ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ರಾಜ್ಯದಲ್ಲಿ ವಿದ್ಯುತ್ ಕೊರತೆ, ಲೋಡ್ ಶೆಡ್ಡಿಂಗ್: ಖಾಸಗಿಯವರು ಬೇರೆ ರಾಜ್ಯಕ್ಕೆ ವಿದ್ಯುತ್ ಮಾರುವುದಕ್ಕೆ ಬ್ರೇಕ್

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟು ಬಹುತೇಕ ಜಲಾಶಯಗಳು ಭರ್ತಿಯಾಗಿಲ್ಲ. ಇದರಿಂದಾಗಿ ಬರದ ಛಾಯೆ ಆವರಿಸಿದ್ದು, ಈಗಾಗಲೇ 200ಕ್ಕೂ ಹೆಚ್ಚು ತಾಲ್ಲೂಕುಗಳನ್ನ ಬರಪೀಡಿತ  ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಹಾಗೆಯೇ ವರುಣ ಸರಿಯಾಗಿ ಕೃಪೆ ತೋರದ ಹಿನ್ನೆಲೆ ವಿದ್ಯುತ್ ಉತ್ಪಾದನೆ ಮೇಲೂ ನೇರ ಪರಿಣಾಮ ಬೀರಿದ್ದು, ರಾಜ್ಯ  ತೀವ್ರ ವಿದ್ಯುತ್ ಕೊರತೆ ಎದುರಿಸುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಇದೀಗ ವಿದ್ಯುಚ್ಛಕ್ತಿ ಕಾಯ್ದೆ ಸೆಕ್ಷನ್ 11ರ ಅಸ್ತ್ರ ಬಳಸಿದೆ.

ಅದರಂತೆ ರಾಜ್ಯದ ಖಾಸಗಿ ವಿದ್ಯುತ್ ಉತ್ಪಾದಕರು ಬೇರೆ ರಾಜ್ಯಗಳಿಗೆ ವಿದ್ಯುತ್ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಸೆಕ್ಷನ್ 11 ಅಸ್ತ್ರದ ಮೂಲಕ ರಾಜ್ಯ ಸರ್ಕಾರದ ವಿದ್ಯುತ್ ಪ್ಲಾನ್ ರೂಪಿಸಿದೆ.

ರಾಜ್ಯದಲ್ಲಿನ ವಿದ್ಯುತ್ ಕೊರತೆಯಿಂದ ಲೋಡ್ ಶೆಡ್ಡಿಂಗ್ ತೀವ್ರವಾಗಿದೆ. ವಿದ್ಯುತ್ ಉತ್ಪಾದನೆ ತೀವ್ರ ಕುಸಿತ ಕಂಡಿದ್ದು, ಈಗಾಗಾಲೇ ಸಿಎಂ ಸಿದ್ದರಾಮಯ್ಯ ರಾಜ್ಯದ ವಿದ್ಯುತ್ ಕ್ಷಾಮ ನಿಭಾಯಿಸಲು ಇಂಧನ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಈ ವೇಳೆ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸ್ತೃತವಾದ ಚರ್ಚೆ ನಡೆಸಲಾಗಿತ್ತು. ಇದೀಗ ರಾಜ್ಯ ಸರ್ಕಾರ ತೀವ್ರ ವಿದ್ಯುತ್ ಕೊರತೆಯ ಹಿನ್ನೆಲೆ ವಿದ್ಯುಚ್ಛಕ್ತಿ ಕಾಯ್ದೆ ಸೆಕ್ಷನ್ 11ನ್ನು ಜಾರಿಗೊಳಿಸಿದೆ. ಆ ಮೂಲಕ ರಾಜ್ಯದ ಖಾಸಗಿ ಸೇರಿದಂತೆ ಎಲ್ಲಾ ವಿದ್ಯುತ್ ಉತ್ಪಾದಕರು ವಿದ್ಯುತ್ ಅನ್ನು ಹೊರ ರಾಜ್ಯಗಳಿಗೆ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ರಾಜ್ಯದ ಎಲ್ಲಾ ವಿದ್ಯುತ್ ಉತ್ಪಾದಕರು ವಿದ್ಯುತ್ ಅನ್ನು ರಾಜ್ಯದ ವಿದ್ಯುತ್ ಸರಬರಾಜುದಾರರಿಗೇ ಮಾರಾಟ ಮಾಡಬೇಕು.

ಪವನ, ಸೌರ ಇತ್ಯಾದಿ ನವೀಕೃತ, ಕೋಜನ್, ಕಿರು ಜಲ, ಶಾಖೋತ್ಪನ್ನ ಸೇರಿ ರಾಜ್ಯದೊಳಗಿನ ಖಾಸಗಿ ಉತ್ಪಾದಕರಿಂದ 1,500 ಮೆಗಾ ವ್ಯಾಟ್ ವಿದ್ಯುತ್ ಲಭಿಸುವ ಬಗ್ಗೆ ಅಂದಾಜಿಸಿದೆ. ರಾಜ್ಯದೊಳಗೆ ಪರವಾನಗಿ ಹೊಂದಿದ ವಿತರಕರೊಂದಿಗೆ ಖಾಸಗಿ ಉತ್ಪಾದಕರು ಅರ್ಹವಾದ ವಿದ್ಯುತ್ ಖರೀದಿ ಒಪ್ಪಂದ (ಪಿಪಿಎ) ಮಾಡಿಕೊಂಡಿದ್ದರೆ ಸೆಕ್ಷನ್ 11ರ ನಿರ್ಬಂಧ ಅನ್ವಯಿಸುವುದಿಲ್ಲ. ಪೂರ್ವ ವಿದ್ಯುತ್ ಖರೀದಿ ಒಪ್ಪಂದ ಮಾಡಿಕೊಳ್ಳದ ಖಾಸಗಿ ವಿದ್ಯುತ್ ಕೇಂದ್ರಗಳು ಇನ್ಮುಂದೆ ಮುಕ್ತ ಜಾಲಕ್ಕೆ ಮಾರಾಟ ಮಾಡಲು ಅವಕಾಶವಿಲ್ಲ. ಉಡುಪಿ ವಿದ್ಯುತ್ ಸ್ಥಾವರವು ಪ್ರತಿದಿನ ಉತ್ಪಾದಿತ ವಿದ್ಯುತ್ನ್ನು ಪಿಪಿಎ ಪ್ರಕಾರ ರಾಜ್ಯಕ್ಕೆ ನೀಡುತ್ತಿದೆ. ಆದರೆ ಸ್ಥಾಪಿತ ಸಾಮರ್ಥ್ಯ (ಎರಡು ಘಟಕಗಳು ತಲಾ 600 ಮೆ.ವಾ.)ದಂತೆ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಿ ರಾಜ್ಯಕ್ಕೆ ನೀಡಲು ಸೂಚಿಸಿದೆ.

ಖಾಸಗಿ ಉತ್ಪಾದಕರು ನೀಡುವ ಪ್ರತಿ ಯೂನಿಟ್ಗೆ ಸಾಗಣೆ ಮತ್ತು ಇತರ ವೆಚ್ಚ ಹೊರತುಪಡಿಸಿ ಪ್ರತಿ ಯೂನಿಟ್ಗೆ 4.86 ರೂ. ದರ ನಿಗದಿ ಮಾಡಿಲು ಆದೇಶದಲ್ಲಿ ಸರ್ಕಾರ ಪ್ರಸ್ತಾಪಿಸಿದೆ. ಕೇಂದ್ರೀಯ ವಿದ್ಯುತ್ ವಿನಿಮಯದ ದರ, ಕಳೆದ ಆರು ಅವಧಿಯಲ್ಲಿನ ಅಲ್ಪಾವಧಿ ಖರೀದಿ ಒಪ್ಪಂದದ ದರಗಳನ್ನು ಪರಿಗಣಿಸಿ ಸರ್ಕಾರ ಈ ದರ ನಿಗದಿ ಮಾಡಿದೆ. ಆದರೆ, ಎಸ್ಕಾಂಗಳು ಅಧಿಕೃತವಾಗಿ ಸಲ್ಲಿಸಲಿರುವ ಅಫಿಡವಿಟ್ಗೆ ಕೆಇಆರ್ಸಿ ನೀಡಲಿರುವ ಆದೇಶದ ಪ್ರಕಾರ ಪ್ರತಿ ಯೂನಿಟ್ ದರ ಅಂತಿಮಗೊಳ್ಳಲಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ. ಈ ಬಿಲ್ ಸರ್ಕಾರಕ್ಕೆ ಸಲ್ಲಿಕೆಯಾದ ಐದು ದಿನಗಳೊಳಗೆ ಪಾವತಿಸಿದರೆ ಶೇ.2ರಷ್ಟು ಇಲ್ಲವೇ 30 ದಿನಗಳೊಳಗೆ ಪಾವತಿಸಿದರೆ ಶೇ.1ರಷ್ಟು ವಿನಾಯಿತಿ ಲಭಿಸಲಿದೆ. ಇನ್ನು ಖಾಸಗಿ ಉತ್ಪಾದಕರಿಂದ ಪಡೆದ ಎಸ್ಕಾಂಗಳು ಬಿಲ್ ಪಾವತಿಸಲು ವಿಳಂಬ ಮಾಡಿದರೆ ಬ್ಯಾಂಕ್ ನಿಯಮಾವಳಿ ಪ್ರಕಾರ ದಂಡವನ್ನೂ ತೆರಬೇಕಾಗುತ್ತದೆ. ಬಿಲ್ ಪಾವತಿ ವಿಳಂಬದ ಅವಧಿ ಆಧರಿಸಿ ದಂಡದ ಮೊತ್ತ ನಿಗದಿಯಾಗಲಿದೆ.

ಸದ್ಯದ ಬೇಡಿಕೆ, ಕೊರತೆ ಎಷ್ಟು?: ಸರ್ಕಾರ ಕೊಟ್ಟಿರುವ ಅಂಕಿ ಅಂಶದ ಪ್ರಕಾರ ಮಳೆ ಕೊರತೆಯಿಂದ ತೀವ್ರವಾಗಿ ವಿದ್ಯುತ್ ಉತ್ಪಾದನೆ ಕುಸಿದಿದೆ. ಇತ್ತ ವಿದ್ಯುತ್ ಗರಿಷ್ಠ ಬೇಡಿಕೆ 16,950 ಮೆ.ವಾ., ಬಳಕೆ 294 ದಶಲಕ್ಷ ಯೂನಿಟ್ ದಾಖಲಾಗಿದೆ. ಪ್ರಸ್ತುತ ಉತ್ಪಾದನೆ ಮತ್ತು ಪೂರೈಕೆ ನಡುವೆ 3,500 ಮೆ.ವಾ. ಕೊರತೆಯಿದೆ. ಅಂದಾಜಿನ ಪ್ರಕಾರ ನವೆಂಬರ್ನಿಂದ 2024ರ ಮೇ ತಿಂಗಳವರೆಗೆ ಗರಿಷ್ಠ (ಪೀಕ್ ಅವರ್) ಬೇಡಿಕೆ ಪ್ರಮಾಣ 18,214 ಮೆ.ವಾ. ಬಳಕೆಯು 357 ದಶಲಕ್ಷ ಯೂನಿಟ್ಗೆ ತಲುಪುವ ಸಾಧ್ಯತೆಗಳಿವೆ ಎಂದು ಇಂಧನ ಇಲಾಖೆ ತಿಳಿಸಿದೆ.

ಪರಸ್ಪರ ಖರೀದಿಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ಒಪ್ಪಿಗೆ ನೀಡಿದೆ. ಅದರಂತೆ ವಾಸ್ತವಿಕ ಬಳಕೆ ಆಧಾರ (ಆರ್ಟಿಸಿ)ದಡಿ 1,000 ಮೆ.ವಾ., ವಿದ್ಯುತ್ ಮಾರುಕಟ್ಟೆಯ ಡೀಪ್ ಇ-ಪೋರ್ಟಲ್ ಮೂಲಕ 250 ಮೆ.ವಾ. ಖರೀದಿಗೆ ಯೋಜಿಸಿದ್ದು, ಪ್ರಸಕ್ತ ವರ್ಷದ ಅಕ್ಟೋಬರ್ನಿಂದ 2024ರ ಮೇ ವರೆಗೆ ಈ ವ್ಯವಸ್ಥೆ ಅಳವಡಿಸಿಕೊಳ್ಳಲು ಸರ್ಕಾರ ಯೋಚಿಸಿದೆ. ರಾಜ್ಯದ ವಿದ್ಯುತ್ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿ ಸಹಾಯಹಸ್ತ ಚಾಚಿದೆ. ಮಾಸಿಕ ಎರಡು ಲಕ್ಷ ಟನ್ ಹೆಚ್ಚುವರಿ ಕಲ್ಲಿದ್ದಲು ಪೂರೈಕೆಗೆ ಸಮ್ಮತಿಸಿದೆ. ಇದರ ಹೊರತಾಗಿ ಪ್ರಸಕ್ತ ವರ್ಷದ ಅಕ್ಟೋಬರ್ನಿಂದ 2024ರ ಮೇ ವರೆಗೆ ಹೆಚ್ಚುವರಿಯಾಗಿ 600 ಮೆ.ವಾ. ವಿದ್ಯುತ್ ಹಂಚಿಕೆಯ ಮನವಿಗೂ ಸಕಾರಾತ್ಮಕವಾಗಿ ಸ್ಪಂದಿಸಿದೆ.

 

Related posts

ನೆಹರೂ ಅವರ ಗುರುತು ಅವರ ಕೆಲಸವೇ ಹೊರತು ಅವರ ಹೆಸರಲ್ಲ- ಕೇಂದ್ರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟಾಂಗ್

ಪದವಿ ವಿದ್ಯಾರ್ಥಿಗಳಿಗೆ `ಇಂಟರ್ನ್ ಶಿಪ್’ ಕಡ್ಡಾಯ.

ಎಪಿಎಂಸಿ ಪರವಾನಗಿದಾರರಿಗೆ ನೀಡಿರುವ ನೋಟಿಸ್ ಹಿಂಪಡೆಯಲು ಆಗ್ರಹ