ಶಿವಮೊಗ್ಗ: ಮಕ್ಕಳಲ್ಲಿ ಬಾಲ್ಯದಿಂದಲೇ ಸೇವಾ ಮನೋಭಾವನೆ ಬೆಳೆಸುವುದು ಅತ್ಯಂತ ಅವಶ್ಯಕತೆ ಇದ್ದು, ಮುಂದಿನ ಪೀಳಿಗೆಗೆ ಮೌಲ್ಯಯುತ ಅಂಶಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ರೋಟರಿ ಜಿಲ್ಲೆ 3182ರ ಗವರ್ನರ್ ಬಿ.ಸಿ.ಗೀತಾ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದ ಎಲೈಟ್ ಕ್ಲಬ್ ಹಾಲ್ನಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ವತಿಯಿಂದ ಸಂಸ್ಥೆಯ ಅಧಿಕೃತ ಭೇಟಿ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲಾ ಪ್ರಾಜೆಕ್ಟ್ಗಳಾದ ಮಣ್ಣಿನ ಫಲವತ್ತತೆ, ಮೌಲ್ಯಾಧರಿತ ಶಿಕ್ಷಣ, ಸುರಕ್ಷಿತ ವಾಹನ ಚಾಲನೆ ಹಾಗೂ ಕಸ ನಿರ್ವಹಣೆ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಸಂಸ್ಥೆ ಅಧ್ಯಕ್ಷ ಸಿ.ರಾಜು ಮಾತನಾಡಿ, ಮಕ್ಕಳ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಆರೋಗ್ಯ ವಿಮೆಯನ್ನು ಪ್ರತಿಯೊಂದು ಮಕ್ಕಳಿಗೆ ಮಾಡಿಸಬೇಕು. ಸರ್ಕಾರಿ ಶಾಲೆಯ ಕೆಲವು ಮಕ್ಕಳಿಗೆ ಆರೋಗ್ಯ ವಿಮೆ ಮಾಡಿಸುವ ಆಶಯವಿದೆ ಎಂದು ವಿವರಿಸಿದರು.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ 5000 ರೂ. ಮೌಲ್ಯದ ಒಂದು ಸೆಟ್ನಂತೆ 1 ಲಕ್ಷ ರೂ. ಮೌಲ್ಯದ ಪುಸ್ತಕಗಳನ್ನು ಉಚಿತವಾಗಿ ನೀಡಲಾಯಿತು. ಮುಂದಿನ ದಿನಗಳಲ್ಲಿ ಬುಕ್ ಬ್ಯಾಂಕ್ ತೆರೆದು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವುದಾಗಿ ರೋಟರಿ ಶ್ರೀಕಾಂತ್ ತಿಳಿಸಿದರು. ಎಚ್.ಎಲ್.ರವಿ, ಆನಂದಮೂರ್ತಿ, ಮಂಜುಳಾ ರಾಜು ಅವರು ಕೊಡುಗೆ ನೀಡಿರುತ್ತಾರೆ.
ರೋಟರಿ ಸಂಸ್ಥೆಗೆ ನಿಧಿಗೆ ಮಲೆನಾಡು ಕ್ಲಬ್ ವತಿಯಿಂದ ಎಲ್ಲ ಸದಸ್ಯರು 26.5 ಡಾಲರ್ ಅನ್ನು ಗವರ್ನರ್ ಸಮ್ಮುಖದಲ್ಲಿ ಚೆಕ್ ಮೂಲಕ ನೀಡಲಾಯಿತು. ಕ್ಲಬ್ಗೆ ಐದು ಹೊಸ ಸದಸ್ಯರು ಸೇರ್ಪಡೆಯಾದರು.
ಮಂಜುಳಾ ರಾಜು, ಚಂದ್ರಶೇಖರ್, ಗೋಪಾಲ್, ಆನಂದಮೂರ್ತಿ, ಸಹಾಯಕ ಗವರ್ನರ್ ರಾಜೇಂದ್ರ ಪ್ರಸಾದ್, ಮೋಹನ್, ಕಾರ್ಯದರ್ಶಿ ಪ್ರಕಾಶ್ ಮೂರ್ತಿ, ಮಹಾದೇವಿ, ಶ್ರೀಕಾಂತ್, ರೋಟರಿ ಸದಸ್ಯರು ಉಪಸ್ಥಿತರಿದ್ದರು.