ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ವಿವಿಧ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಿ-ಜಿ.ವಿಜಯ್‌ಕುಮಾರ್ 

ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ಜತೆಯಲ್ಲಿ ವೈವಿಧ್ಯ ಆಸಕ್ತಿ ಬೆಳೆಸಿಕೊಳ್ಳುವಂತೆ ಪೋಷಕರು ಹಾಗೂ ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಹೇಳಿದರು.

ಶಿವಮೊಗ್ಗ ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬೆಂಕಿ ಇಲ್ಲದೇ ಒಲೆರಹಿತ ಅಡುಗೆ ತಿಂಡಿ ತಿನಿಸುಗಳನ್ನು ರುಚಿಶುಚಿಯಾಗಿ ತಯಾರಿಸುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳು ತುಂಬಾ ಆಸಕ್ತಿಯಿಂದ ಶ್ರಮ ವಹಿಸಿ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ಅತ್ಯಂತ ಶ್ಲಾಘನೀಯ. ಒಲೆರಹಿತವಾಗಿ ರುಚಿಯಾಗಿ ಅಡುಗೆ ತಯಾರಿಸುವುದು ಪರಿಶ್ರಮದ ಕೆಲಸ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಪ್ರೊ. ಮಮತಾ ಪಿ.ಆರ್. ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಆಸಕ್ತಿ ಹಾಗೂ ಪ್ರತಿಭೆಯನ್ನು ಪ್ರದರ್ಶಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ. ಕಾಲೇಜು ಅವಧಿಯ ವಿಶೇಷ ಕ್ಷಣಗಳನ್ನು ನಮಗೆ ಒದಗಿಸುತ್ತವೆ ಎಂದು ಹೇಳಿದರು.

ಎನ್‌ಎಸ್‌ಎಸ್ ಘಟಕ 1ರ ಕಾರ್ಯಕ್ರಮಾಧಿಕಾರಿ ಪ್ರೊ. ಕೆ.ಎಂ.ನಾಗರಾಜು ಮಾತನಾಡಿದರು. ಇದೇ ಸಂದರ್ಭದಲ್ಲಿ ಒಲೆರಹಿತ ಅಡುಗೆ ಸಿದ್ಧಪಡಿಸಿದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ವಿದ್ಯಾರ್ಥಿಗಳು ನಾನಾ ರೀತಿಯ ಹಣ್ಣು, ತರಕಾರಿ, ತಿಂಡಿ, ತಿನಿಸು ಬಳಸಿ ಫ್ರೂಟ್ ಸಲಾಡ್ ಸೇರಿದಂತೆ ವೈವಿಧ್ಯ ಬಗೆಯ ತಿನಿಸುಗಳನ್ನು ತಯಾರಿಸಿದ್ದರು. 14 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಟಿ.ಡಿ.ನಾಗರಾಜ್, ಪುನೀತ್, ಸ್ಮಿತಾ ಹಾಗೂ ರೂಹಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.

ಸ್ಪರ್ಧೆಯಲ್ಲಿ 3ನೇ ವರ್ಷದ ಬಿಕಾಂ ವಿದ್ಯಾರ್ಥಿ ವರ್ಷಿನಿ ಎಂ., ರುಚಿತಾ ಸಿ.ಆರ್. ಪ್ರಥಮ ಸ್ಥಾನ, ಶ್ರೇಯಸ್ ಡಿ.ವಿ., ಸಹನ ವಿ ದ್ವಿತೀಯ ಸ್ಥಾನ ಹಾಗೂ ಮಧು ಎ. ಪ್ರಿಯಾ ಎಸ್. ತೃತೀಯ ಸ್ಥಾನ ಪಡೆದರು.

Related posts

ನಾಟಕಕ್ಕೆ ತನ್ನದೇ ಆದ ಒಂದು ವಿಶೇಷ ಗಮ್ಮತ್ತಿದೆ-ಚಲನಚಿತ್ರ ನಟ ದೊಡ್ಡಣ್ಣ

ಸಮುದಾಯದ ಅಭಿವೃದ್ಧಿ ಸಂಸ್ಥೆಗಳ ಪಾತ್ರ ಮಹತ್ತರ-ಎನ್.ಗೋಪಿನಾಥ್

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ವೈದ್ಯರ ಮಾರ್ಗದರ್ಶನ ಅಗತ್ಯ-ಡಾ. ದಿನೇಶ್