ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸಹಕಾರ ಸಪ್ತಾಹದ ಹಬ್ಬ ಆಚರಿಸಲು ಸಿದ್ಧತೆ-ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ.

ಶಿವಮೊಗ್ಗ: ಬರ ಮತ್ತು ಹಬ್ಬಗಳ ನಡುವೆ ಸಹಕಾರ ಸಪ್ತಾಹದ ಹಬ್ಬವನ್ನು ಅತ್ಯಂತ ಸಂಭ್ರಮ, ಸಡಗರ ಹಾಗೂ ಸರಳತೆಯಿಂದ ಜಿಲ್ಲೆಯಲ್ಲಿ ಆಚರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಇಂದಿಲ್ಲಿ ಹೇಳಿದರು.
ಡಿಸಿಸಿ ಬ್ಯಾಂಕ್ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಿಸಲಾಗುವುದು. ಇದರ ಉದ್ಘಾಟನೆ ಕಾರ್ಯಕ್ರಮ ಶಿವಮೊಗ್ಗದಿಂದಲೇ ಆರಂಭವಾಗಲಿದ್ದು, ನ.14ರಿಂದ 20ರವರೆಗೆ ಶಿವಮೊಗ್ಗವೂ ಸೇರಿದಂತೆ ವಿವಿಧ ಕಡೆಗಳಲ್ಲಿ ಆಚರಿಸಲಾಗುವುದು ಎಂದರು.
ಜಿಲ್ಲಾ ಸಹಕಾರ ಯೂನಿಯನ್ ನೇತೃತ್ವದಲ್ಲಿ ನ.14ರಂದು ರಾಜ್ಯಮಟ್ಟದ 70ನೇ ಸಹಕಾರ ಸಪ್ತಾಹ ಉದ್ಘಾಟನಾ ಸಮಾರಂಭವು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆಯಲಿದ್ದು, ಸಹಕಾರ ಸಚಿವ ಕೆ.ಎನ್. ರಾಜಣ್ಣ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಶಾಸಕ ಜಿ.ಟಿ. ದೇವೇಗೌಡರು ಅಧ್ಯಕ್ಷತೆ ವಹಿಸಲಿದ್ದಾರೆ. ಬರ ಪರಿಸ್ಥಿತಿ ಇರುವುದರಿಂದ ಸರಳವಾಗಿ ಸಪ್ತಾಹದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಸಹಕಾರ ಸಂಸ್ಥೆಗಳು, ಬ್ಯಾಂಕ್‍ಗಳಲ್ಲಿ ಅರ್ಥಪೂರ್ಣವಾಗಿ ಅಚರಿಸಲಿವೆ. ಆರು ದಿನಗಳ ಕಾಲ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಹಕಾರ ಸಪ್ತಾಹ ನಡೆಯಲಿದ್ದು, ಸಮಾರೋಪ ಸಮಾರಂಭವು ವಿಜಯಪುರದಲ್ಲಿ ನಡೆಯಲಿದೆ ಎಂದು ವಿವರಿಸಿದರು.
ಭಾರತದ ಮೊದಲ ಪ್ರಧಾನಮಂತ್ರಿ ಜವಾಹರ್‍ಲಾಲ್ ನೆಹರು ಅವರ 5ನೇ ಪಂಚವಾರ್ಷಿಕ ಯೋಜನೆಯಂತೆ ಸಹಕಾರ ಕ್ಷೇತ್ರದ ಮೂಲಕ ಆರ್ಥಿಕ ಅಭಿವೃದ್ಧಿ ಮತ್ತು ಸರ್ವ ಜನರ ಆರ್ಥಿಕ ಪರಿಸ್ಥಿತಿಗೆ ಬೆನ್ನೆಲುಬಾಗಿ ನಿಂತಿದ್ದು, ಸಹಕಾರ ಚಳವಳಿ ದೇಶದ ಆರ್ಥಿಕತೆ ಮಹತ್ತರ ಕೊಡುಗೆಯನ್ನೆ ನೀಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ μÁ ಕೂಡ ಸಹಕಾರಿಗಳಾಗಿದ್ದು, ಕೇಂದ್ರ ಸರ್ಕಾರ ಹೊಂದಿರುವ ಗುರಿಯಂತೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧನೆಯಲ್ಲಿ ಸಹಕಾರ ಕ್ಷೇತ್ರದ ಪಾತ್ರವೂ ಮುಖ್ಯವಾಗಿದೆ. ಅದಕ್ಕೆ ಪೂರಕವಾಗಿ ಸಹಕಾರ ಕ್ಷೇತ್ರ ಚಟುವಟಿಕೆಗಳನ್ನು ನಡೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸಹಕಾರ ಸಪ್ತಾಹದಲ್ಲಿ ವಿವಿಧ ವಿಚಾರಗಳ ವಿಚಾರ ಸಂಕಿರಣಗಳ ಮೂಲಕ ಸಾಧನೆಯ ದಾರಿಯನ್ನು ಕಂಡುಕೊಳ್ಳಲಾಗುವುದು ಎಂದರು.
ದೇಶಾದ್ಯಂತ ಏಕಕಾಲದಲ್ಲೆ ನಡೆಯಲಿರುವ 70ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಆರು ದಿನಗಳ ಕಾಲ ಸಹಕಾರ ಸಂಘ-ಸಂಸ್ಥೆಗಳಲ್ಲಿ ಇತ್ತೀಚಿನ ಬೆಳವಣಿಗೆ, ಸಾಲೇತರ ಸಹಕಾರ ಸಂಘಗಳ ಪುನಶ್ಚೇತನ ಹಾಗೂ ಆರ್ಥಿಕ ಸೇರ್ಪಡೆ, ಸಹಕಾರ ಸಂಸ್ಥೆಗಳನ್ನು ಡಿಜಿಟಲೀಕರಣಗೊಳಿಸುವ ತಾಂತ್ರಿಕತೆಯ ಅಳವಡಿಕೆ ಮತ್ತು ಉನ್ನತೀಕರಣ, ಸಹಕಾರ ಸಂಸ್ಥೆಗಳಲ್ಲಿ ಸರಳ ವ್ಯಾಪಾರ ಮತ್ತು ಉದಯೋನ್ಮುಖ ವಲಯಗಳು, ಸಾರ್ವಜನಿಕ-ಖಾಸಗಿ-ಸಹಕಾರಿ ಸಹಭಾಗಿತ್ವ ಬಲಪಡಿಸುವುದು, ಮಹಿಳೆಯರು, ಯುವಜನ ಮತ್ತು ಅಬಲ ವರ್ಗಕ್ಕೆ ಸಹಕಾರ ಸಂಸ್ಥೆಗಳು, ಮತ್ತು ಸಹಕಾರ ಶಿಕ್ಷಣ, ತರಬೇತಿಯ ಪರಿಷ್ಕರಣೆ ವಿಷಯಗಳ ಕುರಿತು ವಿಚಾರಸಂಕಿರಣಗಳು ನಡೆಯಲಿವೆ ಎಂದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ರತ್ನಾಕರ್, ಉಪಾಧ್ಯಕ್ಷೆ ಮಮತಾ ಚಂದ್ರಕುಮಾರ್, ಶಿಮುಲ್ ಅಧ್ಯಕ್ಷ ಶ್ರೀಪಾದ ರಾವ್ ನಿಸ್ರಾಣಿ, ಸಹಕಾರಿ ಮುಖಂಡರಾದ ಹೆಚ್.ಎಲ್. ಷಡಾಕ್ಷರಿ, ಎಸ್.ಕೆ.ಮರಿಯಪ್ಪ, ಯೋಗೀಶ್, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

Related posts

ಸ್ಕೀಲ್ ಅಕಾಡೆಮಿಗೆ ಸಚಿವರ ಸಕರಾತ್ಮಕ ಸ್ಪಂದನೆ.

ಸೆ. 28. ಶಂಕರಘಟ್ಟದಲ್ಲಿ 217 ನೇ ಸಾಹಿತ್ಯ ಹುಣ್ಣಿಮೆ

ವ್ಯಾಪಾರ ವೃದ್ಧಿಸಿಕೊಳ್ಳಲು ಪರಸ್ಪರ ಸಹಕಾರ ಮುಖ್ಯ-ಪೂರ್ಣಿಮಾ ಸುನೀಲ್