ಶಿವಮೊಗ್ಗ: ಬರ ಅಧ್ಯಯನ ಪ್ರವಾಸ ಈಗಾಗಲೇ ಬಿಜೆಪಿ ಯ ಮುಖಂಡರು ಪ್ರಾರಂಭಿಸಿದ್ದಾರೆ. ನಾನು ಕೂಡ ನ.05ರಿಂದ ರಾಜ್ಯದ ವಿವಿಧೆಡೆ ನಾಯಕರೊಂದಿಗೆ ಪ್ರವಾಸ ಮಾಡಲಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಭದ್ರಾವತಿ ಪ್ರತಿಷ್ಠಿತ ವಿಎಎಸ್ಎಲ್ ಕಾರ್ಖಾನೆ ನೂರು ವಸಂತ ದಾಟ್ಟಿದ್ದು, ಖ್ಯಾತ ನಟ ಹಾಗೂ ವಿಎಎಸ್ಎಲ್ ಮಾಜಿ ಉದ್ಯೋಗಿ ದೊಡ್ಡಣ್ಣರವರ ನೇತೃತ್ವದಲ್ಲಿ ನ.04 ಮತ್ತು 05ರಂದು ದೊಡ್ಡ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಭಾಗವಹಿಸಲು ಬಂದಿದ್ದೇನೆ. ಆ ಕಾರ್ಯಕ್ರಮ ಮುಗಿದ ನಂತರ ಬರ ಅಧ್ಯಯನ ಪ್ರವಾಸದಲ್ಲಿ ಭಾಗವಹಿಸುತ್ತೇನೆ. ಈಗಾಗಲೇ 18 ತಂಡಗಳ ಮೂಲಕ ಬಿಜೆಪಿ ನಾಯಕರು ರಾಜ್ಯದ ಮೂಲೆ ಮೂಲೆಗೂ ತೆರಳುತ್ತಿದ್ದಾರೆ ಎಂದರು.
ವಿಪಕ್ಷ ನಾಯಕನ ಸ್ಥಾನ ವಿಳಂಬವಾಗಿದ್ದು ನಿಜ. ಇನ್ನೂ ಕೆಲವೇ ದಿನಗಳಲ್ಲಿ ವರಿಷ್ಠರು ಪ್ರಕಟ ಮಾಡುತ್ತಾರೆ. ರಾಜ್ಯಾಧ್ಯಕ್ಷ ಸ್ಥಾನ ಕೂಡ ಪ್ರಕಟಗೊಳ್ಳಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ನಾಲ್ಕು ದಿನಗಳಲ್ಲಿ ಎಂಪಿ ಚುನಾವಣೆಯ ಅಭ್ಯರ್ಥಿಗಳ ಘೋಷಣೆಯಾಗಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅದಕ್ಕೂ ನಮಗು ಸಂಬಂಧವಿಲ್ಲ. ನಮ್ಮ ಪಕ್ಷದಿಂದ ಆದಷ್ಟು ಬೇಗ ಉತ್ತಮ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು ಮತ್ತು ಅತಿ ಹೆಚ್ಚಿನ ಸ್ಥಾನವನ್ನು ಕೂಡ ಗೆಲ್ಲುತ್ತೇವೆ. ಮೋದಿಯವರು ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ. ನಮ್ಮ ಪಕ್ಷ ತನ್ನದೇ ಆದ ರೀತಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತದೆ ಎಂದರು.
ರಾಜ್ಯ ನಾಯಕರುಗಳಾದ ಕೆ.ಎಸ್.ಈಶ್ವರಪ್ಪ, ಸದಾನಂದಗೌಡ, ಕೋಟಾ ಶ್ರೀನಿವಾಸ್ ಪೂಜಾರಿ ಅವರನ್ನು ಕೇಂದ್ರ ನಾಯಕರು ಕರೆದಿರುವ ಬಗ್ಗೆ ಉತ್ತರಿಸಿದ ಅವರು ಪಕ್ಷದ ಸಂಘಟನೆಯ ಬಗ್ಗೆ ಚರ್ಚೆಗೆ ಕರೆದಿರುತ್ತಾರೆ. ಅದರಲ್ಲಿ ಏನು ವಿಶೇಷ ಇಲ್ಲ ಎಂದರು.
ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ನಟ ದೊಡ್ಡಣ್ಣ ರವರು ಇದ್ದರು.
ಬಾಕ್ಸ್:
ಸಿಗಂದೂರು ತುಮುರಿ ಸೇತುವೆಯ ವಿಳಂಬಕ್ಕೆ ಪ್ರತಿಕ್ರಿಯಿಸಿದ ಸಂಸದ ಬಿ.ವೈ.ರಾಘವೇಂದ್ರ ಕೆಲವೊಂದು ತಾಂತ್ರಿಕ ತೊಂದರೆಗಳಿಂದ ಎರಡು ತಿಂಗಳು ವಿಳಂಬವಾಗುವುದು ನಿಜ. ಆದರೆ, ಪ್ರಕೃತಿಯ ಮತ್ತು ಹವಾಮಾನದ ವೈಪರಿತ್ಯದಿಂದಾಗಿ ಮಳೆ ಹೆಚ್ಚಿದ್ದರು, ಕಡಿಮೆ ಇದ್ದರೂ ಆ ಪ್ರದೇಶದಲ್ಲಿ ಕಾಮಗಾರಿ ಸ್ವಲ್ಪ ಕಠಿಣವಾಗಿರುವುದರಿಂದ ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಲು ಆಗಿಲ್ಲ. ಲೋಕಸಭಾ ಚುನಾವಣೆಯ ಒಳಗೆ ಈ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಸಚಿವ ನಿತಿನ್ಗಡ್ಕರಿ ರವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಂಸದ ಬಿ.ವೈ.ಆರ್. ಹೇಳಿದ್ದಾರೆ.