂದು ಅವರು, ಲೋಕಸಭೆ ಟಿಕೆಟ್ ಹಂಚಿಕೆ, ಚುನಾವಣಾ ಪ್ರಚಾರ ಇವೆಲ್ಲವೂ ಸಾಮೂಹಿಕ ನೇತೃತ್ವದಲ್ಲೇ ನಡೆಯುತ್ತದೆ. ನಾನು ಪಕ್ಷ ಏನು ಜವಾಬ್ದಾರಿ ಕೊಡುತ್ತದೆಯೋ ಅದನ್ನು ನಿರ್ವಹಿಸುತ್ತೇನೆ ಎಂದರು.