ಶಿವಮೊಗ್ಗ: ಕಥಾ ಕಮ್ಮಟಗಳು ಪ್ರತಿಭೆಗಳನ್ನು ಅನಾವರಣಗೊಳಿಸುತ್ತವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಿ.ಕೃಷ್ಣಪ್ಪ ಹೇಳಿದರು.
ಅವರು ಚಿಗುರು ವೇದಿಕೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಕಾಚಿನಕಟ್ಟೆ, ಕೆ.ವಿ. ಸುಬ್ಬಣ್ಣ ರಂಗಸಮೂಹ ಇವರ ಸಂಯುಕ್ತ ಆಶ್ರಯದಲ್ಲಿ ಕಾಚಿನಕಟ್ಟೆ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಕಥಾ ಕಮ್ಮಟ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಥಾ ಕಮ್ಮಟಗಳು ಜ್ಞಾನದ ಅರಿವನ್ನು ವಿಸ್ತರಿಸುತ್ತವೆ. ಅಧ್ಯಯನಗಳಿಗೆ ದಾರಿಯಾಗುತ್ತವೆ. ಒಳ್ಳೆಯ ಸಂಸ್ಕಾರ, ವ್ಯಕ್ತಿತ್ವ, ನಾಯಕತ್ವ ಗುಣಗಳನ್ನು ರೂಪಿಸುತ್ತದೆ. ವಿದ್ಯಾರ್ಥಿಗಳಲ್ಲಿರುವ ಬುದ್ಧಿಶಕ್ತಿ ಮತ್ತು ಜಾಣ್ಮೆಯನ್ನು ಹೊರತರುತ್ತವೆ. ಕಥಾ ಕಮ್ಮಟ ಯಶಸ್ವಿಯಾಗಲಿ ಎಂದರು.
ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಚಂದ್ರಪ್ಪ ಗುಂಡಪಲ್ಲಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕೀಳರಿಮೆ ಇರಬಾರದು. ಸ್ಪಷ್ಟ ಗುರಿ ಇರಬೇಕು. ಅದರಲ್ಲೂ ಹಳ್ಳಿಯ ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ಅಧ್ಯಯನದತ್ತ ಸಾಗಿದರೆ ಯಶಸ್ಸು ಸಿಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ಶ್ರೀಪಾದ ಭಾಗವತ್ ಮಾತನಾಡಿ, ದುಡ್ಡಿನ ಹಿಂದೆ ಹೋದವರಿಗೆ ಆಯಸ್ಸು ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳು ಓದಿನತ್ತ ಸಾಗಬೇಕು. ಪ್ರಬಲ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಇಂತಹ ಶಿಬಿರಗಳು ಅವರ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವಿಶ್ವನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಸನ್ನ ಹುಣಸೆಕೊಪ್ಪ, ಅಶೋಕ್ಕುಮಾರ್, ಪುಟ್ಟರಾಜು ಪಾಲ್ಗೊಂಡಿದ್ದರು.
ನಿವೇದಿತಾ ಸಂಗಡಿಗರು ಪ್ರಾರ್ಥಿಸಿ, ಪಂಡರಿನಾಥ ಸ್ವಾಗತಿಸಿ, ಗೋಪಾಲಕೃಷ್ಣ ನಿರೂಪಿಸಿ, ರವಿ ವಂದಿಸಿದರು.
previous post