ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟು ಜಲಾಶಯಗಳು ಭರ್ತಿಯಾಗದೇ ಕುಡಿಯುವ ನೀರಿಗೂ ತಾತ್ಪರ ಪಡುವ ಪರಿಸ್ಥಿತಿ ಉಂಟಾಗಿದೆ. ಸರಿಯಾಗಿ ಮಳೆಯಾಗದ ಹಿನ್ನೆಲೆ ವಿದ್ಯುತ್ ಉತ್ಪಾದನೆ ಮೇಲೂ ಪರಿಣಾಮ ಬೀರಿದೆ. ಇದರಿಂದಾಗಿ ವಿದ್ಯುತ್ ತೀವ್ರ ಕೊರತೆ ಮುಂದುವರೆದಿದೆ.
ವಿದ್ಯುತ್ ಬೇಡಿಕೆ ಸರಾಸರಿ 15 ಸಾವಿರ ಮೆ.ವ್ಯಾಟ್ ತಲುಪಿದ್ದು, ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಮಾಡಲಾಗದೆ ನಿತ್ಯ 3 ಸಾವಿರದಿಂದ 4 ಸಾವಿರ ಮೆ.ವ್ಯಾಟ್ನಷ್ಟು ವಿದ್ಯುತ್ ಕಡಿಮೆ ಬಳಸುವ ಮೂಲಕ ಅನಧಿಕೃತ ಲೋಡ್ ಶೆಡ್ಡಿಂಗ್ ಗೆ ಇಂಧನ ಇಲಾಖೆ ಮೊರೆ ಹೋಗಿದೆ.
ಈ ಕುರಿತು ಕೆಪಿಟಿಸಿಎಲ್ ನಿಂದ ಅನಧಿಕೃತ ಕರ್ಟೈಲ್ ಮೈಂಟ್ ಆದೇಶ ಆಗಿದ್ದು, ಎಸ್ಕಾಂಗಳು ಗ್ರಿಡ್ ನಿಂದ ಇಷ್ಟಿಷ್ಟು ಸಮಯದಲ್ಲಿ ಇಂತಿಷ್ಟೇ ವಿದ್ಯುತ್ ಪಡೆಯಬೇಕು ಎಂದು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅನಿಯಮಿತ ವಿದ್ಯುತ್ ಕಡಿತ ಮುಂದುವರೆದಿದೆ.
ರಾಜ್ಯದಲ್ಲಿ ರಾಜ್ಯ ಸರ್ಕಾರದ ಎಲ್ಲಾ ವಿದ್ಯುತ್ ಉತ್ಪಾದನಾ ಮೂಲಗಳಿಗೆ 8,852 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯವಿದೆ. ಆದರೆ ಅಕ್ಟೋಬರ್ 11ರಂದು ಬುಧವಾರ 3,392 ಮೆ.ವ್ಯಾ. ಗರಿಷ್ಠ ವಿದ್ಯುತ್ ಮಾತ್ರ ಉತ್ಪಾದನೆಯಾಗಿದೆ. ಆದರೆ, ಗರಿಷ್ಠ ಬೇಡಿಕೆ 14,448 ಮೆ.ವ್ಯಾಟ್ ಸೃಷ್ಟಿಯಾಗಿತ್ತು. ಹೀಗಾಗಿ 5,072 ಮೆ.ವ್ಯಾಟ್ ವಿದ್ಯುತ್ ಸಿಜಿಎಸ್ (ಕೇಂದ್ರೀಯ ಉತ್ಪಾದನಾ ಕೇಂದ್ರ) ಗ್ರಿಡ್ ನಿಂದ ಹಾಗೂ 3,299 ಮೆ.ವ್ಯಾಟ್ನಷ್ಟು ಗರಿಷ್ಠ ವಿದ್ಯುತ್ ಎನ್ಸಿಇಪಿ ಮೂಲಗಳಿಂದ ಡ್ರಾ ಮಾಡಲಾಗಿದೆ. ಹೀಗಿದ್ದರೂ ರಾಜ್ಯದ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆಯಾಗದೆ ವಿದ್ಯುತ್ ಕಡಿತ ಮುಂದುವರೆದಿದೆ.
3-4 ಸಾವಿರ ಮೆ.ವ್ಯಾಟ್ ನಷ್ಟು ವಿದ್ಯುತ್ ಕೊರತೆ ಉಂಟಾಗುತ್ತಿರುವುದರಿಂದ ಕೃಷಿ ಪಂಪ್ ಸೆಟ್ಗಳಿಗೆ ನಿತ್ಯ 7 ಗಂಟೆ ಪೂರೈಕೆಯಾಗಬೇಕಿದ್ದ 3-ಫೇಸ್ ವಿದ್ಯುತ್ 2-3 ಗಂಟೆಯೂ ಪೂರೈಕೆಯಾಗುತ್ತಿಲ್ಲ. ಹೀಗಾಗಿ ರಾಜ್ಯಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಗುರುವಾರವೂ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆ ಮಾಡಲು ಆಗಿಲ್ಲ ಎಂದು ಇಂಧನ ಇಲಾಖೆ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ವಿದ್ಯುತ್ ಕೊರತೆಯಿಂದ ರಾಜಧಾನಿ ಬೆಂಗಳೂರಿನಲ್ಲೂ ಅನಿಯಮಿತ ವಿದ್ಯುತ್ ಕಡಿತ ಮುಂದುವರೆದಿದೆ. ನಗರದ ಪ್ರಮುಖ ಪ್ರದೇಶಗಳಲ್ಲೇ ಮಧ್ಯ ರಾತ್ರಿ ಹಾಗೂ ಮಧ್ಯಾಹ್ನ ಅನಿಯಮಿತ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಇದರ ಜತೆಗೆ ನಿರ್ವಹಣೆ ನೆಪದಲ್ಲಿ ಬೇಕಾಬಿಟ್ಟಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.