ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

‘NPS’ ಬೇಡ, ‘OPS’ ಜಾರಿ ಮಾಡಿ; 7ನೇ ವೇತನ ಆಯೋಗಕ್ಕೆ ನೌಕರರ ಸಂಘದಿಂದ ವರದಿ

ಬೆಂಗಳೂರು: ರಾಜ್ಯದಲ್ಲಿ ಹೊಸ ಪಿಂಚಣಿ ಯೋಜನೆಯನ್ನು ರದ್ಧುಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸಬೇಕು ಎಂದು; 7ನೇ ವೇತನ ಆಯೋಗಕ್ಕೆ ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ಮನವಿ ಮಾಡಿದೆ.

ಸರ್ಕಾರಿ ನೌಕರರಿಗೆ ಈಗಿರುವ ಹೊಸ ಪಿಂಚಣಿ ಯೋಜನೆಯನ್ನು ರದ್ದು ಮಾಡಿ, ಹಳೆಯ ಪಿಂಚಣಿ ಯೋಜನೆಲ್ಲಿ ಮುಂದುವರಿಸಬೇಕು.   ಈ ನಿಟ್ಟಿನಲ್ಲಿ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗಕ್ಕೆ ಸಂಘ ಸಂಪೂರ್ಣ ವರದಿಯೊಂದಿಗೆ ಮನವಿ ಮಾಡಿದೆ.

ಸಂಪೂರ್ಣ ಕಾರಣಗಳೊಂದಿಗೆ ಹಳೆಯ ಪಿಂಚಣಿ ಯೋಜನೆಯನ್ನು ಯಾಕೆ ಮುಂದುವರಿಸವೇಕು ಎನ್ನುವುದಕ್ಕೆ ಕಾರಣವನ್ನು ನೀಡಿದ್ದಾರೆ. 7ನೇ ವೇತನ ಆಯೋಗದ ವರದಿಯಲ್ಲಿ ಷೇರು ಮಾರುಕಟ್ಟೆ ಆಧಾರಿತ ರಾಷ್ಟ್ರೀಯ ಪಿಂಚಣಿ ಯೋಜನೆ ಯೋಜನೆಯನ್ನು ರದ್ದುಪಡಿಸಿ, ಈ ಹಿಂದೆ ಇದ್ದಂತೆ ನಿಶ್ಚಿತ ಪೆನ್ಷನ್ ಯೋಜನೆಯನ್ನು (Defined Pension Scheme-DPS) ಜಾರಿಗೆ ತರುವಂತೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಲಾಗಿದೆ. ಸರ್ಕಾರವು ತನ್ನ ಖಾಯಂ ನೌಕರರಲ್ಲಿ ಪೆನ್ಷನ್ ಸಹಿತ ನೌಕರರು ನಿಶ್ಚಿತ ಪೆನ್ಷನ್ ಯೋಜನೆ ಅಡಿಯಲ್ಲಿ ಹಾಗೂ ನೌಕರರ ವಂತಿಗೆಯಿಂದ ರೂಪಿಸಿದ NPS ಅಡಿಯಲ್ಲಿ ಬರುವ ನೌಕರರು ಎಂಬ ಎರಡು ವರ್ಗಗಳನ್ನು 1/4/2006ರಿಂದ ಈಚೆಗೆ ನೇಮಕವಾದ ನೌಕರರಲ್ಲಿ ಸೃಷ್ಟಿಸಿದೆ ಎಂದು ವರದಿ ಹೇಳಿದೆ.

ನೌಕರರ ಇಳಿವಯಸ್ಸಿನ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗಾಗಿ ರೂಪಿಸಿದ ನಿಶ್ಚಿತ ಪಿಂಚಣಿಯನ್ನು ಕೇಂದ್ರ ಸರ್ಕಾರವು 2004ರ ಜನವರಿ 1 ರಿಂದ ಹಾಗೂ ನಮ್ಮ ರಾಜ್ಯ ಸರ್ಕಾರವು 2006ರ ಏಪ್ರಿಲ್ 1 ರ ನಂತರ ಸರ್ಕಾರಿ ಸೇವೆಗೆ ನೇಮಕಗೊಳ್ಳುವ ನೌಕರರಿಗೆ ನಿಶ್ಚಿತ ಪಿಂಚಣಿ (Defined Pension Scheme) ಪದ್ಧತಿಯನ್ನು ರದ್ದು ಮಾಡಿತು. ನೂತನ ಪಿಂಚಣಿ ಯೋಜನೆಯಡಿ ನೌಕರರಿಗೆ ಪಿಂಚಣಿ ನೀಡುವ ಉದ್ದೇಶಕ್ಕಾಗಿ ನೌಕರನ ವೇತನದಿಂದ ಶೇ 10ರಷ್ಟನ್ನು ಕಡಿತ ಮಾಡಲಾಗುತ್ತಿದೆ., ಸರ್ಕಾರವು ಅದಕ್ಕೆ ಸಮಾನವಾದ ಮೊತ್ತವನ್ನು ವಂತಿಗೆ ರೂಪದಲ್ಲಿ ನೀಡುತ್ತದೆ. ಹಾಗೆ ಶೇಖರಣೆಗೊಳ್ಳುವ ಮೊತ್ತವನ್ನು ವಿವಿಧ ಖಾಸಗಿ ಹಣಕಾಸಿನ ಸಂಸ್ಥೆಗಳ ಮೂಲಕ ಷೇರು ಪೇಟೆಯಲ್ಲಿ ಹೂಡಲಾಗುತ್ತಿದೆ. ಅಂದಾಜು 30-35 ವರ್ಷಗಳ ಸೇವೆಯ ನಂತರ ಅದರಿಂದ ಬಂದ ಲಾಭದಲ್ಲಿ ಈ ಹಣವನ್ನು ಉಪಯೋಗಿಸಿದ ಕಂಪನಿಗಳು ನೌಕರರಿಗೆ ಪಿಂಚಣಿಯನ್ನು ನೀಡುತ್ತವೆ. ಇದಕ್ಕಾಗಿ ಯಾವುದೇ ನಿರ್ದಿಷ್ಟ ಕಾನೂನುಗಳನ್ನು ರಚಿಸದೆ, ನೌಕರರ ಹಾಗೂ ಸರ್ಕಾರವು ತೊಡಗಿಸಿದ ಹಣಕ್ಕೆ ಯಾವುದೇ ಭದ್ರತೆ ನೀಡದೆ, ಈ ಹೊಸ ಪಿಂಚಣಿ ಯೋಜನೆಯನ್ನು ಘೋಷಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ಈ ಎನ್ಪಿಎಸ್ ಯೋಜನೆಯಲ್ಲಿ ನೌಕರರು ತೊಡಗಿಸುವ ಶೇಕಡ 10 ರಷ್ಟು ನಿಶ್ಚಿತವಾಗಿದೆ. ಆದರೆ ನಿವೃತ್ತಿಯ ನಂತರ ನೌಕರನಿಗೆ ದೊರಕಬೇಕಾದ ಪೆನ್ಷನ್ ಮೊತ್ತ ನಿಶ್ಚಿತವಾಗಿರುವುದಿಲ್ಲ ಹಾಗೂ ಸರ್ಕಾರದ ಶೇ.10 ರಷ್ಟು ಹಣ ಸದರಿ ಕಾಯಿದೆಯನ್ವಯ ನೌಕರರ ವಂತಿಗೆ ಹಣಕ್ಕೆ ಯಾವುದೇ ಕನಿಷ್ಠ ಭದ್ರತೆಯನ್ನು ನೀಡಿರುವುದಿಲ್ಲ. ಇದು ನೌಕರರ ಸಂಧ್ಯಾಕಾಲದ ಜೀವನವನ್ನು ಆಭದ್ರತೆಗೆ ತಳ್ಳಲು ಕಾರಣವಾಗುತ್ತದೆ. ಈಗಾಗಲೇ ಫ್ರಾನ್ಸ್, ಸ್ಪೇನ್, ಗ್ರೀಸ್, ಡೆನ್ಮಾರ್ಕ್, ಅಮೆರಿಕ ಮತ್ತು ಬ್ರಿಟನ್ನಲ್ಲಿ ಇದೇ ರೀತಿ ಷೇರು ಮಾರುಕಟ್ಟೆಯಲ್ಲಿ ನೌಕರರ ಹಾಗೂ ಜನ ಸಾಮಾನ್ಯರ ಹಣವನ್ನು ಹೂಡಿದ ಕಂಪನಿಗಳು 2008ರಲ್ಲಿ ಜಗತ್ತಿನ ಆರ್ಥಿಕ ಕುಸಿತದಿಂದಾಗಿ ನಷ್ಟ ಅನುಭವಿಸಿ ದಿವಾಳಿಯೆದ್ದು ಹೋಗಿವೆ. ಇದರಿಂದಾಗಿ ಅಲ್ಲಿನ ನೌಕರರು ಪಿಂಚಣಿ ಹಣ, ವಿಮೆ ಹಣ ಹಾಗೂ ಉಳಿತಾಯದ ಎಲ್ಲ ಹಣವನ್ನು ಸಂಪೂರ್ಣವಾಗಿ ಕಳೆದುಕೊಂಡು ಬೀದಿಗೆ ಬಂದಿದ್ದರು.

ಇದೆಲ್ಲವನ್ನು ತಿಳಿದಿದ್ದರೂ ಸಹ ನಮ್ಮ ಸರ್ಕಾರಗಳು ತಮ್ಮ ನೌಕರರನ್ನು ಅನಿಶ್ಚಿತ ಸ್ಥಿತಿಗೆ ನೂಕುತ್ತಿರುವುದು ಒಂದು ವಿಪರ್ಯಾಸದ ಸಂಗತಿಯಾಗಿದೆ. ಹಿಂದೆ ಈ ವಿಷಯವಾಗಿ ಯಶವಂತ ಸಿನ್ಹಾ ನೇತೃತ್ವದ Parliamentary Standing Committee on Finance 2011 ರಲ್ಲಿ ಕೆಲವು ಸಲಹೆಗಳನ್ನು ನೀಡಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

Related posts

ಕಿತ್ತೂರು ಚನ್ನಮ್ಮ ತನ್ನ ಸಣ್ಣ ಸೈನ್ಯದಿಂದ ಬ್ರಿಟಿಷರ ಬೃಹತ್ ಸೈನ್ಯಕ್ಕೆ ಸೆಡ್ಡು ಹೊಡೆದ ಧೀಮಂತ ರಾಣಿ-ಮುಖ್ಯಮಂತ್ರಿ ಸಿದ್ದರಾಮಯ್ಯ

ನಾಡಿಗೆ ನಾರಿಯ ನಡಿಗೆ ವಿಶೇಷ ಕಾರ್ಯಕ್ರಮ ನವೆಂಬರ್ 4ಕ್ಕೆ