ಬೆಂಗಳೂರು : ಸಾಹಿತ್ಯ ಮತ್ತ ಕೃಷಿ ಮಧ್ಯ ಅವಿನಾಭಾವ ಸಂಬಂಧವಿದೆ. ಕೃಷಿ ವ್ಯವಸ್ಥಿತವಾದಾಗ ಸಾಹಿತ್ಯ ನೆಲೆ ಗಟ್ಟಿಯಾಗುವುದು. ಸಾಹಿತ್ಯ ಕ್ಷೇತ್ರ ಸುಭದ್ರವಾಗಿದ್ದರೆ ಕೃಷಿ ಕ್ಷೇತ್ರದ ಕುರಿತು ಕಾಳಜಿ ವಹಿಸಬಹುದು ಎಂದು ಅಭಿಪ್ರಯಪಟ್ಟ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಆಯೋಜಿಸಿದ ಶ್ರೀಮತಿ ಲಿಂಗಮ್ಮ ಮತ್ತು ಡಾ. ಚಿಕ್ಕಕೊಮಾರಿಗೌಡ ಹಾರೋಕೊಪ್ಪ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ʻಸೂಕ್ತ ವ್ಯಕ್ತಿಗೆ ಗುರುತಿಸಿ ಗೌರವಿಸುವುದು ಎಂದರೆ ದೇವರಿಗೆ ನಮಸ್ಕಾರದಷ್ಟು ಪವಿತ್ರವಾದ ಕೆಲಸ ಮಾಡಿದಂತೆ. ಕನ್ನಡ ಸಾಹಿತ್ಯ ಪರಿಷತ್ತು ಈ ಕೆಲಸವನ್ನು ಚಾಚು ತಪ್ಪದೆ ಮಾಡುತ್ತಿದೆ. ಪರಿಷತ್ತು ಕೊಡಮಾಡುವ ಪ್ರಶಸ್ತಿಗಳಿಗಾಗಿ ಸರದಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ. ಅರ್ಜಿಯನ್ನು ತಂದು ಸಾಧನೆಯ ಕುರಿತು ಹೇಳುವ ಅವಶ್ಯಕತೆ ಇಲ್ಲ. ಅರ್ಹರನ್ನು ಹುಡುಕಿ ಅಂಥವರನ್ನು ಗೌರವಿಸುವ ಕೆಲಸವನ್ನು ಪರಿಷತ್ತು ಪ್ರಾಮಾಣಿಕವಾಗಿ ಮಾಡುತ್ತಿದೆ. ಅದರ ಪರಿಣಾಮವೇ ಇಂದು ಪ್ರಶಸ್ತಿ ಪುರಸ್ಕೃತರಾದ ಶ್ರೀ ಕೆ.ಎಸ್.ಸೋಮಶೇಖರ್ ಅವರು. ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಯನ್ನು ಮಾಡಿ , ʻಜೀವಾಮೃತʼ ಬಳಸಿ ದ್ವಿತಳಿ ರೇಷ್ಮೆ ಗೂಡು ಉತ್ಪಾದನೆಯಲ್ಲಿ ಸಾಧನೆ, ಮಿಶ್ರ ಬೇಸಾಯ, ತೆಂಗಿನ ಮರಗಳ ಜೊತೆಯಲ್ಲಿ ಹಣ್ಣಿನ ಬೆಳೆಗಳನ್ನು ಬೆಳೆದು ಯಶಸ್ಸು ಕಂಡವರು. ದೇಶದ ತುತ್ತತುದಿಯ ಕಾಶ್ಮೀರದ ‘ಸೇಬು’ವನ್ನು ಕನ್ನಡ ನಾಡಿನ ಕೆ.ಆರ್. ಪೇಟೆಯಲ್ಲಿ ಬೆಳೆದು ಕ್ರಿಯಾಶೀಲತೆಯನ್ನು ಬೆಳಗಿ ನಮ್ಮ ನಾಡಿಗೆ ಮಾದರಿಯಾಗಿದ್ದಾರೆ. ಇಂಥವರಿಗೆ ಗುರುತಿಸುವುದರಿಂದ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಪ್ರಶಸ್ತಿಗಳಿಗೆ ಅಪಾರವಾದ ಗೌರವವಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಪ್ರಶಸ್ತಿ ಪ್ರದಾನಮಾಡಿದ ಮಾಜಿ ಸಂಸದರು ಹಾಗೂ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ತಿನ ಕಾರ್ಯಾಧ್ಯಕ್ಷರಾದ ಶ್ರೀ ಸಿ. ನಾರಾಯಣ ಸ್ವಾಮಿ ಅವರು ಮಾತನಾಡಿ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಯನ್ನು ಮಾಡಿ ಮಾದರಿಯಾದವರಿಗೆ ಸಾಹಿತ್ಯ ಪರಿಷತ್ತು ಗುರುತಿಸದೆ. ಇದೂ ಸೂಕ್ತ ಕಾರ್ಯ, ಕಾರಣ ಭೂಮಿ ತಾಯಿಯ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಕೃಷಿಯಲ್ಲಿ ತೊಡಗಿಕೊಂಡಾಗ ಮಾತ್ರ ನಮ್ಮ ಉದ್ಧಾರವಾಗುವುದು ಹೆಚ್ಚಿನ ಬೆಳೆ, ಅಧಿಕ ಆದಾಯದ ಆಸೆಗೆ ವಿಪರೀತ ರಸಾಯನಿಕ ಬೆಳೆಸುವ ಮೂಲಕ ನಾವು ತಿನ್ನವ ಎಲ್ಲಾ ಆಹಾರವನ್ನು ವಿಷಮಯ ಮಾಡಲಾಗುತ್ತಿದ್ದೇವೆ. ಅದರ ಜೊತೆಗೆ ನಮ್ಮ ಭೂಮಿಯೂ ಸಹ ವಿಷಕಾರಿಯಾಗುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದರು.
೨೦೨೨ನೆಯ ಸಾಲಿನ ಶ್ರೀಮತಿ ಲಿಂಗಮ್ಮ ಮತ್ತು ಡಾ. ಚಿಕ್ಕಕೊಮಾರಿಗೌಡ ಹಾರೋಕೊಪ್ಪ ದತ್ತಿ ಪ್ರಶಸ್ತಿಯನ್ನು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ಪ್ರಗತಿಪರ ರೈತರಾದ ಶ್ರೀ ಕೆ.ಎಸ್. ಸೋಮಶೇಖರ್ ಅವರಿಗೆ ಪ್ರದಾನ ಮಾಡಲಾಯಿತು.
ದತ್ತಿ ದಾನಿಗಳು ಮತ್ತು ಬೆಂಗಳೂರಿನ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ತಿನ ಕೋಶಾಧ್ಯಕ್ಷರಾದ ಡಾ. ಚಿಕ್ಕಕೊಮಾರಿಗೌಡ ಅವರು ಮಾತನಾಡಿ ಸಾಧನೆ ಮಾಡಿದವರಿಗೆ ಗೌರವಿಸುವ ಮೂಲಕ ನಾವು ಸಮಾಜದಲ್ಲಿ ಉತ್ತಮ ಕೆಲಸಗಳು ನಿರಂತರ ನಡೆಯುತ್ತಿರುವುದಕ್ಕೆ ಕಾರಣರಾಗಬೇಕು. ನಾವು ನಮ್ಮ ಹೆಸರನ್ನು ಉಳಿಸಿ ಹೋಗಬೇಕು ಎನ್ನಬೇಕಾದರೆ ನಮ್ಮ ಗಳಿಕೆಯ ಮುಖ್ಯವಾದ ಭಾಗವನ್ನು ಸಮಾಜಕ್ಕೆ ಸಲ್ಲಿಸ ಬೇಕು, ಸಮಸ್ತ ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿದರೆ ನಮ್ಮ ನಂತರವೂ ಹೆಸರು ಅಜರಾಮರವಾಗಿ ಇರುವುದು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಯಲುಸೀಮೆ ಪತ್ರಿಕೆಯ ಸಂಪಾದಕರಾದ ಶ್ರೀ ಸು.ತ. ರಾಮೇಗೌಡ ಅವರು ಮಾತನಾಡಿ ಸಾಹಿತ್ಯಕ್ಕೂ ಕೃಷಿಗೂ ಅವಿನಾಭಾವ ಸಂಬಂಧವಿದೆ. ಇದೇ ಕಾರಣಕ್ಕೆ ಸಾಹಿತ್ಯವನ್ನು ಕೃಷಿ ಎಂದು ಬಣ್ಣಸುವುದು. ಒಕ್ಕಲಿಗರು ಒಕ್ಕದಿರೇ ಬಿಕ್ಕುವುದು ಜಗತ್ತೆಲ್ಲಾ ಎನ್ನುವ ಸತ್ಯವನ್ನು ತಿಳಿಸಿದರು.
ಶ್ರೀಮತಿ ಲಿಂಗಮ್ಮ ಮತ್ತು ಡಾ. ಚಿಕ್ಕಕೊಮಾರಿಗೌಡ ಹಾರೋಕೊಪ್ಪ ದತ್ತಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕೆ.ಎಸ್.ಸೋಮಶೇಖರ್ ಅವರು ಮಾತನಾಡಿ ನಾವು ಪರಿಶುದ್ಧ ಎಂದು ಬಳಸುವ ಎಳನೀರು, ಮೊಟ್ಟೆ, ತಾಯಿಯ ಹಾಲು ಸೇರಿದಂತೆ ಎಲ್ಲವೂ ವಿಷಯುಕ್ತವಾಗಿದೆ. ಒಬ್ಬ ವ್ಯಕ್ತಿ ಒಂದು ಕೆ.ಜಿ ಆಹಾರ ಸ್ವೀಕರಿಸಿದರೆ ಅದರಲ್ಲಿ ಶೇ. ೨೯ ಗ್ರಾಂ ವಿಷವೇ ಇರುತ್ತದೆ. ಪಶು ಆಧಾರಿತ ಕೃಷಿ ವಾಪಸ್ ಬಂದಾಗ ಮಾತ್ರ ನಮ್ಮ ನೆಲ ನಮ್ಮ ಜಲ ನಮ್ಮ ಜೀವ ಸುರಕ್ಷಿತವಾಗಿ ಇರುವುದಕ್ಕೆ ಸಾಧ್ಯ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ. ಭ. ರಾಮಲಿಂಗ ಶೆಟ್ಟಿ ಅವರರು ಸ್ವಾಗತಿಸಿದರು. ಕೋಶಾಧ್ಯಕ್ಷರಾದ ಡಾ. ಬಿ.ಎಂ. ಪಟೇಲ್ ಪಾಂಡು ಅವರು ಕಾರ್ಯಕ್ರಮ ನಿರ್ವಹಿಸಿದರು. ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜು ಅವರು ವಂದಿಸಿದರು.